ಬಂಟ್ವಾಳ ನೈತಿಕ ಪೊಲೀಸ್ ಗಿರಿ ಪ್ರಕರಣ: ಇಬ್ಬರ ಬಂಧನ
ಮಂಗಳೂರು, ಜುಲೈ.30: ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ . ಬಂಟ್ವಾಳದ ಫರಂಗಿ ಪೇಟೆ ಎಂಬಲ್ಲಿ ಈ ಘಟನೆ ನಿನ್ನೆ ನಡೆದಿದ್ದು ಭಿನ್ನ ಕೋಮಿನ ಯುವಕ ಹಾಗು ಯುವತಿಯ ಮೇಲೆ ಯುವಕರ ತಂಡ ದಾಳಿ ನಡೆಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೇ ಮರುಕಳಿಸಿದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳದ ಅಮ್ಮೆಮಾರ್ ಗ್ರಾಮದ ನಿವಾಸಿ ಮಹಮ್ಮದ್ ಅಶ್ರಫ್ (20) ಹಾಗು ಫರಂಗಿಪೇಟೆಯ ಉಮ್ಮರ್ ಫಾರೂಕ್ (25) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಬಂಟ್ವಾಳ ತಾಲೂಕಿನ ಫರಂಗಿ ಪೇಟೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳೆಕಿಗೆ ಬಂದಿತ್ತು. ಘಟನೆ ನಡೆದ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಜನ ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮ ನಿವಾಸಿ ಸುರೇಶ ಎಂಬವರು ಬೋಟು ವ್ಯವಹಾರ ನಡೆಸುತ್ತಿದ್ದು, ಇದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಫರಂಗಿಪೇಟೆಗೆ ನಿನ್ನೆ ಸಂಜೆ ಬಂದಿದ್ದರು. ಅಲ್ಲಿ ಅವರಿಗೆ ಉಡುಪಿ ಮೂಲದ ಪರಿಚಯಸ್ಥ ಮುಸ್ಲಿಂ ಮಹಿಳೆಯೊಬ್ಬರು ಸಿಕ್ಕಿದ್ದರು. ಮಹಿಳೆ ಇಲ್ಲಿನ ಆಯುವೇ೯ದ ಔಷಧಿ ನೀಡುವ ನಾಟಿ ವೈದ್ಯ ಹಾಜಿ ಮಸ್ತಾನ ಎಂಬವರಲ್ಲಿಗೆ ಬಂದಿದ್ದರು.
ಇದೇ ವೇಳೆ ಇವರಿಬ್ಬರು ಮಾತನಾಡುವುದನ್ನು ಕಂಡ ಸ್ಥಳೀಯ ಭಿನ್ನಕೋಮಿನ ಯುವಕರು ಫರಂಗಿಪೇಟೆ ಪೇಟೆಯಿಂದ ಅನ್ಯಕೋಮಿನ ಯುವಕ ತಮ್ಮ ಧರ್ಮದ ಯುವತಿಯನ್ನು ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಲು ಯತ್ನಿಸುತ್ತಿದ್ದಾನೆ ಎಂಬ ಗಾಳಿ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಸ್ಥಳಕ್ಕೆ ಆಗಮಿಸಿ ಇಬ್ಬರ ಸುತ್ತುವರಿದು ತೀರ್ವ ಹಲ್ಲೆ ನಡೆಸಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಲಾಠಿ ಬೀಸಿ ಉದ್ರಿಕ್ತರನ್ನು ಚದುರಿಸಿದ್ದರು.











Click it and Unblock the Notifications