ಬಂಟ್ವಾಳದಲ್ಲಿ ಎಎಸ್ ಐ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಯುವಕನಿಂದ ಹಲ್ಲೆ
ಮಂಗಳೂರು, ಜುಲೈ 10: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಘಟನೆ ಜುಲೈ 9, ಗುರುವಾರ ರಾತ್ರಿ ಬಂಟ್ವಾಳದ ಮೆಲ್ಕಾರ್ ಎಂಬಲ್ಲಿ ನಡೆದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಲಾರಿ ಚಾಲಕ ಮತ್ತು ಜನರ ನಡುವೆ ಗಲಾಟೆಯಾಗುತ್ತಿದೆ ಎಂಬ ಮಾಹಿತಿ ಬಂದ ಮೇರೆಗೆ ಪೊಲೀಸ್ ಸಿಬ್ಬಂದಿಗಳಾದ ದೇವಪ್ಪ ಹಾಗೂ ಪಿಸಿ ಮಲ್ಲಿಕಸಾಬ್ ಎಂಬುವರನ್ನು ಸ್ಥಳಕ್ಕೆ ಬರುವಂತೆ ತಿಳಿಸಿ ಬಂಟ್ವಾಳ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಹಾಗೂ ಸಿಬ್ಬಂದಿ ನಿರಂಜನ್ ಅವರು ಸ್ಥಳಕ್ಕೆ ತೆರಳಿದ್ದಾರೆ.
ಈ ವೇಳೆ ಗೋಳ್ತಮಜಲು ಬಲ್ಲೆಕೋಡಿ ಮನೆಯ ಅಬ್ದುಲ್ ಸಲಾಂ (28) ಎಂಬಾತ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ. ಗಲಾಟೆ ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದಾಗ ಅವ್ಯಾಚವಾಗಿ ನಿಂದಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳೀಯರು ಹಲ್ಲೆ ನಡೆಸುವುದನ್ನು ತಡೆದು ಆರೋಪಿಗೆ ಥಳಿಸಿದ್ದಾರೆ. ಆರೋಪಿಗೂ ಗಾಯಗಳಾಗಿವೆ.

ಈ ಪ್ರಕರಣದ ಕುರಿತು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೈಲೇಶ್ ಟಿ ಮತ್ತು ಇತರ 3 ಪೊಲೀಸರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications