ಸಾಹಿತ್ಯ, ಕಲೆಯ ಹಬ್ಬ 15ನೇ ಆಳ್ವಾಸ್ ನುಡಿಸಿರಿಗೆ ವೈಭವದ ತೆರೆ
ಮಂಗಳೂರು, ನವೆಂಬರ್ 19 : ಕರ್ನಾಟಕ ದರ್ಶನ ಬಹುರೂಪಿ ಆಯಾಮಗಳು ಎಂಬ ಪರಿಕಲ್ಪನೆಯೊಂದಿಗೆ ಮೂರು ದಿನಗಳ ಕಾಲ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ನಡೆದ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ತೆರೆ ಬಿದ್ದಿದೆ.
ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಜರುಗಿದ 15 ನೇ ಆವೃತ್ತಿಯ ಆಳ್ವಾಸ್ ನುಡಿಸಿರಿ ಗೆ ಭಾನುವಾರದಂದು ವೈಭವಪೂರ್ಣವಾಗಿ ಸಮಾಪ್ತಿಗೊಂಡಿದೆ. ಸಮಾರೋಪ ಸಮಾರಂಭದಲ್ಲಿ 12 ಸಾಧಕರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
'ಆಳ್ವಾಸ್ ನುಡಿಸಿರಿ' ಪ್ರಶಸ್ತಿ ಬೇಡವೆಂದ ಎಚ್.ಎಸ್.ದೊರೆಸ್ವಾಮಿ
ಸಮಾರೋಪ ಸಮಾರಂಭದಲ್ಲಿ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಜ್ಞಾನಪೀಠ ಪುರಸ್ಕ್ರತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ "ನಾವಿಂದು ನಮ್ಮ ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ನೀಡಿದರೂ, ಅದು ಸಾರ್ಥಕವಾಗುತ್ತಿದೆಯಾ ಎಂದು ವಿಮರ್ಶಿಸಿಕೊಳ್ಳುವ ಅನಿವಾರ್ಯತೆ ಒದಗಿದೆ. ಕಾರಣ ಬ್ರಿಟೀಷರು ನಮ್ಮವರ ಅಪೇಕ್ಷೆಯ ಮೇರೆಗೆ ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಆರಂಭಿಸಿ, ನಂತರ ನಮ್ಮ ಸಂಸ್ಕ್ರತಿಯನ್ನೇ ಸತ್ವರಹಿತವಾದದ್ದು ಎಂದು ಹೇಳಿದಾಗ ನಾವ್ಯಾರು ಪ್ರಶ್ನಿಸಲಿಲ್ಲ.
ಪರಂಪರೆಗೆ ಪರಕೀಯರಾಗುತ್ತಿದ್ದೇವೆ
ನಮ್ಮ ಇತಿಹಾಸಗಳಂತಿದ್ದ ರಾಮಾಯಣ, ಮಹಾಭಾರತವನ್ನು ಕಟ್ಟುಕಥೆಯಂತೆ ಬಿಂಬಿಸಿದಾಗಲೂ ನಾವು ಏನೂ ಹೇಳಲಿಲ್ಲ. ಇದರಿಂದ ಅವರು ನಮ್ಮನ್ನು ನಮ್ಮದೇ ಪರಂಪರೆಗೆ ಪರಕೀಯರಾಗುವಂತೆ ಮಾಡಿದ್ದಾರೆ. ಭಾರತೀಯರಲ್ಲಿ ಅನಾದಿ ಮತ್ತು ಪ್ರಸ್ತುತದ ನಡುವಿದ್ದ ಕೊಂಡಿಯನ್ನು ಕತ್ತರಿಸಿದ್ದಾರೆ. ಇದರಿಂದ ನಮ್ಮದು ತಂದೆ ಇಲ್ಲದ ಸಂಸ್ಕೃತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
15 ಮಂದಿ ಸಾಧಕರಿಗೆ 2017ರ 'ಆಳ್ವಾಸ್ ನುಡಿಸಿರಿ' ಪುರಸ್ಕಾರ
ಸಾಹಿತ್ಯದ ಮೇಲೂ ಬ್ರಿಟೀಶರ ಪ್ರಭಾವ
ಬ್ರಿಟೀಷರ ಪ್ರಭಾವ ಕೇವಲ ಶಿಕ್ಷಣಕ್ಕಷ್ಟೇ ಅಲ್ಲದೇ ನಮ್ಮ ಸಾಹಿತ್ಯವನ್ನೂ ಆವರಿಸಿಕೊಂಡಿದೆ. ಕಥೆ ಹೇಳುವುದು ಭಾರತೀಯರ ಮನಸ್ಥಿತಿ. ಕಥೆಯ ಮೂಲಕ ಭಾವಸೇತು ಬೆಸೆಯುವ ಕಾರ್ಯ ಭಾರತೀಯ ಸಾಹಿತ್ಯ ಮಾಡುತ್ತದೆ. ಆದರೆ ಇಂದು ಪಾಶ್ಚಾತ್ಯದ ಛಾಯೆಯಿಂದ ಸೃಜನಾತ್ಮಕ ಚಿಂತನೆಗಳು ಧಕ್ಕೆಗೊಳಗಾಗಿವೆ. ಅಲ್ಲದೇ ಪಾಶ್ಚಾತ್ಯ ಪದ್ಧತಿಗಳನ್ನು ನಮ್ಮ ಮಕ್ಕಳ ಮೇಲೂ ಹೇರಲಾಗುತ್ತಿದೆ. ಆಂಗ್ಲ ಭಾಷೆಯನ್ನು ಅನ್ನದ ಭಾಷೆಯಾಗಿ ಪರಿವರ್ತಿಸಿದ ಪರಿಣಾಮ, ಮಕ್ಕಳ ಕ್ರಿಯಾಶೀಲ, ಸೃಜನ ಮನಸ್ಸುಗಳು ಕಮರುತ್ತಿವೆ. ಈ ಎಲ್ಲಾ ಕಾರಣದಿಂದ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಅದನ್ನು ಶ್ರೀಮಂತಿಕೆಯನ್ನು ತಿಳಿಸುವ ಕೆಲಸಗಳು ಆಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು.
'ರಾಷ್ಟ್ರಗೀತೆ ಹಾಡುವವನು ದೇಶಪ್ರೇಮಿ, ಹಾಡದವನು ದೇಶದ್ರೋಹಿ ಎನ್ನುವುದು ಸರಿಯಲ್ಲ'
ಭಾವುಕರಾಗಿ ಮಾತನಾಡಿದ ಘಂಟಿ
ಸಮಾಪನ ಭಾಷಣ ಮಾಡಿದ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ .ಎಸ್ ಘಂಟಿ "ನಮ್ಮ ಕಡೆ ಒಂದು ಮಾತಿದೆ, ಮನಸ್ಸು ತುಂಬಿದರೆ ಮಾತು ಹೊರಡೋದಿಲ್ಲ ಎಂದು. ಅದರಂತೆ ಈ ನುಡಿಸಿರಿಗೆ ಸಾಕ್ಷಿಯಾಗಿ ನನಗೆ ಮಾತುಗಳೇ ಹೊರಡುತ್ತಿಲ್ಲ. ಇಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳಿಂದ ಬಹು ದೊಡ್ಡ ಸಂಪತ್ತು ನನ್ನ ಪಾಲಿಗೆ ದೊರೆತಿದೆ. ಕೇಂದ್ರ ಆಶಯಕ್ಕನುಗುಣವಾಗಿ ಕರ್ನಾಟಕದ ಬಹುರೂಪಿ ಆಯಾಮಗಳನ್ನು ಪರಿಚಯಿಸುವಲ್ಲಿ, ನುಡಿಸಿರಿ ಯಶಸ್ವಿಯಾಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಕೃಷಿಸಿರಿ ಸಮ್ಮೇಳನದಲ್ಲಿ ಕಂಬಳ ಕೋಣಗಳ ಸೌಂದರ್ಯ ಸ್ಫರ್ಧೆ
ಸಾಹಿತ್ಯ, ಕಲೆ ಬೆಳೆಸುವ ನುಡಿಸಿರಿ
ನುಡಿಸಿರಿ ಸಾಹಿತ್ಯವನ್ನು ಬೆಳೆಸುವುದಲ್ಲದೇ, ಕಲೆಯನ್ನು ಅದರೊಟ್ಟಿಗೆ ಅನೇಕ ಸಾಮಾನ್ಯರನ್ನು ತನ್ನೊಟ್ಟಿಗೆ ಬೆಳೆಸುತ್ತದೆ. ಕಲೆಯನ್ನು ಉಳಿಸಬೇಕು ಎಂದು ಭಾಷಣ ಮಾಡಿದರಷ್ಟೇ ಸಾಲದು. ಅದಕ್ಕೆ ತಕ್ಕಂತೆ ಕೆಲಸಗಳು ಆಗಬೇಕು. ಆ ರೀತಿಯ ಕಾರ್ಯ ನುಡಿಸಿರಿ ಮಾಡುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಕಲಾವಿರನ್ನು ಕರೆಯಿಸಿ, ಇಲ್ಲಿ ಅವಕಾಶ ನೀಡಿ, ತನ್ಮೂಲಕ ಅವರಿಗೆ ಪ್ರೋತ್ಸಾಹ ನೀಡುತ್ತಿದೆ. ಸಣ್ಣ ಸಣ್ಣ ಅಂಗಡಿಗಳ ವ್ಯಾಪಾರಿಗಳು ಇಲ್ಲಿ ಬಂದು ಉತ್ತಮ ನೆಲೆಯನ್ನು ಗಳಿಸುತ್ತಿದ್ದಾರೆ. ಈ ಮುಖೇನ ಅರಿವಿನ ಲೋಕದ ದರ್ಶನವಾಗುತ್ತಿದೆ" ಎಂದು ಡಾ. ಘಂಟಿ ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭ
ಸಮಾರೋಪ ಸಮಾರಂಭದಲ್ಲಿ 15ನೇ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಗಣ್ಯರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಶಾಲು, ಫಲ-ಪುಷ್ಪ, ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಬೋಜೇಗೌಡ ಮತ್ತಿತ್ತರರು ಉಪಸ್ಥಿತರಿದ್ದರು.