ಉಗ್ರರ ದಾಳಿ ಖಂಡಿಸಿದ ನಟ ಅನಂತ್ ನಾಗ್ ಮೋದಿಯಿಂದ ನಿರೀಕ್ಷಿಸಿರುವುದೇನು?
ಮಂಗಳೂರು, ಫೆಬ್ರವರಿ 17: ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ವಿಶ್ವದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೇಶದೆಲ್ಲೆಡೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಈ ನಡುವೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಒತ್ತಾಯ ಕೇಳಿ ಬರುತ್ತಿದೆ.
ಭದ್ರತಾ ಪಡೆಗಳ ಮೇಲೆ ನಡೆದ ಆತ್ಮಹತ್ಯಾ ದಾಳಿ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಖ್ಯಾತ ನಟ ಅನಂತ ನಾಗ್ , ಈ ಘಟನೆ ಅತ್ಯಂತ ಭೀಕರವಾಗಿದೆ. ಇದು ದೇಶದ ಜನರ ಮನಸ್ಸನ್ನು ಅಲ್ಲೋಲ ಕಲ್ಲೋಲವಾಗಿಸಿದೆ.ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದಿಟ್ಟ ಪ್ರತಿಕ್ರಿಯೆಯನ್ನು ಜನರು ನಿರೀಕ್ಷಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ತುಳು ಚಿತ್ರ ' ಇಂಗ್ಲಿಷ್' ನಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರದ ಕುರಿತು ಮಾತನಾಡುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಧರ್ಮದ ಆಧಾರದಲ್ಲಿ ಭಾರತ ವಿಭಜನೆಯಾದ ಬಳಿಕವೂ ಇಂತಹ ಘಟನೆಗಳು ಮುಂದುವರಿದಿವೆ. 1955ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀಯವರು, 1971ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಇಂತಹ ಕೃತ್ಯಕ್ಕೆ ತಕ್ಕ ಉತ್ತರ ನೀಡಿದ್ದರು.
ಈಗ ದೇಶದ ಜನರು ಅಂತಹುದೇ ದಿಟ್ಟ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ನಿರಿಕ್ಷೀಸುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಬೇಕಿದೆ.ವಿವಾದಿತ ಪ್ರದೇಶವನ್ನು ಸಂಪೂರ್ಣವಾಗಿ ಸೇನೆಯ ಸುಪರ್ದಿಗೆ ವಹಿಸುವ ಅಗತ್ಯವಿದ್ದು, ಅಲ್ಲಿ ಸೇನೆಯವರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಬೆಂಬಲಿಸುವ ಕಾರ್ಯ ನಿಲ್ಲಬೇಕಿದೆ.
ಯೋಧರನ್ನು ಅನ್ಯಾಯವಾಗಿ ಸಾಯಲು ಬಿಡುವ ಬದಲು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಅತೀ ಅಗತ್ಯ ಎಂದು ಅನಂತ ನಾಗ್ ತಿಳಿಸಿದರು.












Click it and Unblock the Notifications