ಬಿಜೆಪಿ ಯುವ ಮೋರ್ಚಾದಿಂದ ಸೆ.7ರಂದು ಮಂಗಳೂರು ಚಲೋ
ಮಂಗಳೂರು, ಆಗಸ್ಟ್. 23 : ಬಿಜೆಪಿ ಯುವ ಮೋರ್ಚಾ ವತಿಯಿಂದ ಸೆಪ್ಟೆಂಬರ್ 7 ರಂದು 'ಮಂಗಳೂರು ಚಲೋ' ಎಂಬ ಬೈಕ್ ಜಾಥಾ ಹಮ್ಮಿಕೊಂಡಿದೆ. ಸುಮಾರು ಹತ್ತು ಸಾವಿರಕ್ಕೂ ಅಧಿಕ ಬೈಕ್ ಸವಾರರು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ಪ್ರತಾಪ್ ಸಿಂಹ ಈ ಕುರಿತು ಮಾಹಿತಿ ನೀಡಿದರು. 'ರಾಜ್ಯದಲ್ಲಿ ಈವರೆಗೆ ನಡೆದಿರುವ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆ ಖಂಡಿಸಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಮಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ' ಎಂದರು.
ಶರತ್ ಮಡಿವಾಳ ಹತ್ಯೆ ಪ್ರಕರಣ, ಬಂಧಿತರ ಸಂಖ್ಯೆ 10ಕ್ಕೆ ಏರಿಕೆ
ಈ ಮಂಗಳೂರು ಚಲೋ ಸಮಾವೇಶಕ್ಕೆ ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಸೆಪ್ಟೆಂಬರ್ 5 ಹಾಗೂ 6 ರಂದು ಹೊರಡಲಿದ್ದು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಲಿದೆ. ಈ ಜಾಥಾದಲ್ಲಿ ಹತ್ತು ಸಾವಿರ ಬೈಕ್ ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಭಾಕರ್ ಭಟ್ ವಿರುದ್ಧದ ವಿಚಾರಣೆಗೆ ಹೈ ಕೋರ್ಟ್ ತಡೆಯಾಜ್ಞೆ
ಸರ್ಕಾರದ ವಿರುದ್ಧ ವಾಗ್ದಾಳಿ : 'ಪಿಎಫ್ಐ ಹಾಗೂ ಕೆಎಫ್ ಡಿ ಸಂಘಟನೆಯ ಸಮಾಜಘಾತುಕ ಕೃತ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ, ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಂಘಟನೆಗಳನ್ನು ನಿಷೇಧಿಸುವ ಇರಾದೆ ಈ ಸರ್ಕಾರಕ್ಕೆ ಇಲ್ಲ' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಗೃಹ ಸಚಿವರಾಗಿ ರಮಾನಾಥ ರೈ: ಇನ್ನೇನು ಅಧಿಕೃತ ಘೋಷಣೆ?
'ರಾಜ್ಯದಲ್ಲಿ 11 ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆಯಾಗಿದೆ. ಈ ಹತ್ಯೆಗಳ ಹಿಂದೆ ಪಿಎಫ್ಐ ಸಂಘಟನೆ ಕೈವಾಡ ಬಯಲಾಗಿದ್ದು ಕಾರ್ಯಕರ್ತರ ಬಂಧನ ಕೂಡ ಆಗಿದೆ. ಆದರೆ, ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ' ಎಂದು ಕಿಡಿಕಾರಿದರು .
'ಪಿಎಫ್ಐನ ಸಮಾಜ ಘಾತಕ ಕೃತ್ಯದ ಬಗ್ಗೆ ತನಿಖೆ ನಡೆಸಿದ್ದ ಹಿಂದಿನ ಬಿಜೆಪಿ ಸರ್ಕಾರ 1,600 ಪಿಎಫ್ಐ ಹಾಗೂ ಕೆಎಫ್ ಡಿ ಸಂಘಟನೆಯ ಕಾರ್ಯಕರ್ತರ ಹಾಗೂ ಮುಖಂಡರ ಮೇಲೆ 175 ಪ್ರಕರಣ ದಾಖಲಿಸಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲ ಕೇಸ್ ಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಈ ಸಂಘಟನೆಗಳ ಸಮಾಜಘಾತುಕ ಕೃತ್ಯ ಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ರಾಜ್ಯದಲ್ಲಿ ಈವರೆಗೆ ನಡೆದಿರುವ ಹಿಂದೂ ಪರ ಸಂಘಟನಗಳ ಕಾರ್ಯಕರ್ತರ ಹಾಗೂ ಮುಖಂಡರ ಹತ್ಯೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು' ಎಂದು ಪ್ರತಾಪ್ ಸಿಂಹ ಒತ್ತಾಯಿಸಿದರು.