ಈಶ್ವರಪ್ಪ ರಾಜೀನಾಮೆ ಸಾಲದು, ಬಂಧನವಾಗಬೇಕು: ಹಿಂದೂ ಮಹಾಸಭಾ ಒತ್ತಾಯ
ಮಂಗಳೂರು, ಏಪ್ರಿಲ್ 16 : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಈಶ್ವರಪ್ಪನವರ ರಾಜೀನಾಮೆ ಮಾತ್ರ ಸಾಲದು, ಕೂಡಲೇ ಬಂಧಿಸಬೇಕು ಅಂತ ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯ ಮಾಡಿದೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮತ್ತು ಕಾರ್ಯದರ್ಶಿ ಧರ್ಮೇಂದ್ರ ಅವರು, "ಗುತ್ತಿಗೆದಾರ ಸಂತೋಷ್ ಸಾವಿಗೆ ಈಶ್ವರಪ್ಪರವರೇ ಕಾರಣ ಅಂತ ವಾಟ್ಸ್ಆಪ್ ಮೇಸೆಜ್ ಸಾಕ್ಷಿ ಇದೆ. ಈಶ್ವರಪ್ಪ ಹಾಗೂ ಅವರ ಬೆಂಬಲಿಗರೇ ಈ ಸಾವಿಗೆ ಜವಾಬ್ದಾರರಾಗಿರುತ್ತಾರೆ. ಈಶ್ವರಪ್ಪನವರು ಕೇವಲ ರಾಜೀನಾಮೆ ಕೊಟ್ಟರೆ ಸಾಲುವುದಿಲ್ಲ. ಅವರನ್ನ ಬಂಧಿಸಿ ತನಿಖೆ ನಡೆಸಬೇಕು, ಇಲ್ಲದಿದ್ದರೆ ಅಧಿಕಾರ ಬಳಸಿಕೊಂಡು ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಕೂಡಲೇ ಈಶ್ವರಪ್ಪ ಬಂಧನವಾಗಬೇಕು'' ಎಂದು ಒತ್ತಾಯಿಸಿದ್ದಾರೆ.
ಇನ್ನು ಸಾವಿಗೀಡಾಗಿದ್ದು ಹಿಂದೂ, ಅವರು ಬಿಜೆಪಿಯ ಹಿಂದುತ್ವದ ಕಾರ್ಯಕರ್ತ. ಈ ಹಿಂದೆ ವಿನಾಯಕ ಬಾಳಿಗಾ ಎಂಬ ಹಿಂದೂ ಕಾರ್ಯಕರ್ತನ ಕೊಲೆಯಾದಗಲೂ ಆ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ, ಈಗಲೂ ಸಹ ಅವರ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದೆ ಎಂದರು.
ಅಲ್ಲದೆ ಬಿಜೆಪಿಯು ಮಂಚ, ಲಂಚ ಹಾಗೂ ಹಿಂದೂ ವಿರೋಧಿ ಸರ್ಕಾರ. ಹಿಂದುತ್ವ ಅಜೆಂಡಾ ಇಟ್ಟುಕೊಂಡು ರಾಜಕೀಯವಾಗಿ ಹಿಂದೂ ಕಾರ್ಯಕರ್ತರನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಈಗ ಈಶ್ವರಪ್ಪ ರಾಜೀನಾಮೆ ಪಡೆದುಕೊಂಡಿರುವುದು ಕೂಡ ಕೇವಲ ಕಣ್ಣು ಒರೆಸುವ ತಂತ್ರ. ಏಕೆಂದರೆ ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇದೆ. ಅದಕ್ಕಾಗಿ ಈ ರಾಜೀನಾಮೆ ನಾಟಕವಾಡಿ ಜನರ ಬಳಿ ಸಿಂಪತಿ ಗಿಟ್ಟಿಸಿಕೊಳ್ಳುವ ತಂತ್ರವನ್ನ ಬಿಜೆಪಿ ಮಾಡುತ್ತಿದೆ ಎಂದು ರಾಜೇಶ್ ಪವಿತ್ರನ್ ಕಿಡಿಕಾರಿದ್ದಾರೆ.
ಮೋದಿಯವರು ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ಮುಕ್ತ ಭಾರತ ಎಂದಿದ್ದರು. ಆದರೆ ಮೃತ ಸಂತೋಷ್ 40 % ಕಮಿಷನ್ ಕುರಿತಾಗಿ ಪತ್ರ ಬರೆದರೂ ಸಹ ಪ್ರಧಾನಿ ಏಕೆ ಪ್ರತಿಕ್ರಿಯಿಸಿಲ್ಲ. ಇನ್ನು ಈಶ್ವರಪ್ಪನ್ನ ಕೇಳಿದರೆ ನಾನು ಲಂಚ ಪಡೆದಿಲ್ಲ ಅಂತ ಹೇಳುತ್ತಾರೆ. ಹಾಗಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ, ಜೊತೆಗೆ 40% ಕಮಿಷನ್ ಪಡೆದವರು ಯಾರು ಎಂದು ಗೊತ್ತಾಗಲಿ ಅಂತ ಧರ್ಮೇಂದ್ರ ಅಕ್ರೋಶ ವ್ಯಕ್ತಪಡಿಸಿದ್ದರು.
ಜೊತೆಗೆ ಕರ್ನಾಟಕದಲ್ಲಿ ಕೆಲಸದ ಅನುಮತಿಯಿಲ್ಲದೆ ಜನೋಪಯೋಗಿ ಕೆಲಸಗಳು ನಡೆಯುತ್ತಿಲ್ಲವೇ ಎಂಬ ಬಗ್ಗೆ ಈಶ್ವರಪ್ಪ ಬಹಿರಂಗ ಚರ್ಚೆಗೆ ಬರಲಿ. ಇಂಜಿನಿಯರ್ಗಳು ಕೆಲಸದ ಆದೇಶವಿಲ್ಲದೆ ಗುತ್ತಿಗೆದಾರರ ಮೂಲಕ ತುರ್ತು ಕೆಲಸಗಳನ್ನು ಮಾಡಿರುವ ಹಲವು ನಿದರ್ಶನಗಳಿವೆ. ಇದು ಕೇವಲ ಈಶ್ವರಪ್ಪ ಕಥೆಯಲ್ಲ. ಬಹುತೇಕ ಬಿಜೆಪಿ ಶಾಸಕರು 40% ಕಮಿಷನ್ನಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಆಗಬೇಕು. ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಚಾರಕ್ಕೆ ಬ್ರೇಕ್ ಹಾಕುವ ಕಠಿಣ ಕ್ರಮ ತರಬೇಕು. ಸದ್ಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಹಾಗೂ ಅವರ ಬೆಂಬಲಿಗರ ಕೈವಾಡ ಇದೆ. ಸರ್ಕಾರ ಈ ಕೂಡಲೇ ಈಶ್ವರಪ್ಪನ ಬಂಧಿಸಿ ವಿಚಾರಣೆ ನಡೆಸಬೇಕು ಅಂತ ಧರ್ಮೇಂದ್ರ ಒತ್ತಾಯಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777