ಧರ್ಮಸ್ಥಳದಲ್ಲಿ ಅನಾವರಣಗೊಂಡ ಭರತ ಚಕ್ರವರ್ತಿ ದಿಗ್ವಿಜಯ ಯಾತ್ರೆ
ಮಂಗಳೂರು, ಫೆಬ್ರವರಿ 13: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾ ಮಸ್ತಕಾಭಿಷೇಕದ ಸಂಭ್ರಮ ದಿನದಿಂದ ದಿನಕ್ಕೆ ಕಳೆಕಟ್ಟುತ್ತಲೇ ಇದೆ. ಧರ್ಮಸ್ಥಳ ಇಂದು ಅಕ್ಷರಶಃ ಆಯೋಧ್ಯಾಪುರವಾಗಿ ಬದಲಾಗಿತ್ತು.
ರಾಜ ಮಾದಿಗರ ಮೆರವಣಿಗೆ, ಎಲ್ಲೆಲ್ಲೂ ಜಯಘೋಷ, ವಾದ್ಯ ಡೋಲುಗಳದ್ದೇ ಸದ್ದು. ಚಕ್ರರತ್ನ ಪಡೆದ ಭರತ ಚಕ್ರವರ್ತಿ ವಿಶ್ವ ಗೆಲ್ಲಲು ದಿಗ್ವಿಜಯ ಯಾತ್ರೆ ಕೈಗೊಂಡಿದ್ದ. ಭರತ ಚಕ್ರವರ್ತಿಯ ದಿಗ್ವಿಜಯ ಯಾತ್ರೆಯ ಪರಿಕಲ್ಪನೆಯನ್ನು ಧರ್ಮಸ್ಥಳದಲ್ಲಿ ಇಂದು ತೆರೆದಿಡಲಾಯಿತು.
ಆಕರ್ಷಕವಾದ ಅಯೋಧ್ಯೆ ಅಸ್ಥಾನ, ಅಸ್ಥಾನದ ಅಧಿಪತಿ ಭರತನ ಅರಮನೆಯ ಆಯುಧಗಾರದಲ್ಲಿ ಹುಟ್ಟಿಕೊಳ್ಳುವ ಚಕ್ರರತ್ನ, ನಂತರ ಲೋಕವನ್ನೇ ಗೆಲ್ಲುವುದಕ್ಕೆ ಭರತನ ದಿಗ್ವಿಜಯ ಯಾತ್ರೆ. ಚರಿತ್ರೆಯ ಈ ದೃಶ್ಯಾವಳಿಗಳು ಧರ್ಮಸ್ಥಳದಲ್ಲಿ ಕಂಡುಬಂದಿತ್ತು.
ಬಾಹುಬಲಿ ಮಹಾಮಸ್ತಕಾಭಿಷೇಕ:ಧರ್ಮಸ್ಥಳಕ್ಕೆ ಹರಿದುಬರುತ್ತಿದೆ ಭಕ್ತರ ದಂಡು
ಭಗವಾನ್ ಬಾಹುಬಲಿಯ ಚತುರ್ಥ ಮಹಾಮಸ್ತಕಾಭಿಷೇಕದ ಅಂಗವಾಗಿ ಬಾಹುಬಲಿ ಜೀವನ ಚರಿತ್ರೆಯನ್ನು ಮತ್ತೆ ವೇದಿಕೆಯಲ್ಲಿ ತೋರಿಸಬೇಕೆಂಬ ಉದ್ದೇಶದಿಂದ ಪಂಚಮಹಾವೈಭವ ರೂಪಕ ನಡೆಯುತ್ತಿದೆ. ಇದಕ್ಕಾಗಿ ಧರ್ಮಸ್ಥಳದಲ್ಲಿ ಕೃತಕವಾಗಿ ಅಯೋಧ್ಯೆ ನಗರವನ್ನು ನಿರ್ಮಿಸಿ, ಇಲ್ಲಿ ಬಾಹುಬಲಿಯ ಜೀವನ ಚರಿತ್ರೆಯನ್ನು ರೂಪಕದ ಮೂಲಕ ತೋರಿಸಲಾಗುತ್ತಿದೆ.
ಪಂಚಮಹಾವೈಭವದ ಮುಂದಿನ ಭಾಗವಾಗಿ ಇಂದು ಭರತನ ದಿಗ್ವಿಜಯಯನ್ನು ಅಮೋಘವಾಗಿ ತೋರಿಸಲಾಯಿತು. ಮುಂದೆ ಓದಿ...
ಮನಮುಟ್ಟುವಂತೆ ಪ್ರದರ್ಶನ
ಅಯೋಧ್ಯೆಯ ಅಧಿಪತಿ ಭರತನ ಆಸ್ಥಾನದ ಆಯುಧಗಾರದಲ್ಲಿ ಚಕ್ರರತ್ನ ಹುಟ್ಟಿಕೊಳ್ಳುವುದು. ನಂತರದಲ್ಲಿ ಆಸ್ಥಾನದ ಮಂತ್ರಿಗಳ ಸಲಹೆಯಂತೆ ದಿಗ್ವಿಜಯಯನ್ನು ನಡೆಸುವುದನ್ನು ಅದ್ಭುತವಾಗಿ ಮನಮುಟ್ಟುವಂತೆ ಪ್ರದರ್ಶಿಲಾಯಿತು.
ಧರ್ಮಸ್ಥಳದಲ್ಲಿ ಅಯೋಧ್ಯೆಯ ಗತ ವೈಭವ ಕಂಡು ಪ್ರೇಕ್ಷಕರು ಖುಷ್
ನೇತ್ರಾವತಿವರೆಗೆ ಮೆರವಣಿಗೆ
ಭರತನ ಸೈನ್ಯದ ಸಾಮರ್ಥ್ಯವನ್ನು ಸಾರುವ ಪದಾತಿದಳ, ಅಶ್ವಪಡೆಗಳು ಸಾಲು ಸಾಲಾಗಿ ಸಾಗುವ ಮೂಲಕ ಸಾವಿರಾರು ಪ್ರೇಕ್ಷಕರ ಗಮನ ಸೆಳೆಯಿತು. ಭರತನ ದಿಗ್ವಿಜಯ ಯಾತ್ರೆಯು ಕೃತಕವಾಗಿ ನಿರ್ಮಿಸಿದ ಅಯೋಧ್ಯೆ ನಗರದಿಂದ ನೇತ್ರಾವತಿವರೆಗೆ ಮೆರವಣಿಗೆ ಮೂಲಕ ಸಾಗಿತು.
ಲೇಸರ್ ಬೆಳಕಲ್ಲಿ ಮೂಡಿದ ಬಾಹುಬಲಿ ಜೀವನ ಚರಿತ್ರೆಗೆ ನಟ ರಮೇಶ್ ಪ್ರಶಂಸೆ
ಯಾತ್ರೆಯಲ್ಲಿ ವಿವಿಧ ಕಲಾ ಪ್ರಕಾರಗಳು
ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರ, ಸೈನಿಕರು ಸೇರಿ ಒಂದು ಸಾವಿರಕ್ಕೂ ಅಧಿಕ ಕಲಾವಿದರು ಭಾಗವಹಿಸಿದರು. ನಾಡಿನ ವಿವಿಧ ಕಲಾ ಪ್ರಕಾರಗಳು ಯಾತ್ರೆಯಲ್ಲಿತ್ತು. ಐದು ಸಾವಿರ ವರ್ಷಗಳ ಹಿಂದೆ ನಡೆದಿದ್ದ ಭರತ ಚಕ್ರವರ್ತಿಯ ದಿಗ್ವಿಜಯ ಯಾತ್ರೆಯನ್ನು ನೆನಪಿಸುವಂತಿತ್ತು.
ಮಾಹಿತಿ ನೀಡುವ ಆಕರ
ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಅವರ ಮುತುವರ್ಜಿಯಲ್ಲಿ ರೂಪ ಪಡೆದಿದ್ದ ಈ ಮೆರವಣಿಗೆ ಅವರ ಪರಿಕಲ್ಪನೆಯಂತೆ ಮೂಡಿ ಬಂದಿತು. ಬಾಹುಬಲಿಯ ಜೀವನ ಚರಿತ್ರೆಯನ್ನು ತಿಳಿಯದ ಹಾಗೂ ತಿಳಿಯಲು ಉತ್ಸುಕರಾಗಿದ್ದ ಸಾವಿರಾರು ಜನರಿಗೆ ಮಾಹಿತಿ ನೀಡುವ ಆಕರವಾಗಿಯೂ ಈ ಮೆರವಣಿಗೆ ಕಂಡು ಬಂದಿತ್ತು.