Mangaluru Blast Case : ಮಂಗಳೂರು ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಕ್ ವಿಚಾರಣೆ ನಡೆಸಲಿರುವ ಎನ್ಐಎ ತಂಡ
ಮಂಗಳೂರು, ನವೆಂಬರ್, 22: ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದೊಡ್ಡ ಮಟ್ಟದಲ್ಲಿ ಕೃತ್ಯ ನಡೆಸಲು ಶಾರಿಕ್ ಯೋಜನೆ ರೂಪಿಸಿದ್ದು, ಉಗ್ರರ ಲಿಂಕ್ ಇರುವ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಅನುಮಾನ ಮೂಡಿದೆ ಬಂದಿದೆ. ಶಾರಿಕ್ನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ.
ಆಟೋದಲ್ಲಿ ಸ್ಪೋಟಕ್ಕೆ ಕಾರಣಕರ್ತನಾಗಿದ್ದಾನೆ ಎನ್ನಲಾದ ಶಾರಿಕ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಸ್ಫೋಟದಲ್ಲಿ ಗಾಯಗೊಂಡ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸ್ಪೋಟದ ಹಿಂದೆ ದೊಡ್ಡದಾದ ಜಾಲ ಇರಬಹುದು ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆ ಕಳೆದ ಎರಡು ದಿನಗಳಿಂದ ಪೊಲೀಸರು ಅಲರ್ಟ್ ಆಗಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಗ್ರಾ.ಪಂ ಚುನಾವಣೆ: ಮತದಾರರಿಗೆ ಹಂಚಲು ತಂದಿದ್ದ 130ಕ್ಕೂ ಹೆಚ್ಚು ಕುಕ್ಕರ್ ಗಳು ವಶ
ಎನ್ಐಎಯಿಂದ ತನಿಖೆ
ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ರಾಷ್ಟ್ರೀಯ ತನಿಖಾದಳ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಮುಂದೆ ಆಗಬಹುದಾದ ಅವಘಡಗಳನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಪೊಲೀಸ್ ಇಲಾಖೆ ಸೂಕ್ರ ಕ್ರಮಕ್ಕೆ ಮುಂದಾಗಿದೆ. ಹೀಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಶಾರಿಕ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳ ಕಾತುರದಿಂದ ಕುಳಿತಿದೆ.
ಶಾರಿಕ್ಗೆ ಶೇಕಡಾ 40ರಷ್ಟು ಸುಟ್ಟ ಗಾಯ
ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಶಾರಿಕ್ ಎಂಬಾತನಿಗೆ ಶೇಕಡಾ 40ರಷ್ಟು ಸುಟ್ಟ ಗಾಯವಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾರಿಕ್ಗಾಗಿ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಇಲಾಖೆ ಅಧಿಕಾರಿಗಳು ಶೋಧ ಮಾಡುತ್ತಿದ್ದರು. ಶಂಕಿತ ಉಗ್ರ ವಿಧ್ವಂಸಕರ ಜೊತೆ ಸೇರಿ ಹಲವುಕಡೆ ಕುಕೃತ್ಯ ನಡೆಸುವ ಸಾಧ್ಯತೆ ಇತ್ತು. ಇದೆ ಕಾರಣಕ್ಕೆ ತೀರ್ಥಹಳ್ಳಿಯ ಶಾರಿಕ್ ಪೊಲೀಸರ ಪಾಲಿಗೆ ಮೋಸ್ಟ್ ವಾಂಟೆಡ್ ಆಗಿದ್ದ. ಅಲ್ಲಲ್ಲ ತಲೆಮರೆಸಿಕೊಂಡು ತಿರುಗುತ್ತಿದ್ದ. ಹುಬ್ಬಳ್ಳಿಯ ರೈಲ್ವೆ ಉದ್ಯೋಗಿಯಾಗಿರುವ ಎಂಬುವವರ ಆಧಾರ್ ಕಾರ್ಡ್ಗೆ ತನ್ನ ಫೋಟೋ ಹಾಕಿಕೊಂಡು ಮೈಸೂರಿನಲ್ಲಿ ಅದೇ ವಿಳಾಸ ನೀಡಿ ರೂಮ್ ಬಾಡಿಗೆ ತೆಗೆದುಕೊಂಡಿದ್ದ. ಈತ ಇದೀಗ ಮಂಗಳೂರಲ್ಲಿ ಶನಿವಾರ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಮತ್ತೆ ಸುದ್ದಿಯಾಗಿದ್ದಾನೆ.
2020ರ ನವೆಂಬರ್ ತಿಂಗಳ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಮೊಹಮ್ಮದ್ ಶಾರಿಕ್ ಪ್ರಮುಖ ಆರೋಪಿಯಾಗಿದ್ದ. ಲಷ್ಕರ್-ಎ-ತೊಯ್ಬ ಉಗ್ರ ಸಂಘಟನೆ ಪರವಾಗಿ ಗೋಡೆ ಬರಹ ಬರೆದಿದ್ದು, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ತನಿಖೆ ನಡೆಸಿದ್ದ ಪೊಲೀಸರು ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್, ಆತನ ಸಹವರ್ತಿ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಜ್ ಮುನೀರ್ ಅಹಮ್ಮದ್ ಎಂಬಾತನನ್ನು ಬಂಧಿಸಿದ್ದರು. ಇವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳು ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಆರೋಪಿಗಳಿಗೆ ಜಾಮೀನು ಲಭಿಸಿತ್ತು.
ಶಂಕಿತ ಉಗ್ರ ಶಾರಿಕ್ ಹಿನ್ನೆಲೆ
ಶಾರಿಕ್ ಮೂಲತಃ ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯವನು. ಶಾಲಾ ವಿದ್ಯಭ್ಯಾಸದ ನಂತರ ಮಂಗಳೂರಿಗೆ ತೆರಳಿ ನೆಲೆಸಿದ್ದ. ತಾಯಿ ತೀರಿಕೊಂಡಿದ್ದರಿಂದ ಶಾರಿಕ್ ತಂದೆ ಮರು ವಿವಾಹವಾಗಿದ್ದರು. ಸ್ವಲ್ಪ ಸಮಯದ ಬಳಿಕ ಶಾರಿಕ್ ಮಂಗಳೂರಿನಿಂದ ತೀರ್ಥಹಳ್ಳಿಗೆ ಬಂದು ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಮತ್ತೆ ಸ್ವಲ್ಪ ದಿನಗಳ ನಂತರ ಊರು ಬಿಟ್ಟಿದ್ದ. 2022ರ ಆಗಸ್ಟ್ ತಿಂಗಳಲ್ಲಿ ಸಾರ್ವಕರ್ ಫ್ಲೆಕ್ಸ್ ವಿವಾದದಲ್ಲಿ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿಯಲಾಗಿತ್ತು. ಆಗ ಪ್ರಕರಣದ ವಿಚಾರಣೆ ವೇಳೆ ಮೊಹಮ್ಮದ್ ಶಾರಿಕ್ ಹೆಸರು ಮುನ್ನಲೆಗೆ ಬಂದಿತ್ತು. ತನಿಖೆ ನಡೆಸಿದಾಗ ಶಿವಮೊಗ್ಗದಲ್ಲಿ ಬಾಂಬ್ ತಯಾರಿ, ಪ್ರಯೋಗಿಕ ಸ್ಫೋಟ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಶಾರಿಕ್ ಸಹಚರರಾದ ತೀರ್ಥಹಳ್ಳಿಯ ಮಾಜ್ ಮುನೀರ್ ಅಹಮ್ಮದ್ ಮತ್ತು ಶಿವಮೊಗ್ಗದ ಸಯ್ಯದ್ ಯಾಸೀನ್ ಎಂಬಾತನನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಶಾರಿಕ್ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.
ನಾಲ್ವರು ಶಂಕಿತರ ವಿಚಾರಣೆ
ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಉಗ್ರ ಸಂಘಟನೆಯಿಂದ ಶಾರಿಕ್ ಪ್ರಭಾವಿತನಾಗಿದ್ದ ಎಂದು ಹೇಳಲಾಗುತ್ತಿದೆ. ತೀರ್ಥಹಳ್ಳಿಯ ಮತೀನ್ ಅಹಮ್ಮದ್ ತಾಹ ಎಂಬಾತನ ಸಹಚರ ಎಂದು ಶಂಕಿಸಲಾಗಿದೆ. ತಲೆಮರೆಸಿಕೊಂಡಿರುವ ಮತೀನ್ ಅಹಮ್ಮದ್ ಐಎಸ್ಐಎಸ್ ಸಂಘಟನೆಯಿಂದ ಪ್ರಭಾವಿತನಾಗಿದ್ದ. ಸಂಘಟನೆಯ ಅಲ್ ಹಿಂದ್ ಘಟಕದ ಪ್ರಮುಖ ಸದಸ್ಯನಾಗಿದ್ದಾನೆ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಅಲ್ ಹಿಂದ್ ಘಟಕ ಸಕ್ರಿಯವಾಗಿದೆ. ಇದೆ ಘಟಕದ ಭಾಗವಾಗಿ ಮೊಹಮ್ಮದ್ ಶಾರಿಕ್ ಕೆಲಸ ಮಾಡುತ್ತಿದ್ದ ಎಂಬ ಅನುಮಾನವಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಶಾರಿಕ್ ತಮಿಳುನಾಡು, ಕೇರಳದಲ್ಲೆಲ್ಲಾ ತಲೆಮರಿಸಿಕೊಂಡಿದ್ದ. ತಮಿಳುನಾಡಿನ ಕೊಯಂಬತ್ತೂರಿನಲ್ಲಿ ತಲೆಮರೆಸಿಕೊಂಡಿದ್ದ ಈತ ಅಲ್ಲಿ ಸಿಮ್ ಖರೀದಿಸಿದ್ದ. ನಂತರ ಮೈಸೂರಿಗೆ ಬಂದು ಮೇಟಗಳ್ಳಿ ಬಳಿಯ ಲೋಕನಾಯಕ ನಗರದಲ್ಲಿ ರೂಮ್ ಒಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದ. ಅಲ್ಲೇ ಮೊಬೈಲ್ ರಿಪೇರಿ ಮಾಡುವ ತರಬೇತಿ ಪಡೆದಿದ್ದ. ನಂತರ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಭೀತಿ ಹುಟ್ಟಿಸುವ ಕೃತ್ಯ ಎಸೆಗಲು ಸಜ್ಜಾಗಿದ್ದ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೈಸೂರು, ಮಂಗಳೂರು ಸೇರಿ ನಾಲ್ವರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.