ಮಂಗಳೂರು: ಮಕ್ಕಳ ಕೈ ಹಿಡಿದ ಅಡಿಕೆ ಬೆಳೆ; ಸರಕಾರಿ ಶಾಲೆಗೆ ಬಂತು ಸ್ವಂತ ಬಸ್
ಮಂಗಳೂರು, ಸೆಪ್ಟೆಂಬರ್ 14: ಸರಕಾರಿ ಶಾಲೆ ಎಂಬುವುದು ಅವ್ಯವಸ್ಥೆಗಳ ಆಗರ ಎನ್ನುವುದು ಬಹುಪಾಲು ಪೋಷಕರ ಅಭಿಪ್ರಾಯ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆ ಮಾತ್ರ ಈ ಎಲ್ಲಾ ಅಪವಾದಗಳನ್ನು ಮೆಟ್ಟಿನಿಂತು ಅದ್ಭುತ ಸಾಧನೆಯನ್ನು ಮಾಡಿದೆ.
ಮಕ್ಕಳ ಪೋಷಕರು, ಊರವರ ಸಹಾಯದಿಂದ ಸರಕಾರದ ಅನುದಾನ ಕಾಯದೇ ಶಾಲೆಯ ಸ್ವಂತ ಹಣದಿಂದ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರಲು ಬಸ್ ಖರೀದಿ ಮಾಡಲಾಗಿದೆ. ಶಾಲೆಗೆ ಸೇರಿದ ಪ್ರದೇಶದಲ್ಲಿ ಊರವರು ಮತ್ತು ಶಾಲಾ ಮಕ್ಕಳು ಪ್ರೀತಿಯಿಂದ ಬೆಳೆದ ಬೆಳೆ ಈಗ ಫಸಲು ಬಿಡುತ್ತಿದ್ದು, ಇದರ ಮೊದಲ ಆದಾಯ ಶಾಲೆಯ ಆವರಣದಲ್ಲಿ ಶಾಲೆಯ ಸ್ವಂತ ಬಸ್ ಕಾಣಿಸಿಕೊಳ್ಳುವಂತೆ ಮಾಡಿದೆ.
ಪ್ರಧಾನಿ ಮೋದಿ ಊರಿನ ರೈತರಿಗೆ ಪುತ್ತೂರಿನ ಯುವಕನಿಂದ ಜೇನು ತರಬೇತಿ
ಸುಮಾರು 628 ಅಡಕೆ ಮರಗಳು ನೀಡಿದ ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಬಂಟ್ವಾಳ ತಾಲೂಕಿನ ಗಡಿಗ್ರಾಮದ ಮಿತ್ತೂರಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಶಾಲೆಗೆ ಸೇರಿದ ನಾಲ್ಕು ಎಕರೆ ಜಾಗದ ಪೈಕಿ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆಯ ಫಸಲು ಬರಲಾರಂಭಿಸಿದ್ದು, ಇದರಿಂದ ಲಭ್ಯವಾದ ಆದಾಯದಿಂದ ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ, ಸಂಜೆ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಬಸ್ ಖರೀದಿಸಲಾಗಿದೆ.
26 ಸೀಟರ್ ಬಸ್ ಖರೀದಿ
26 ಸೀಟರ್ ಬಸ್ ಇದಾಗಿದ್ದು, ಈ ಬಸ್ ನಲ್ಲಿ ಸುತ್ತಮುತ್ತಲಿನ ಊರಿನ ಸುಮಾರು 118 ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದುವರೆಗೆ ಆಟೋಗಳಲ್ಲಿ ಬರುತ್ತಿದ್ದರು. ಇನ್ನು ಬಸ್ಸಿನಲ್ಲಿ ಎರಡು ಟ್ರಿಪ್ಗಳನ್ನು ಮಾಡುವ ಮೂಲಕ ಶಾಲೆಗೆ ಬರಲಿದ್ದಾರೆ. ಮೂರು ವರ್ಷಗಳ ಹಿಂದೆ ಎಸ್ಡಿಎಂಸಿ ಆಟೋ ರಿಕ್ಷಾ ಬಾಡಿಗೆ ಗೊತ್ತು ಮಾಡಿ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡಿತ್ತು. ಇದೀಗ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಯಾಗಿದೆ. ಇದರ ಖರ್ಚುವೆಚ್ಚವನ್ನು ಪೋಷಕರು ಸಮಾನವಾಗಿ ಭರಿಸಲಿದ್ದಾರೆ ಎನ್ನುವುದು ಶಾಲೆಯ ಮುಖ್ಯೋಪಾಧ್ಯಾಯಿನಿ ಸರೋಜಾ ತಿಳಿಸಿದ್ದಾರೆ.
ಕರಾವಳಿಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ಸಂಕಷ್ಟ; ಕೃಷಿಕರು ಕಂಗಾಲು
ಕಳೆದ ವರ್ಷದಿಂದ ಅಡಕೆ ತೋಟ ಫಸಲು
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆದಂ ಮಿತ್ತೂರು ಹಾಗೂ ಇತರ ಎಸ್ಡಿಎಂಸಿ ಸದಸ್ಯರ ಜತೆಗೂಡಿ ಕೆಲ ವರ್ಷಗಳ ಹಿಂದೆ ಶಾಲೆಗೆ ಧನಸಹಾಯ ಮಾಡಿದ್ದರು. ಇದರಿಂದ ಮಾಡಿದ ತೋಟ ಕಳೆದ ವರ್ಷ ಅಡಕೆ ತೋಟ ಫಸಲು ನೀಡಲಾರಂಭಿಸಿತು. ಶಾಲೆಯ ಮೇಲೆ ಪ್ರೀತಿಯಿಟ್ಟ ಊರವರು ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಸ್ ಖರೀದಿಗೆ ನಿಧಿಸಂಚಯವಾಯಿತು ಎಂದು ಸರೋಜಾ ಹೇಳಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಶಾಲೆಯ ಸಾಧನೆ ಗಮನಿಸಿ ಖುದ್ದು ಶಾಲೆಗೆ ಆಗಮಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಬಸ್ಗೆ ಚಾಲನೆ ನೀಡಿ, ಶಾಲೆಗೆ ಮತ್ತಷ್ಟು ನೆರವುಗಳನ್ನು ಘೋಷಿಸಿದ್ದಾರೆ.
ಶಾಲಾಭಿವೃದ್ಧಿಗೆ ಮಕ್ಕಳ ಕೊಡುಗೆ
ಶಾಲೆ ಸುಮಾರು 4.15 ಎಕರೆಯಷ್ಟು ಜಾಗವನ್ನು ಹೊಂದಿದ್ದು, ಅದರಲ್ಲಿ ಒಂದು ಎಕರೆಯಷ್ಟು ಪೂರ್ತಿ ಅಡಕೆ ಬೆಳೆಯನ್ನು ಮಾಡಲಾಗಿದೆ. 2017ರಲ್ಲಿ ನೆಟ್ಟ 628 ಅಡಿಕೆ ಗಿಡಗಳು ಈಗ ಮರವಾಗಿವೆ. ಐದು ವರ್ಷಗಳ ಫಲವನ್ನು ಶಾಲಾ ಮಕ್ಕಳು ಪಡೆಯುತ್ತಿದ್ದಾರೆ. ಶಾಲೆಯ ಮಕ್ಕಳೂ ಅಡಿಕೆ ತೋಟದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಕೆಲಸಮಾಡುತ್ತಿದ್ದು, ಶಾಲೆಯ ಅಭಿವೃದ್ಧಿಗಾಗಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಲೆಯ ಶಿಕ್ಷಕ ಸಂಜೀವ ಎನ್ ಹೇಳಿದ್ದಾರೆ.
1910ರಲ್ಲಿ ನಿರ್ಮಾಣವಾಗಿರುವ ಶಾಲೆ
112 ವರ್ಷಗಳ ಇತಿಹಾಸದ ಶಾಲೆ ಇದಾಗಿದ್ದಯ,1910ನೇ ಇಸವಿಯಲ್ಲಿ ನಿರ್ಮಾಣ ಆಗಿತ್ತು. ಮಿತ್ತೂರು ಶಾಲೆಯಲ್ಲೀಗ 100ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಹಿತ ಊರವರ ಕೊಡುಗೆಯಿಂದ ಸಮರ್ಥ ಶಿಕ್ಷಕರ ತಂಡದಿಂದ ಶಾಲೆ ಪ್ರಗತಿಯತ್ತ ಮುನ್ನಡೆಯುತ್ತಿದೆ. ಒಟ್ಟಿನಲ್ಲಿ ತಮ್ಮೂರಿನ ಸರಕಾರಿ ಶಾಲೆಯ ಅಭಿವೃದ್ಧಿಗೆ ಎಲ್ಲಾ ಊರಿನ ಜನರು ಸ್ವಾರ್ಥ ರಹಿತ ಸೇವೆ ಮಾಡಿದರೆ ಎಲ್ಲಾ ಊರಿನ ಸರಕಾರಿ ಶಾಲೆ ಬೆಳೆಯಲು ಸಾಧ್ಯವಾಗಿದೆ.