ಎತ್ತಿನಹೊಳೆ ಯೋಜನೆ ವಿರೋಧಿಸಿ ಬೃಹತ್ ಪಾದಯಾತ್ರೆ
ಮಂಗಳೂರು, ಅಕ್ಟೋಬರ್ 12 : 'ದಕ್ಷಿಣ ಕನ್ನಡ ಜನರ ವಿರೋಧವನ್ನು ಪರಿಗಣಿಸಿ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಸ್ಥಗಿತಗೊಳಿಸಬೇಕು' ಎಂದು ಒತ್ತಾಯಿಸಿರುವ ಸಂಸದ ನಳೀನ್ ಕುಮಾರ್ ಕಟೀಲ್ ಅವರು, 'ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಯಾರು ಹೋರಾಟ ಮಾಡಿದರೂ ಬಿಜೆಪಿ, ತಾವು ಬೆಂಬಲಿಸುವುದಾಗಿ' ಘೋಷಿಸಿದ್ದಾರೆ.
ಭಾನುವಾರ ರಾತ್ರಿ ಉಪ್ಪಿನಂಗಡಿಯಲ್ಲಿ 'ನೇತ್ರಾವತಿ ಉಳಿಸಿ ಪಾದಯಾತ್ರೆ'ಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು, 'ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ಮತ್ತು ವಿರೋಧವನ್ನು ಪರಿಗಣಿಸದೇ ಎತ್ತಿನಹೊಳೆ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾದರೆ ಜಿಲ್ಲೆಗೆ ಬೆಂಕಿ ಬಿದ್ದೀತು' ಎಂದು ಎಚ್ಚರಿಕೆ ನೀಡಿದರು. [ಎತ್ತಿನಹೊಳೆಗೆ ವಿರೋಧ, ಬೆಳ್ತಂಗಡಿ ಬಂದ್]

'ನೇತ್ರಾವತಿ ನದಿಯನ್ನು ಉಳಿಸಲು ಯಾವ ರೀತಿಯ ಹೋರಾಟ ಮಾಡುವುದಕ್ಕೂ ಬಿಜೆಪಿ ಸಿದ್ಧವಿದೆ. ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಯಾರು ಹೋರಾಟ ಮಾಡಿದರೂ ಬಿಜೆಪಿ ಪಕ್ಷ ಮತ್ತು ತಾವು ಬೆಂಬಲಿಸುತ್ತೇವೆ' ಎಂದು ಸಂಸದರು ಹೇಳಿದರು. [ಚಿತ್ರಗಳು : ನೇತ್ರಾವತಿ ಉಳಿಸಲು ಬೃಹತ್ ಪ್ರತಿಭಟನೆ]
ಎತ್ತಿನಹೊಳೆ ಯೋಜನೆ ವಿರೋದಿಸಿ 'ನೇತ್ರಾವತಿ ಉಳಿಸಿ ಪಾದಯಾತ್ರೆ'ಯನ್ನು ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಅಕ್ಟೋಬರ್ 10ರ ಶನಿವಾರ ಆರಂಭಿಸಲಾಗಿದೆ. ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಪಾದಯಾತ್ರೆಗೆ ಚಾಲನೆ ಸಿಕ್ಕಿದ್ದು, ಅಕ್ಟೋಬರ್ 13ರಂದು ಗುಂಡ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಸಚಿವರು ಬೆಂಬಲ ನೀಡಲಿ : 'ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿರುವ ದಕ್ಷಿಣ ಕನ್ನಡ ಭಾಗದ ನಾಲ್ವರು ಸಚಿವರು ಈ ಹೋರಾಟಕ್ಕೆ ಬೆಂಬಲ ನೀಡಬೇಕು. ಸಚಿವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬೇಕು. ಜನರ ಭಾವನೆಗಳನ್ನು ಗೌರವಿಸಿ ಈ ಹೋರಾಟವನ್ನು ಬೆಂಬಲಿಸಬೇಕು' ಎಂದು ಸಂಸದರು ಮನವಿ ಮಾಡಿದರು. [ಎತ್ತಿನಹೊಳೆ ಯೋಜನೆ ನೀರಿನ ಲಭ್ಯತೆ ಬಗ್ಗೆ ಆತಂಕ ಬೇಡ]












Click it and Unblock the Notifications