ವಾಚ್ ಮನ್ ಕುಟುಂಬದ ಮೇಲೆ ಮಂಗಳೂರು ಮೇಯರ್ ಕರಾಟೆ, ಜನರ ತರಾಟೆ
ಮಂಗಳೂರು, ಅಕ್ಟೋಬರ್ 27 : ಮಂಗಳೂರು ಮೇಯರ್ ಕವಿತಾ ಸನಿಲ್ ಅವರು ವಾಚ್ ಮನ್ ಒಬ್ಬರ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ತಡವಾಗಿ ಕೇಳಿಬಂದಿದೆ.
ಕವಿತಾ ಸನಿಲ್ ತಾವು ವಾಸಿಸುವ ಫ್ಲ್ಯಾಟ್ ನ ವಾಚ್ ಮನ್ ಕುಟುಂಬದ ಮೇಲೆ ಕರಾಟೆ ಪ್ರಯೋಗ ಮಾಡಿದ ಘಟನೆಯಿದು ಎನ್ನಲಾಗಿದೆ.

ಬಿಜೈ ರೋಡ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ಮೇಯರ್, ಕ್ಷುಲ್ಲಕ ಕಾರಣಕ್ಕೆ ಅಲ್ಲಿನ ವಾಚ್ ಮನ್ ನ ಹೆಂಡತಿ ಮತ್ತು ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮೇಯರ್ ಕವಿತಾ ಊರಲ್ಲಿ ಇರಲಿಲ್ಲ. ಈ ಕಾರಣಕ್ಕೆ ವಾಚ್ ಮನ್ ಪುಂಡಲಿಕ ಅವರ ಪತ್ನಿ ಕಮಲಾ ಅವರು ಮೇಯರ್ ಮಗುವನ್ನು ನೋಡಿಕೊಳ್ಳುತ್ತಾ ಇದ್ದರು.
ಮೇಯರ್ ಕವಿತಾರ ಮಗಳು ಮತ್ತು ವಾಚ್ ಮನ್ ನ ಇಬ್ಬರು ಮಕ್ಕಳು ಆಟವಾಡುತ್ತಿದ್ದರು. ಪಟಾಕಿ ಹೊಡೆಯುವ ಸಂದರ್ಭದಲ್ಲಿ ಮೇಯರ್ ಮಗಳಿಗೆ ವಾಚ್ ಮನ್ ಗದರಿಸಿದ್ದರು ಎಂದು ಹೇಳಲಾಗಿದೆ. ಮಗಳನ್ನು ಗದರಿಸಿದ್ದಕ್ಕಾಗಿ ವಾಚ್ ಮನ್ ಹೆಂಡತಿ ಮತ್ತು ಮಗುವಿನ ಮೇಲೆ ಕವಿತಾ ಸನಿಲ್ ದರ್ಪ ತೋರಿದ್ದಾರೆ.

ಕಮಲಾರ ಜುಟ್ಟು ಹಿಡಿದು ಹಲ್ಲೆ ನಡೆಸಿದ್ದಲ್ಲದೇ ಮಗುವನ್ನು ಎತ್ತಿ ಬಿಸಾಡಿದ್ದಾರೆ. ಮೇಯರ್ ಕ್ರೌರ್ಯವನ್ನು ಪ್ರಶ್ನಿಸಿದ ವಾಚ್ ಮನ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ಷುಲ್ಲಕ ಜಗಳದಲ್ಲಿ ಮೇಯರ್ ಕವಿತಾ ಸನಿಲ್ ತಾವು ಕಲಿತ ಕರಾಟೆಯನ್ನೂ ಪ್ರಯೋಗಿಸಿದ್ದಾರೆ ಎಂಬ ಆರೋಪವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೇಯರ್ ಅಮಾಯಕ ಕುಟುಂಬದ ಮೇಲೆ ದರ್ಪ ತೋರಿದ್ದಾರೆ ಎಂಬ ಆರೋಪಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಈ ಆರೋಪವನ್ನು ಕವಿತಾ ತಳ್ಳಿಹಾಕಿದ್ದಾರೆ.












Click it and Unblock the Notifications