ಕಬೀರ್ ಶೂಟೌಟ್ ತನಿಖಾ ವರದಿ ಬಹಿರಂಗ
ಮಂಗಳೂರು, ಏ.30: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತನಿಕೋಡು ಅರಣ್ಯ ಚೆಕ್ ಪೋಸ್ಟ್ ಬಳಿ ನಡೆದ ಶೂಟೌಟ್ ಪ್ರಕರಣದ ಪ್ರಥಮ ತನಿಖಾ ವರದಿ ಹೊರಬಿದಿದ್ದೆ. 23 ವರ್ಷದ ಮಹಮ್ಮದ್ ಕಬೀರ್ ಎಂಬ ಕೃಷ್ಣಾಪುರದ ಯುವಕನ ಹತ್ಯೆ ವಿವರಗಳು ಈಗ ಅಧಿಕೃತವಾಗಿ ಲಭ್ಯವಿದೆ.
ಏ.19ರಂದು ನಕ್ಸಲ್ ನಿಗ್ರಹ ಪಡೆ ಯೋಧ ನವೀನ್ ನಾಯಕ್ ಎಂಬುವರು ಕಬೀರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆದರೆ, ಕಬೀರ್ ಎದೆಗೆ ಗುಂಡು ಹಾರಿತ್ತು ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಈಗ ಬಂದಿರುವ ವರದಿ ಪ್ರಕಾರ ಕಬೀರ್ ಎದೆಗೆ ಗುಂಡು ತಗುಲಿಲ್ಲ, ಬದಲಿಗೆ ಬೆನ್ನಿಗೆ ಮೂರು ಗುಂಡುಗಳು ಬಿದ್ದಿವೆ. ಕಬೀರ್ ಓಡಿ ಹೋಗಲು ಯತ್ನಿಸಿದಾಗ ಸುಮಾರು ಐದು ಅಡಿ ಅಂತರದಿಂದ ಎಕೆ47 ನಿಂದ ಮೂರು ಗುಂಡುಗಳು ಆತನ ಬೆನ್ನು ಸೀಳಿದೆ.
ಘಟನೆ ವಿವರ: ಶೃಂಗೇರಿ ಹಾಗೂ ತೀರ್ಥಹಳ್ಳಿಯಲ್ಲಿ ಜಾನುವಾರುಗಳ ಖರೀದಿ ಮುಗಿಸಿಕೊಂಡು ಸುಮಾರು 21 ಜಾನುವಾರುಗಳನ್ನು ಶೃಂಗೇರಿ -ಕಾರ್ಕಳ ಮಾರ್ಗವಾಗಿ ಮಂಗಳೂರಿನ ಕಡೆಗೆ ಕರೆದೊಯ್ಯಲಾಗಿತ್ತು. ಜಾನುವಾರು ಖರೀದಿ, ಸಾಗಾಟಕ್ಕೆ ಪರವಾನಗಿ ಪರೀಕ್ಷೆ ಹಾಗೂ ನಕ್ಸಲ್ ಪೀಡಿತ ಪ್ರದೇಶವಾದ್ದರಿಂದ ಎಎನ್ ಎಫ್ ಸಿಬ್ಬಂದಿಗಳು ತನಿಕೋಡು ಚೆಕ್ ಪೋಸ್ಟ್ ಬಳಿ ತಪಾಸಣೆಗಾಗಿ ವಾಹನವನ್ನು ನಿಲ್ಲಿಸಿದ್ದಾರೆ.
ದಾಖಲಾತಿ ಪರೀಕ್ಷೆ ವೇಳೆ ಕಬೀರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಎಎನ್ ಎಫ್ ಸಿಬ್ಬಂದಿ ನವೀನ್ ನಾಯ್ಕ್ ಹಾಗೂ ಮತ್ತೊಬ್ಬ ಸಿಬ್ಬಂದಿ ಆತನನ್ನು ಹಿಡಿಯಲು ಹಿಂದೆ ಓಡಿದ್ದಾರೆ. ನಕ್ಸಲ್ ಇರಬಹುದು ಎಂಬ ಶಂಕೆಯಿಂದ ನವೀನ್ ಅವರು ಮೂರು ಬಾರಿ ಗುಂಡು ಹಾರಿಸಿದ್ದಾರೆ. ಕಬೀರ್ ಕಸಿನ್ ರಫೀಕ್, ಡ್ರೈವರ್ ಪ್ರಮೋದ್ ಸುರಕ್ಷಿತವಾಗಿ ಮಂಗಳೂರು ತಲುಪಿದ್ದಾರೆ. ಸರಫರಾಜ್ ನಾಪತ್ತೆಯಾಗಿದ್ದಾರೆ. ನಂತರ ಏನಾಯ್ತು? ಎಎನ್ಎಫ್ ಸಿಬ್ಬಂದಿ ವಿರುದ್ಧ ಕೇಸು ತಿರುಗಿದ್ದು ಹೇಗೆ? ಎರಡು ಜಿಲ್ಲೆಗಳಲ್ಲಿ ಒಡಕು ಮೂಡಿದ್ದು ಏಕೆ? ಮುಂದೆ ಓದಿ...

ಕಬೀರ್ ಹಾಗೂ ಸಹಚರರ ಮೇಲೆ ಕೇಸ್
ನಂತರ ಶೃಂಗೇರಿ ಪೊಲೀಸರು ಐಪಿಸಿ ಸೆಕ್ಷನ್ 143, 147, 148 ಹಾಗೂ 379 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಕಬೀರ್ ಹಾಗೂ ಆತನ ಸಹಚರರು ಜಾನುವಾರುಗಳನ್ನು ಕದ್ದು ಮಾರಾಟಕ್ಕೆ ತೆರಳುತ್ತಿದ್ದರು ಎನ್ನಲಾಗಿತ್ತು. ನಂತರ ಮಂಗಳೂರಿನ ಶಾಸಕ ಮೋಯಿದ್ದೀನ್ ಬಾವಾ, ಸಚಿವ ಯುಟಿ ಖಾದರ್ ಮಧ್ಯ ಪ್ರವೇಶದಿಂದ ಕಬೀರ್ ವಿರುದ್ಧದ ಕೇಸ್ ತಿರುವು ಪಡೆದುಕೊಂಡಿತು.

ಸಿಐಡಿ ತನಿಖೆಗೆ ಕೆಜೆ ಜಾರ್ಜ್ ಆದೇಶ
ಕಬೀರ್ ಶೂಟೌಟ್ ಪ್ರಕರಣವನ್ನು ಸಿಐಡಿಗೆ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಕೆಜೆ ಜಾರ್ಜ್ ಘೋಷಿಸಿದರು. ಸಿದ್ದರಾಮಯ್ಯ ಸರ್ಕಾರ ಮೃತ ಕಬೀರ್ ಕುಟುಂಬಕ್ಕೆ 5 ಲಕ್ಷ ರು ಪರಿಹಾರ ಧನ ಘೋಷಿಸಿತು. ಅನೇಕ ಸಂಘಟನೆಗಳು 10 ರಿಂದ 20 ಲಕ್ಷ ರು ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದವು.

ಎಎನ್ ಎಫ್ ಸಿಬ್ಬಂದಿ ಮೇಲೆ ತನಿಖೆ ಏಕೆ?
ಶೃಂಗೇರಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್ಎಫ್ ಸಿಬ್ಬಂದಿ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ಸರ್ಕಾರ ಹಿಂಪಡೆಯಬೇಕು ಎಂದು ಮಾಜಿ ಸಚಿವ ಸಿಟಿ ರವಿ ಆಗ್ರಹಿಸಿದ್ದಾರೆ. ಎಎನ್ಎಫ್ ಗುಂಡಿಗೆ ಬಲಿಯಾದ ಕಬೀರ್ ಅಮಾಯನಕಲ್ಲ. ಶೂಟೌಟ್ ನಲ್ಲಿ ಮೃತಪಟ್ಟ ಕಬೀರ್ ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ. ಮೂಡಬಿದರೆ, ಸುರತ್ಕಲ್ ಮುಂತಾದ ಕಡೆ ಜಾನುವಾರುಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಿದ ಆರೋಪವನ್ನು ಹೊತ್ತಿದ್ದ. ಅವರು ಸತ್ಯವಂತನಾದರೆ ಚೆಕ್ ಪೋಸ್ಟ್ ಬಳಿ ಹೆದರಿ ಓಡಿದ್ದು ಏಕೆ ಎಂದು ಸಿಟಿ ರವಿ ಪ್ರಶ್ನಿಸಿದರು

ಸಮರ್ಥ ಸಿಬ್ಬಂದಿ ನವೀನ್ ನಾಯ್ಕ್
ನಕ್ಸಲ್ ನಿಗ್ರಹ ಪಡೆಯ ಪೇದೆ ನವೀನ್ ಜಿ ನಾಯಕ್ ಅವರು 2012ರಲ್ಲಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಪಡೆದ ಸಮರ್ಥ ಯೋಧ. ನಕ್ಸಲ್ ಎನ್ ಕೌಂಟರ್ ಮಾಡುವುದರಲ್ಲಿ ನಿಪುಣ. ಆದರೆ, ಕಬೀರ್ ಶೂಟೌಟ್ ನಿಂದಾಗಿ ಏ.25ರಂದು ಬಂಧಿಸಲ್ಪಟ್ಟು ಮೇ.3 ರ ತನಕ ನ್ಯಾಯಾಂಗ ಬಂಧನ ಅನುಭವಿಸುತ್ತಿದ್ದಾರೆ. ಸಿಐಡಿ ತಂಡ ತನಿಖೆ ಮುಂದುವರೆಸಿದೆ.

ಶೃಂಗೇರಿ ಶೂಟೌಟ್ ಪ್ರಕರಣ ಒಡಕು
ಶೃಂಗೇರಿ ಶೂಟೌಟ್ ಪ್ರಕರಣದಿಂದಾಗಿ ಎರಡು ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಡಕು ಮೂಡಿದೆ. ಚಿಕ್ಕಮಗಳೂರು-ಶೃಂಗೇರಿ ಗಳಲ್ಲಿ ನಕ್ಸಲ್ ನಿಗ್ರಹ ಪಡೆ ಪರ ಪ್ರತಿಭಟನೆಗಳು ನಡೆದಿದೆ. ಮಂಗಳೂರಿನಲ್ಲಿ ಕಬೀರ್ ಪರ ಕೋಮು ಸೌಹಾರ್ದ ವೇದಿಕೆ ಇನ್ನಿತರ ಸಂಘಟನೆಗಳು ಮೆರವಣಿಗೆ ನಡೆಸಿವೆ. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ತಿಕ್ಕಾಟ ಮುಂದುವರೆದಿದೆ.
ಶಾಸಕ ಸಿಟಿ ರವಿ, ಸುನಿಲ್ ಕುಮಾರ್ ಅವರು ಕಬೀರ್ ಪರ ಸಿದ್ದರಾಮಯ್ಯ ಸರ್ಕಾರ ನಿಂತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರಿಗೂ ದೂರು ನೀಡಲು ನಿರ್ಧರಿಸಿದ್ದಾರೆ. ಅತ್ತ, ಯುಟಿ ಖಾದರ್, ಜನಾರ್ದನ ಪೂಜಾರಿ, ಮೊಯಿದ್ದೀನ್ ಬಾವಾ ಅವರು ಕಬೀರ್ ಸಾವಿಗೆ ನ್ಯಾಯ ದೊರೆಕಿಸಿಕೊಡಲು ಪಣತೊಟ್ಟಿದ್ದಾರೆ.












Click it and Unblock the Notifications