ಮೋದಿ ಆಗಮನ: ಕರಾವಳಿ ಬಿಜೆಪಿ ನಾಯಕರಲ್ಲಿ ಹೆಚ್ಚಿದ ರಣೋತ್ಸಾಹ
ಮಂಗಳೂರು, ಏಪ್ರಿಲ್ 12:ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 13 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಿದೆ. ಮೋದಿ ಭಾಗವಹಿಸಲಿರುವ ಬೃಹತ್ ಪ್ರಚಾರ ಸಭೆಗೆ ಬಂದರು ನಗರಿಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಗೆ ಇನ್ನೇನು ಒಂದೇ ವಾರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಮಂಗಳೂರು ತಾಲೂಕಿನ ಕಿನ್ನಿಗೋಳಿ, ಪಕ್ಷಿಕೆರೆ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಬಹಿರಂಗ ಪ್ರಚಾರ ನಡೆಸಿದರು.

ಪೇಟೆಯ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ಬಿಜೆಪಿ ಕಾರ್ಯಕರ್ತರ ಜೊತೆ ತೆರಳಿ ಪ್ರಚಾರ ಅಭಿಯಾನ ನಡೆಸಿದ್ದಾರೆ. ಕಿನ್ನಿಗೋಳಿ ಪೇಟೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೋದಿ ಪೇಟ ತೊಟ್ಟುಕೊಂಡು ಜಾಥಾ ನಡೆಸಿದ್ದಾರೆ. ಕರಾವಳಿ ಕೇಸರಿ ಪಡೆಯ ಶಕ್ತಿ ಕೇಂದ್ರವಾದರೂ, ಕೇಸರಿ ಅಭಿಯಾನ ಹೆಚ್ಚು ಕಾಣಿಸಿಕೊಂಡಿರಲಿಲ್ಲ.

ಆದರೆ ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಶಾಸಕರು, ಮುಖಂಡರು ಕಾರ್ಯಕರ್ತರ ಜೊತೆ ಮೋದಿ ಪರ ಘೋಷಣೆ ಕೂಗುತ್ತಾ ಸಾಮಾನ್ಯ ಜನರಲ್ಲೂ ಮೋದಿ ಹವಾ ಎಬ್ಬಿಸುವ ಪ್ರಯತ್ನದಲ್ಲಿದ್ದಾರೆ. ಅಭ್ಯರ್ಥಿ ನಳಿನ್ ಕುಮಾರ್ ಜೊತೆ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರ ಬಿಜೆಪಿ ಮುಖಂಡರು ಪ್ರಚಾರದಲ್ಲಿ ಭಾಗವಹಿಸಿದ್ದರು.












Click it and Unblock the Notifications