ಮಂಗಳೂರು; ಹಂತಕನಿಗೆ ಬಿಡುಗಡೆ ಭಾಗ್ಯ ಬೇಡ ಎಂದು ಪತ್ನಿ ಮನವಿ!
ಮಂಗಳೂರು, ಆಗಸ್ಟ್ 9: ಸಾಮಾನ್ಯವಾಗಿ ಕೈದಿಯೋರ್ವನನ್ನು ಬಿಡುಗಡೆ ಮಾಡಿ ಎಂದು ಮನೆಮಂದಿ ರಾಷ್ಟ್ರಪತಿಗಳವರೆಗೆ ಹೋಗಿ ಮನವಿ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಗುಂಪು ಗುಂಪುಗಾಗಿ ಪೊಲೀಸ್ ಕಮಿಷನರ್ ಕಚೇರಿಗೆ ದಾಂಗುಡಿಯಿಟ್ಟ ಕುಟುಂಬಸ್ಥರು ತಮ್ಮ ಕುಟುಂಬದ ವ್ಯಕ್ತಿಯನ್ನು ಬಿಡುಗಡೆ ಮಾಡಿ ಎಂದು ಕೇಳಿಲ್ಲ. ಬದಲಾಗಿ ನಾಲ್ಕು ಕೊಲೆ ಮಾಡಿರುವ ಆ ಕೊಲೆಗಡುಕನನ್ನು ಜೈಲಿನಿಂದ ಬಿಡುಗಡೆ ಮಾಡದಿರಿ ಎಂದು ಪೂರ್ಣ ಕುಟುಂಬವೇ ಬಂದು ಮನವಿ ಮಾಡಿರುವ ಘಟನೆಗೆ ಮಂಗಳೂರು ಸಾಕ್ಷಿಯಾಗಿದೆ.
ಮಂಗಳೂರಿನ ವಾಮಂಜೂರಿನ ಒಂದೇ ಕುಟುಂಬದ ನಾಲ್ವರನ್ನು 1994ರಲ್ಲಿ ಹತ್ಯೆ ಮಾಡಿದ ಕೊಲೆಪಾತಕಿ ಪ್ರವೀಣ್ ಕುಮಾರ್ಗೆ ಸ್ವಾತಂತ್ರ್ಯ ಅಮೃತೋತ್ಸವದ ಈ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಸರಕಾರ ಬಿಡುಗಡೆ ಭಾಗ್ಯ ಕರುಣಿಸಿತ್ತು. ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿರುವ ವಿಚಾರ ಆತನ ಕುಟುಂಬ ವಲಯದಲ್ಲಿ ಭಾರೀ ಆತಂಕ ಮೂಡಿಸಿದೆ.
ಆದ್ದರಿಂದ ಹತ್ಯೆಯಾದವರ ಕುಟುಂಬದ ಸುಮಾರು 50ರಷ್ಟು ಮಂದಿ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ರಿಗೆ ಪ್ರವೀಣ್ ಬಿಡುಗಡೆ ಮಾಡಬಾರದೆಂದು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಕೊಲೆಪಾತಕನ ಪತ್ನಿಯಿಂದಲೇ ಮನವಿ
ಸ್ವತಃ ಕೊಲೆಪಾತಕಿ ಪ್ರವೀಣ್ ಕುಮಾರ್ ಪತ್ನಿ ಅನಸೂಯಾ ಅವರೂ ಆತನ ಬಿಡುಗಡೆ ಮಾಡಬಾರದೆಂದು ಆಯುಕ್ತರಿಗೆ ಮನವಿ ಮಾಡಿದ್ದಾರೆ. ಹಂತಕ ಪ್ರವೀಣ್ ಕುಮಾರ್ ಮಾಡಿರುವ ಕೃತ್ಯದಿಂದ ಆತನ ಪೂರ್ತಿ ಕುಟುಂಬವೇ ಆತನ ವಿರುದ್ಧ ತಿರುಗಿ ಬಿದ್ದಿದೆ. ಈ ಘಟನೆ ಅಂದು ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಇದೀಗ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಮಾಡಬೇಡಿ ಎಂದು ಸ್ವತಃ ಆತನ ಕುಟುಂಬಸ್ಥರೇ ಮನವಿ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ.

ಕುಟುಂಬಸ್ಥರಿಗೆ ಕೊಲೆ ಬೆದರಿಕೆ
ಕುಟುಂಬಸ್ಥರ ಮನವಿ ಸ್ವೀಕರಿಸಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯೆ ನೀಡಿ, "ನಮಗೆ ಸರಕಾರದಿಂದ ಅಥವಾ ಮೇಲಾಧಿಕಾರಿಗಳಿಂದ ಪ್ರವೀಣ್ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತ ಜೈಲಿನಲ್ಲಿಯೇ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಒಡ್ಡಿದ್ದಾನೆಂದು ಆರೋಪ ಕೇಳಿ ಬರುತ್ತಿದೆ. ಅಲ್ಲದೆ ಆತನ ಇಡೀ ಕುಟುಂಬವೇ ಪ್ರವೀಣ್ ಬಿಡುಗಡೆಯನ್ನು ವಿರೋಧಿಸಿ ಮನವಿ ಮಾಡಿದೆ. ಈ ಮನವಿಯನ್ನು ಇಂದೇ ನಾನು ಮೇಲಾಧಿಕಾರಿಗಳಿಗೆ ಕಳುಹಿಸುತ್ತೇನೆ" ಎಂದರು.

ಹಣದಾಸೆಗೆ ನಾಲ್ವರ ಕೊಲೆ
1994, ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನಲ್ಲಿ ಪ್ರವೀಣ್ ತನ್ನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ (75), ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಎಂಬುವವರನ್ನು ಕೊಲೆಗೈದು ಚಿನ್ನದೊಂದಿಗೆ ಪರಾರಿಯಾಗಿದ್ದ.
ಆರೋಪಿಗೆ ಮಂಗಳೂರಿನ ನ್ಯಾಯಾಲಯ 2002ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಮರಣದಂಡನೆ ಶಿಕ್ಷೆಯ ಬಳಿಕ ರಾಷ್ಟ್ರಪತಿಗೆ ಕ್ಷಮಾಪಣೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು 2013, ಎಪ್ರಿಲ್ 4 ರಂದು ರಾಷ್ಟ್ರಪತಿ ತಿರಸ್ಕರಿಸಿದ್ದರು. ಆದರೆ 2014ರಲ್ಲಿ ಸುಪ್ರೀಂ ಕೋರ್ಟು ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.

ಸಂತ್ರಸ್ತ ಕುಟುಂಬಸ್ತರಲ್ಲಿ ಆತಂಕ
ಸ್ವಾತಂತ್ಯ್ರೋತ್ಸವದ ಅಮೃತೋತ್ಸವ ಸಂದರ್ಭದಲ್ಲಿ ಪ್ರವೀಣ್ನನ್ನು ಜೈಲಿನಿಂದ ಬಿಡುಗಡೆ ಮಾಡಲು ಜೈಲು ಅಧಿಕಾರಿಗಳು ಮನಸ್ಸು ಮಾಡಿದ್ದು, ಜೈಲಿನಿಂದ ಹೊರಗೆ ಬಂದರೆ ನಮ್ಮನ್ನು ಕೊಲ್ಲುತ್ತಾನೆಂದು ಸಂತ್ರಸ್ತ ಕುಟುಂಬಸ್ಥರಿಗೆ ಭಯ ಕಾಡುತ್ತಿದೆ. ಯಾವುದೇ ಕಾರಣಕ್ಕೂ ಜೈಲಿನಿಂದ ಹೊರಗೆ ಬಿಡದಂತೆ ಕುಟುಂಬಸ್ಥರ ಒಕ್ಕೊರಲಾಗಿ ಆಗ್ರಹ ಮಾಡಿದೆ.
ಹತ್ಯೆಯಾದ ಅಪ್ಪಿ ಶೇರಿಗಾರ್ತಿ ಪುತ್ರ ಸೀತಾರಾಮ ಗುರಪುರ ಮತ್ತು ಕುಟುಂಬಸ್ಥರು, ಪ್ರವೀಣ್ ಪತ್ನಿಯಿಂದಲೂ ಬಿಡುಗಡೆ ಮಾಡದಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. ವಾಮಂಜೂರು ಪ್ರವೀಣ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬೆಳಗಾವಿ ಜೈಲಿನಲ್ಲಿದ್ದಾನೆ.












Click it and Unblock the Notifications