ಶನಿಪೂಜೆ ವೇಳೆ ಕರ್ತವ್ಯಕ್ಕೆ ಅಡ್ಡಿ: 20 ಆರೋಪಿಗಳ ಖುಲಾಸೆ
ಪುತ್ತೂರು, ಸೆಪ್ಟೆಂಬರ್ 3: ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಮುಂಭಾಗ ಶ್ರೀರಾಮ ಸೇನೆಯ ನೇತೃತ್ವದಲ್ಲಿ 9 ವರ್ಷಗಳ ಹಿಂದೆ ನಡೆದ ಶನಿಪೂಜೆಯ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಎದುರಿಸುತ್ತಿದ್ದ ಸೇನೆ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸಹಿತ 20 ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಶ್ರೀರಾಮ ಸೇನೆಯ ಪ್ರಮುಖರಾಗಿದ್ದ ಅರುಣ್ ಕುಮಾರ್ ಪುತ್ತಿಲ, ರವಿಪ್ರಸಾದ್ ಶೆಟ್ಟಿ, ರಾಜೀವ್ ಸುವರ್ಣ, ಸಂದೇಶ್ ಕಲ್ಲೆಗಾ, ನವೀನ್, ವಿವೇಕ ಶೆಟ್ಟಿ, ನಾರಾಯಣ ನಾಯ್ಕ , ನಾರಾಯಣ, ನವೀನ್ ಮುಕ್ವೆ, ಗಣೇಶ್ ಆಚಾರಿ, ದಾಮೋದರ ಭಂಡಾರ್ಕರ್, ಮೋಹನ್ ಕಲ್ಲಾರೆ, ಮೋಹನ್, ನಿತಿನ್, ಪ್ರಶಾಂತ್, ವಿಜಯ ಗೌಡ, ದಿನೇಶ್, ಶಶಿಧರ್ ಖುಲಾಸೆಯಾಗಿರುವ ಆರೋಪಿಗಳು. ವಿ.ಎನ್.ಗಣಪತಿ ಶೆಣೈ ಎಂಬುವರು ಈಗಾಗಲೇ ನಿಧನ ಹೊಂದಿದ್ದಾರೆ.[ಹಜ್ ಗೆ ತೆರಳಿದ್ದ ಕಾಸರಗೋಡಿನ ಯಾತ್ರಾರ್ಥಿ ಸಾವು]
ಶನಿಪೂಜೆಯ ಧಾರ್ಮಿಕ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ನಡೆಸಿರುವುದು, ಶೋಭಾಯಾತ್ರೆ ವಿವಾದಕ್ಕೆ ಸಂಬಂಧಿಸಿದಂತೆ ದೊಂಬಿ, ಕೊಲೆ ಯತ್ನ ಪ್ರಯತ್ನ ಆರೋಪದಿಂದ ಎಲ್ಲ ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಶೌಚಾಲಯದಲ್ಲಿ ಕ್ಯಾಮೆರಾ: ತನಿಖೆಗೆ ವಿಶೇಷ ತಂಡ
ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ಎಸಿಪಿ ನೇತೃತ್ವದ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಅದರ ಐಎಂಈಐ ಸಂಖ್ಯೆ ಮೂಲಕ ಆರೋಪಿಯನ್ನು ಶೀಘ್ರವೇ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.
ದಕ್ಷಿಣ ವಲಯ ಎಸಿಪಿ ಶ್ರುತಿ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣಾಧಿಕಾರಿ ಪಿ.ಅಶೋಕ್ ನೇತೃತ್ವದ ವಿಶೇಷ ಪೊಲೀಸರ ತಂಡದಿಂದ ತನಿಖೆ ಆರಂಭವಾಗಿದೆ. ಮೊಬೈಲ್ ಸೆಟ್ ಹಾಗೂ ಮೆಮೊರಿ ಕಾರ್ಡ್ಗಳನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪ್ರಯೋಗಾಲಯದಲ್ಲಿ ಪರೀಕ್ಷೆ ನಂತರ ವರದಿ ಸಲ್ಲಿಸಲಿದ್ದಾರೆ.[ಮಂಗಳೂರು ವಿ.ವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ!]
ಕದ್ರಿ ಉದ್ಯಾನ ಬಳಿ ಗಾಂಜಾ ಮಾರುತ್ತಿದ್ದ ಯುವಕನ ಬಂಧನ
ಮಂಗಳೂರು: ನಗರದ ಕದ್ರಿ ಉದ್ಯಾನದಲ್ಲಿ ಗಾಂಜಾ ಮಾರುತ್ತಿದ್ದ ಯುವಕನೊಬ್ಬನನ್ನು ಬಂಧಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು 950 ಗ್ರಾಂ ಗಾಂಜಾ ಮತ್ತು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಬಲ್ಮಠ ನಿವಾಸಿ ಕಲಂದರ್ ಷಾ ಬಂಧಿತ ವ್ಯಕ್ತಿ. ಆರೋಪಿಯು ಕದ್ರಿ ಉದ್ಯಾನದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ತಕ್ಷಣ ಅಲ್ಲಿಗೆ ದಾಳಿ ನಡೆಸಿದ ಮಂಗಳೂರು ದಕ್ಷಿಣ ವಲಯ - 1 ರ ಅಬಕಾರಿ ಇನ್ ಸ್ಪೆಪೆಕ್ಟರ್ ಸುನೀತಾ ಮತ್ತು ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು.[ಬಾವಿ ನೀರೇನೋ ಆರಿತು, ಆದರೆ ಯಾಕೆ ಹಾಗಾಯಿತು?]
ಗಾಂಜಾ ಪತ್ತೆಯಾದ ಕಾರಣ ಆರೋಪಿಯನ್ನು ಬಂಧಿಸಿ, ಗಾಂಜಾ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಎಲ್. ಮಂಜುನಾಥ್ ತಿಳಿಸಿದ್ದಾರೆ.












Click it and Unblock the Notifications