ಧರ್ಮಸ್ಥಳಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ದಂಪತಿ: ಧರ್ಮಾಧಿಕಾರಿಗಳ ಜೊತೆ ಮಾತುಕತೆ
ಮಂಗಳೂರು, ನವೆಂಬರ್3: ಕನ್ನಡದಲ್ಲಿ ತೆರೆಕಂಡು ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಸ್ಯಾಂಡಲ್ವುಡ್ನ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪತ್ನಿ ಪ್ರಗತಿ ಶೆಟ್ಟಿ ಜೊತೆ ಧರ್ಮಸ್ಥಳಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ನಟ ಪ್ರಮೋದ್ ಶೆಟ್ಟಿ ಕೂಡ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಕನಸಿನ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ
ಧರ್ಮಾಧಿರಿಗಳ ಜೊತೆ ಕಾಂತಾರ ಬಗ್ಗೆ ಮಾತುಕತೆ
ಮಂಜುನಾಥ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ರಿಷಬ್ ಶೆಟ್ಟಿ ದಂಪತಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾರೆ. ಈ ಮೊದಲೇ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕಾಂತಾರ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಸಹ ಉಪಸ್ಥಿತರಿದ್ದರು. ಕಾಂತಾರ ಸಿನಿಮಾ ಬಗ್ಗೆ ಸಿನಿಮಾದ ಕಥಾವಸ್ತು ಬಗ್ಗೆ ರಿಷಬ್ ಶೆಟ್ಟಿ ಹಾಗೂ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರು ಕೆಲಕಾಲ ಚರ್ಚೆ ನಡೆಸಿದರು.
ಸರ್ಕಾರದ ವಿರುದ್ಧ ಬಿಲ್ಲವ ಸಮಾಜ ಆಕ್ರೋಶ: ಜನವರಿಯಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ಖುಷಿ ಹಂಚಿಕೊಂಡ ನಟ ನಿರ್ದೇಶಕ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ದಂಪತಿ ಧರ್ಮಸ್ಥಳ ಧರ್ಮಾಧಿಕಾರಿಗಳ ಆಶೀರ್ವಾದ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾ ಮಾಡುವ ಮುನ್ನ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದೆ. ಆ ಬಳಿಕ ಟ್ರೇಲರ್ ರಿಲೀಸ್ ಆದ ಬಳಿಕ ಮತ್ತೆ ಬಂದು ದೇವರ ದರ್ಶನ ಪಡೆದಿದ್ದೆ. ಸಿನಿಮಾ ಬಿಡುಗಡೆಯಾದ ಬಳಿಕ ವೀರೇಂದ್ರ ಹೆಗ್ಗಡೆಯವರ ಭೇಟಿಗೆ ಸಾಕಷ್ಟು ಸಲ ಬರಬೇಕು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ಆದರೆ ಇದೀಗ ಕಾಲ ಕೂಡಿ ಬಂದಿದೆ. ಧರ್ಮಸ್ಥಳಕ್ಕೆ ಬಂದು ಆಶೀರ್ವಾದ ಪಡೆದಿದ್ದೇವೆ. ಸಿನಿಮಾ 30 ದಿನ ದಾಟಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದು ರಿಷಬ್ ಶೆಟ್ಟಿ ಖುಷಿ ಹಂಚಿಕೊಂಡರು.
ಕಾಂತಾರ ಚಿತ್ರಕ್ಕೆ ವೀರೇಂದ್ರ ಹೆಗ್ಗಡೆ ಮೆಚ್ಚುಗೆ
ಇನ್ನು ಈ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮಂಗಳೂರಿನಲ್ಲಿ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದರು. ಚಿತ್ರ ನೋಡಿದ ಬಳಿಕ ಮಾತನಾಡಿದ್ದ ಅವರು, ಕಾಂತಾರ ಚಿತ್ರದಲ್ಲಿ ದೈವಾರಾಧನೆಯನ್ನು ಬಹಳ ಚೆನ್ನಾಗಿ ರಿಷಬ್ ಶೆಟ್ಟಿ ತೋರಿಸಿದ್ದಾರೆ. ಚಿತ್ರದಲ್ಲಿ ಯುವಕರಿಗೆ ಹೊಸ ಕಥೆ, ಹಳೆಯ ಸ್ಮರಣೆ ಆಗುತ್ತದೆ. ಈ ಚಿತ್ರದಲ್ಲಿ ಹೊಸ ದೃಷ್ಟಿಕೋನವಿದೆ. ಜಾತಿ ಮತ ಬೇಧ ಮರೆತು ಸಹಬಾಳ್ವೆ ಮಾಡಬೇಕೆಂಬ ಸಂದೇಶ ಈ ಚಿತ್ರದಲ್ಲಿ ಇದೆ. ಕಾಂತಾರಾ ಚಿತ್ರ ನೋಡಿ ಬಹಳ ಸಂತೋಷವಾಗಿದೆ ಎಂದು ಸಂಪೂರ್ಣ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಕಾಂತಾರ ವೀಕ್ಷಿಸಿದ ಕೇಂದ್ರ ಸಚಿವೆ
ಸಪ್ಟೆಂಬರ್30 ರಂದು ತೆರೆಕಂಡ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದ ಅನೇಕ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ. ಒಂದು ತಿಂಗಳ ಬಳಿಕವೂ ಕಾಂತಾರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಿಂದ ಆರಂಭ ಆಗಿದ್ದ ಕಾಂತಾರ ಆರ್ಭಟ ದೇಶದ ಉದ್ದಗಲಕ್ಕೂ ಹಬ್ಬಿತ್ತು. ದೇಶಮಾತ್ರವಲ್ಲದೇ ವಿದೇಶದಲ್ಲೂ ಚಿತ್ರಕ್ಕೆ ಬಹಳ ಜನಪ್ರಿಯತೆ ಸಿಕ್ಕಿತ್ತು. ಇತರ ಭಾಷೆಯ ಸೆಲೆಬ್ರೆಟಿಗಳೂ ಕೂಡ ಈ ಚಿತ್ರವನ್ನು ಮೆಚ್ಚಿ ಕೊಂಡಿದ್ದಾರೆ. ಇನ್ನು ನಿನ್ನೆ (ನವೆಂಬರ್ 2) ರಂದು ಕೇಂದ್ರ ಸರ್ಕಾರದ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಲ್ಲಿಯೇ ಕಾಂತಾರ ಸಿನಿಮಾ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.