ಬಿಜೆಪಿ ಪ್ರತಿಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದೆ: ಯು.ಟಿ.ಖಾದರ್
ಮಂಗಳೂರು, ಡಿಸೆಂಬರ್ 26: ಈ ಬಾರಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಗೊಂದಲ ಸೃಷ್ಟಿಗೆ ಯತ್ನಿಸಿದೆ. ಕ್ಷುಲ್ಲಕ ಕಾರಣಕ್ಕೆ ಧರಣಿ ಮಾಡಿ ಕಲಾಪ ಹಾಳು ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಪ್ರತಿಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದ್ದು, ಟಿಪ್ಪು ಜಯಂತಿ ವಿಚಾರದಲ್ಲಿ ಈಗ ಚರ್ಚೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಈ ಬಗ್ಗೆ ಸಿಎಂ ಹೇಳಿಕೆ ಕೊಡಬೇಕೆಂದು ಬಿಜೆಪಿ ಸದಸ್ಯರು ಕಲಾಪದಲ್ಲಿ ಧರಣಿ ನಡೆಸಿದ್ದಾರೆ. ಬಿಜೆಪಿ ಧರಣಿಯಿಂದಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗಿಲ್ಲ. ಬೆಳಗಾವಿ ಅಧಿವೇಶನವು ಈ ಬಾರಿ ಯಶಸ್ವಿಯಾಗಿ ನಡೆದಿದೆ. 10ದಿನಗಳ ಅಧಿವೇಶನದಲ್ಲಿ 8 ರಿಂದ 9ಗಂಟೆಗಳ ಕಾಲವೂ ಕಾರ್ಯಕಲಾಪ ನಡೆದಿದೆ.

ಉತ್ತರ ಕರ್ನಾಟಕ, ಬರಗಾಲದ ಬಗ್ಗೆಯೂ ಚರ್ಚೆಯಾಗಿದೆ. ಪ್ರತಿಪಕ್ಷಗಳು ಮಾತ್ರ ಕೊನೆಯ ಎರಡು ದಿನಗಳ ಕಾಲ ಅಧಿವೇಶ ರದ್ದುಗೊಳಿಸಿವೆ. ಬಾವಿಯಲ್ಲಿ ಧರಣಿ ಕುಳಿತು ಎರಡು ದಿನಗಳ ಕಲಾಪಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಿದರು.
ರಫೇಲ್ ಯುದ್ಧ ವಿಮಾನ ಡೀಲ್ ಪ್ರಕರಣದ ಕುರಿತು ಉತ್ತರ ನೀಡಲು ಜಂಟಿ ಸಂಸತ್ ಸಮಿತಿ ರಚನೆ ಮಾಡಲಿ ಎಂದು ಆಗ್ರಹಿಸಿದ ಖಾದರ್ ಪ್ಲಾಸ್ಟಿಕ್ ವಿಮಾನ ಕೂಡ ತಯಾರು ಮಾಡದ ಕಂಪೆನಿಗೆ ಈ ವಿಮಾನ ತಯಾರಿ ಯೋಜನೆ ಯಾಕೆ? ಎಂದು ಪ್ರಶ್ನಿಸಿದರು.
ಹೊಸ ಸಚಿವರಿಗೆ ಖಾತೆ ಬಿಟ್ಟು ಕೊಡುವ ವಿಚಾರವಾಗಿ ಮಾತನಾಡಿದ ಅವರು ರಾಜ್ಯ ನಾಯಕರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಉಸ್ತುವಾರಿ ಹಾಗು ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣು ಗೋಪಾಲ್ ಹಾಗೂ ಪಕ್ಷದ ಮುಖಂಡರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಯಾವ ಖಾತೆ ಉಳಿಸಬೇಕೆಂದು ನಾನು ಇನ್ನೂ ಯೋಚನೆ ಮಾಡಿಲ್ಲ. ಎಲ್ಲಾ ಖಾತೆ ಉತ್ತಮವಾಗಿದೆ ಎಂದು ತಿಳಿಸಿದರು.












Click it and Unblock the Notifications