ಶಂಭು, ಶ್ವಾನದ ಸ್ನೇಹ ಕಥೆ ದುರಂತ ಅಂತ್ಯ!
ಅವರಿಬ್ಬರು ಹತ್ತು ವರ್ಷಗಳಿಂದ ಸ್ನೇಹಿತರು. ಒಬ್ಬರನ್ನೊಬ್ಬರು ಬಿಟ್ಟಿರಲಾರಂತಹ ಸ್ನೇಹ ಅವರರದ್ದು. ಊರಿನ ಜನರು ಇವರನ್ನು ನೋಡಿ ಎಂತಹ ಸ್ನೇಹಿತರು ಎಂದು ಹೇಳಿದ್ದುಂಟು. ಇಂತಹ ಸ್ನೇಹವನ್ನು ಯಾರು ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಈ ಸ್ನೇಹವನ್ನು ದೇವರು ಮುರಿದು ಬಿಟ್ಟಿದ್ದಾನೆ.
ಹೌದು, ನಾವು ಹೇಳುತ್ತಿರುವುದು ಮಂಗಳೂರಿನ ಕಥೆಯನ್ನು. ಅತ್ತಾವರದ ಜೈನ್ ಕಾಂಪೌಂಡಿನ ಕೆ.ಕೆ ಟವರ್ಸ್ ಮುಂಭಾಗದಲ್ಲಿ ವಾಸವಾಗಿದ್ದ ಈ ಸ್ನೇಹಿತರ ಕಥೆ. ಎರಡು ದಿನಗಳ ಹಿಂದೆ ಈ ಸ್ನೇಹದ ಕಥೆ ದುರಂತ ಅಂತ್ಯಕಂಡಿದೆ. ಕಾಲನ ಕರೆಗೆ ಓಗೊಟ್ಟ ಶಂಭು ತನ್ನ ಸ್ನೇಹಿತನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾನೆ.
ಅತ್ತಾವರದ ಜೈನ್ ಕಾಂಪೌಂಡಿನ ಬಳಿ ವಾಸವಾಗಿದ್ದ ಬೀದಿ ಹೋರಿ ಶಂಭು ಮತ್ತು ಬೀದಿ ನಾಯಿ ಈ ಕಥೆಯ ಆತ್ಮೀಯ ಸ್ನೇಹಿತರು. ಸುಮಾರು 10 ವರ್ಷಗಳಿಂದ ಈ ಪ್ರಾಣಿಗಳು ಆತ್ಮೀಯ ಸ್ನೇಹಿತರಾಗಿದ್ದವು. ಆದರೆ, ಭಾನುವಾರ ಶಂಭು ತನ್ನ ಸ್ನೇಹಿತನ್ನು ಬಿಟ್ಟು ಇಹಲೋಕ ತ್ಯಜಿಸಿದೆ. ಶಂಭುವಿನ ಶವದ ಮುಂದೆ ನಾಯಿ ಕುಳಿತು ಕಾಯುತ್ತಿದ್ದ ದೃಶ್ಯ ನೋಡಿ ಜನರು ಸಹ ಕಣ್ಣೀರು ಹಾಕಿದ್ದಾರೆ. ಶುಂಭು, ಶ್ವಾನದ ಕಥೆ ಓದಿ

ಸ್ನೇಹ ನೋಡಿ ಕಣ್ಣೀರಿಟ್ಟ ಜನರು
ಕಳೆದ ಹತ್ತು ವರ್ಷಗಳಿಂದ ತನ್ನ ಒಡನಾಡಿಯಾಗಿದ್ದ ಶಂಭುವನ್ನು ಕಳೆದುಕೊಂಡ ಶ್ವಾನ ಹೋರಿಯ ಮೃತ ದೇಹದ ಬಳಿ ಶ್ವಾನವೊಂದು ಕಾವಲು ಕುಳಿತು ಮೌನವಾಗಿ ರೋದಿಸುತ್ತಿದ್ದ ಘಟನೆ ಕಂಡು ಜನರು ಸಹ ಕಣ್ಣೀರು ಹಾಕಿದರು.

ಹತ್ತು ವರ್ಷಗಳ ಸ್ನೇಹ
ಮಂಗಳೂರಿನ ಅತ್ತಾವರ ಪರಿಸರದಲ್ಲಿ ಸುಮಾರು 10 ವರ್ಷಗಳಿಂದ ಒಂದು ಬೀದಿ ನಾಯಿ ಮತ್ತು ಬೀದಿ ಹೋರಿ ಜೊತೆಯಾಗಿ ಸುತ್ತಾಡುತ್ತಿದ್ದವು. ಸ್ಥಳೀಯರು ಹೋರಿಯನ್ನು ಶಂಭು ಎಂದು ಕರೆಯುತ್ತಿದ್ದರು. ನಾಯಿ ಮತ್ತು ಹೋರಿಯ ಸ್ನೇಹ ಯಾವ ರೀತಿ ಇತ್ತೆಂದರೆ ರಾತ್ರಿ ಹೋರಿ ಮತ್ತು ಶ್ವಾನ ಒಟ್ಟಿಗೆ ಮಲಗಿರುತ್ತಿದ್ದವು.

ಶವಕ್ಕೂ ಶ್ವಾನ ಕಾವಲು
ಕಳೆದ ಭಾನುವಾರ ಮಧ್ಯಾಹ್ನ 1.30ರ ವೇಳೆಗೆ ಶಂಭು ಹೋರಿ ಆಕಸ್ಮಿಕವಾಗಿ ಸತ್ತು ಹೋಯಿತು. ಸ್ನೇಹಿತನ ಅಗಲಿಕೆಯಿಂದ ನೊಂದ ಶ್ವಾನ ಹೋರಿಯ ಶವವನ್ನು ಕಾವಲು ಕಾಯುತ್ತಾ ಯಾರನ್ನೂ ಹತ್ತಿರ ಹೋಗಲು ಅವಕಾಶ ನೀಡಲಿಲ್ಲ.

ಅಂತ್ಯ ಸಂಸ್ಕಾರಕ್ಕೂ ತೊಂದರೆ
ಶಂಭುವಿನ ಶವವನ್ನು ಸಾಗಿಸಲು ಸುಮಾರು 500ಕ್ಕೂ ಅಧಿಕ ಮಂದಿ ಜಮಾಯಿಸಿದ್ದರಿಂದ ಹೆದರಿದ ಶ್ವಾನ ಸ್ವಲ್ಪ ದೂರ ಹೋಗಿ ಮಲಗಿಕೊಂಡಿತ್ತು. ನಂತರ ಯುವಕರು ಗುಂಡಿ ತೆಗೆದು ಹೋರಿಯ ಶವಸಂಸ್ಕಾರ ಮಾಡಿದರು.

ಸಮಾಧಿ ಬಳಿ ಮಲಗಿದ ಶ್ವಾನ
ಶಂಭುವಿನ ಶವಕ್ಕೆ ಸ್ನಾನ ಮಾಡಿಸಿದ ಸ್ಥಳೀಯ ಜನರು, ಬಿಳಿ ಬಟ್ಟೆಯನ್ನು ಹೊದೆಸಿ, ಹೂವಿನ ಹಾರವನ್ನು ಹಾಕಿ ಅಂತ್ಯಸಂಸ್ಕಾರ ನೆರವೇರಿಸಿದರು. ಶವ ಸಂಸ್ಕಾರ ಮುಗಿಯುತ್ತಿದ್ದಂತೆ ಶ್ವಾನ ಹೋರಿಯ ಸಮಾಧಿಯ ಬಳಿಯಲ್ಲೇ ಮಲಗಿತ್ತು.












Click it and Unblock the Notifications