ಬಿಜೆಪಿಯವರು ಊಸರವಳ್ಳಿ ಇದ್ದ ಹಾಗೆ: ಸಿದ್ದರಾಮಯ್ಯ ವ್ಯಂಗ್ಯ
ಮಂಗಳೂರು, ಜನವರಿ 8: "ಬಿಜೆಪಿಯವರು ಊಸರವಳ್ಳಿ ಇದ್ದ ಹಾಗೆ; ಆಗಾಗ ಬಣ್ಣ ಬದಲಾಯಿಸುವವರು," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
"ಕೆಲವರಿಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬರುತ್ತದೆ ಎಂದು ಭಯವಿದೆ. ನಾನು ಸರಕಾರ ಹಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗುಜಾರಾತ್ ಹಾಗೂ ವಿದೇಶಕ್ಕೆ ತಮ್ಮ ಸ್ವಂತ ದುಡ್ಡಿನಲ್ಲಿ ಹೋಗುತ್ತಾರಾ?," ಎಂದು ಪ್ರಶ್ನಿಸಿದರು .
"ಯಡಿಯೂರಪ್ಪ ಸಿಎಂ ಇದ್ದಾಗ ಸಾಲ ಮನ್ನಾ ಮಾಡಿ ಎಂದಾಗ ನೋಟ್ ಪ್ರಿಂಟ್ ಆಗ್ತಿದೆಯಾ ಎಂದು ಕೇಳಿದ್ದರು. ಆದರೆ ಈಗ ನಾನು ಸಿಎಂ ಆದ್ರೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ಡೋಂಗಿಗಳು, ರೈತ ವಿರೋಧಿಗಳು," ಎಂದು ಮುಖ್ಯಮಂತ್ರಿಗಳು ಕಿಡಿಕಾರಿದರು.

"ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಸ್ವತಂತ್ರ ಪ್ರೇಮಿ ಎಂದಿದ್ದರು. ಆದರೆ ಇಂದು ಟಿಪ್ಪುವನ್ನು ಮತಾಂಧ ಎಂದು ಕರೆಯುತ್ತಿದ್ದಾರೆ. ಬಿಜೆಪಿಯವರು ಊಸರವಳ್ಳಿ ಇದ್ದ ಹಾಗೆ; ಆಗಾಗ ಬಣ್ಣ ಬದಲಾಯಿಸುವವರು," ಎಂದು ಹೇಳಿದ ಸಿದ್ದರಾಮಯ್ಯ, "ಯಡಿಯೂರಪ್ಪ ಅವರದು ಸೈಕಲ್, ಸೀರೆ ಬಿಟ್ಟರೆ ಜೈಲಿಗೆ ಹೋಗಿದ್ದೆ ಸಾಧನೆ," ಎಂದು ಆಕ್ರೋಶ ವ್ಯಕ್ತಪಡಿಸಿದರು .
"ಟಿಪ್ಪು ಮಹಾನ್ ದೇಶ ಪ್ರೇಮಿ. ಟಿಪ್ಪುವನ್ನು ವಿರೋಧಿಸುವ ಆರೆಸ್ಸೆಸ್ ಹಾಗೂ ಬಜರಂಗದಳದವರಿಗೆ ಕಾಮಲೆ ರೋಗ ಬಂದಿದೆ," ಎಂದು ವ್ಯಂಗ್ಯವಾಡಿದ ಅವರು, "ದ.ಕ ಜಿಲ್ಲೆಯಲ್ಲಿ ಇವರೆಲ್ಲಾ ಕೋಮುವಾದದ ಬೆಂಕಿ ಹಚ್ಚಿದ್ದಾರೆ," ಎಂದು ಕಿಡಿಕಾರಿದರು.

"ಬಿಜೆಪಿಯವರು ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ," ಎಂದು ದೂರಿದ ಅವರು, "ಬೇರೆ ಧರ್ಮದವರನ್ನು ದ್ವೇಷಿಸುವರು ಮೃಗಿಗಳು. ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆಯೇ," ಎಂದು ಪ್ರಶ್ನಿಸಿದರು.
"ಅಮಿತ್ ಶಾ ರಾಜ್ಯಕ್ಕೆ ಬಂದು ಬಿಜೆಪಿಯವರಿಗೆ ಕೋಮು ಗಲಭೆಯ ಪಾಠ ಕಲಿಸುತ್ತಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಸದಸ್ಯರಾಗಲೂ ನಾಲಾಯಕ್," ಎಂದು ಅವರು ವಾಗ್ದಾಳಿ ನಡೆಸಿದರು.












Click it and Unblock the Notifications