ಮಂಗಳೂರು: ಬುಧವಾರದ ಚುಟುಕು ಸುದ್ದಿಗಳು
ಮಂಗಳೂರು, ಫೆಬ್ರವರಿ. 22 : ಮಂಗಳೂರು ಜಿಲ್ಲೆಯಲ್ಲಿ ಬುಧವಾರ(ಫೆ.22) ಬೆಳಗ್ಗೆಯಿಂದ ಸಂಜೆ ವರೆಗೆ ನಡೆದ ಪ್ರತಿಭಟನೆಗಳು, ಸಾವು ಸೇರಿದಂತೆ ಮತ್ತಿತರ ಹಲವು ಚಿಕ್ಕ-ಚಿಕ್ಕ ಸುದ್ದಿಗಳನ್ನು ನಾವು ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ.
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೊಕ್ಕೊಟ್ಟು ಮೇಲ್ಸೇತುವ ಬಳಿ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಉಳ್ಳಾಲ ಒಂಬತ್ತುಕೆರೆ ನಿವಾಸಿ ವೆಂಕಪ್ಪ ಪೂಜಾರಿ(56) ಎಂದು ಗುರುತಿಸಲಾಗಿದೆ.[ಮಂಗಳೂರು - ತುಂಬಿದ ತುಂಬೆ, ತುಂಬದ ರೈತರ ತುತ್ತಿನ ಚೀಲ]
ವೆಂಕಪ್ಪ ಪೂಜಾರಿ ಹಳಿ ದಾಟುತ್ತಿದ್ದ ವೇಳೆ ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ಮುಂದುವರೆದಿದೆ.
ಕಸ ಸಂಗ್ರಹ ಕಾರ್ಮಿಕರ ಧರಣಿ : ಮಂಗಳೂರು ಮಹಾನಗರ ಪಾಲಿಕೆ ಕಸ ಸಂಗ್ರಹ ಕಾರ್ಮಿಕರು ಸರಿಯಾಗಿ ವೇತನ ಸಿಗದೆ ಬೇಸತ್ತು ಮನೆ-ಮನೆ ಕಸ ಸಂಗ್ರಹವನ್ನು ಸ್ಥಗಿತಗೊಳಿಸಿ ನಗರದ ಬಂಟ್ಸ್ ಹಾಸ್ಟೆಲ್ ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.[ಮಂಗ್ಳೂರಿನಿಂದ ಬೆಂಗ್ಳೂರಿಗೆ ವಿಮಾನ ಮೂಲಕ ಹಾರಿತು ಜೀವಂತ ಹೃದಯ]
ಸರಿಯಾಗಿ ವೇತನ ಸಿಗದಿರದ ಕಾರಣದಿಂದ ಆಕ್ರೋಶಗೊಂಡ ಮನಪಾ ಕಸ ಸಂಗ್ರಹ ಕಾರ್ಮಿಕರು ನಗರದ ತ್ಯಾಜ್ಯ ವಿಲೇವಾರಿ ಉಸ್ತುವಾರಿ ವಹಿಸಿಕೊಂಡಿರುವ ಆಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೇತನ ಸಮಸ್ಯೆ ಬಗೆಹರಿಯುವವರೆಗೆ ಕಸ ಸಂಗ್ರಹಿಸದಿರಲು ನಿರ್ಧರಿಸಿದ್ದಾರೆ.
ಹೆಲ್ಮೆಟ್ ಬಗ್ಗೆ ಜಾಗೃತಿ: ಪುತ್ತೂರು ಜಿಲ್ಲೆಯಲ್ಲಿ ಜನರು ಹೆಲ್ಮೆಟ್ ಇಲ್ಲದೆ ಸಂಚರಿಸುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಪುತ್ತೂರಿನ ಮುಖ್ಯ ರಸ್ತೆಗಳಲ್ಲಿ ಯಾರೆಲ್ಲಾ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಾರೋ ಅವರಿಗೆಲ್ಲಾ ಪೊಲೀಸ್ ಸಿಬ್ಬಂದಿಗಳಿಂದ ಗುಲಾಬಿ ಹೂ ಕೊಟ್ಟು ಸನ್ಮಾನಿಸಲಾಯಿತು.
ಈ ಗುಲಾಬಿ ಹೂ ಕೊಡುವ ಮೂಲಕ ಪುತ್ತೂರು ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಹಾಕುವುದರ ಮಹತ್ವದ ಬಗ್ಗೆ ತಿಳಿ ಹೇಳುವ ಮೂಲಕ ಜಾಗೃತಿ ಮೂಡಿಸಿದರು.