ಪಶ್ಚಿಮ ವಲಯ ಐಜಿಪಿಯಾಗಿ ಅರುಣ್ ಚಕ್ರವರ್ತಿ ಅಧಿಕಾರ ಸ್ವೀಕಾರ
ಮಂಗಳೂರು, ಮೇ 31 : ಪಶ್ಚಿಮ ವಲಯದ ನೂತನ ಐಜಿಪಿಯಾಗಿ ಜೆ. ಅರುಣ್ ಚಕ್ರವರ್ತಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಮೇ 20ರಂದು ಸರ್ಕಾರ ಅರುಣ್ ಚಕ್ರವರ್ತಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಸೋಮವಾರ ಅರುಣ್ ಚಕ್ರವರ್ತಿ ಅವರು ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಅರುಣ್ ಚಕ್ರವರ್ತಿ ಅವರನ್ನು ಅಭಿನಂದಿಸಿದರು. ಬೆಂಗಳೂರು ಕೇಂದ್ರ ವಲಯದ ಐಜಿಪಿಯಾಗಿದ್ದ ಅರುಣ್ ಚಕ್ರವರ್ತಿ ಅವರನ್ನು ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. [ಪೊಲೀಸ್ ಇಲಾಖೆಗೆ ಸರ್ಜರಿ, 18 ಐಪಿಎಸ್ ಅಧಿಕಾರಿಗಳ ವರ್ಗಾವಣೆ]

ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಚಕ್ರವರ್ತಿ ಅವರು, 'ಈ ಭಾಗದಲ್ಲಿ ಕೆಲಸ ಮಾಡುವುದು ಸವಾಲು. 1996-97ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರ್ ಆಗಿ ಸೇವೆ ಸಲ್ಲಿಸಿದ್ದೇನೆ. ಈ ಜಿಲ್ಲೆ ತಮಗೆ ಹೊಸತಲ್ಲ' ಎಂದರು. [ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಮಂಗಳೂರು ಎಸ್ಪಿ ಭರವಸೆ]
ನಕ್ಸಲ್ ಸಮಸ್ಯೆಯ ಕುರಿತು ಮಾತನಾಡಿದ ಅವರು, 'ನಾನು ಹಿಂದೆ ಕೆಲಸ ಮಾಡಿದ ರಾಯಚೂರು, ಶಿವಮೊಗ್ಗದಲ್ಲಿಯೂ ನಕ್ಸಲ್ ಸಮಸ್ಯೆ ಇತ್ತು. ಈ ಭಾಗದಲ್ಲಿನ ನಕ್ಸಲ್ ಸಮಸ್ಯೆ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ' ಎಂದು ಹೇಳಿದರು.

ಅರುಣ್ ಚಕ್ರವರ್ತಿ ಅವರ ಕುರಿತು : ಅರುಣ್ ಚಕ್ರವರ್ತಿ ಅವರು ಮೂಲತಃ ಚಿತ್ರದುರ್ಗದವರು. ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಅವರು, ಬೆಂಗಳೂರು ವಿವಿಯಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1990-1995ರಲ್ಲಿ ಕಸ್ಟಮ್ಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ಆರಂಭಿಸಿದ ಅವರು, ಶಿವಮೊಗ್ಗ ಮತ್ತು ರಾಯಚೂರಿನಲ್ಲಿ ಕೆಲಸ ನಿರ್ವಹಿಸಿದ್ದಾರೆ.












Click it and Unblock the Notifications