ಇರಾನ್ ನೌಕಾ ಪಡೆಯ ದಿಗ್ಬಂಧನದಲ್ಲಿ ಉತ್ತರ ಕನ್ನಡ, ಉಡುಪಿ ಮೀನುಗಾರರು
ಮಂಗಳೂರು, ಅಕ್ಟೋಬರ್. 12: ಕಳೆದ ಎರಡುವರೆ ತಿಂಗಳಿಂದ ಉತ್ತರಕನ್ನಡದ 17 ಹಾಗೂ ಉಡುಪಿಯ ಒಬ್ಬ ಮೀನುಗಾರ ಇರಾನ್ ದೇಶದ ನೌಕಾಪಡೆಯ ಬಂಧನದಲ್ಲಿರುವುದು ಬಯಲಾಗಿದೆ. ಉದ್ಯೋಗ ಅರಸಿ ದುಬೈಗೆ ತೆರಳಿದ್ದ ಈ ಮೀನುಗಾರರು ದುಬೈನ ಶೇಕ್ ಮರ್ವಾನ್ ಎಂಬುವರ ಮಾಲಿಕತ್ವದ ಮೀನುಗಾರಿಕಾ ದೋಣಿಯಲ್ಲಿ ದುಡಿಯುತ್ತಿದ್ದರು ಎಂದು ಹೇಳಲಾಗಿದೆ.
ದುಬೈನಿಂದ ಮೀನುಗಾರಿಕೆಗೆ ತೆರಳಿದ್ದ ಈ 18 ಮಂದಿ ಮೀನುಗಾರರನ್ನು ಗಡಿ ಅಕ್ರಮ ಪ್ರವೇಶದ ಆರೋಪದ ಮೇಲೆ ಕಳೆದ ಜುಲೈ 27 ರಂದು ಇರಾನ್ ನೌಕಾಪಡೆ ಬಂಧಿಸಿತ್ತು. ಕಳೆದ ಎರಡುವರೆ ತಿಂಗಳಿಂದ ಈ 18 ಮೀನುಗಾರನ್ನು ದಿಗ್ಬಂಧನ ವಿಧಿಸಿ ಇರಾನ್ ತನ್ನ ವಶದಲ್ಲಿ ಇರಿಸಿಕೊಂಡಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಕುಮಟಾದ ಸುಮಾರು 17 ಮೀನುಗಾರರು ಹಾಗೂ ಉಡುಪಿಯ ಜಿಲ್ಲೆಯ ಶಿರೂರಿನ ಒಬ್ಬ ಮೀನುಗಾರ ಇರಾನ್ ಬಂಧನ ದಲ್ಲಿದ್ದಾರೆ.

ಈ ಪೈಕಿ 6 ಮಂದಿ ಮೀನುಗಾರರನ್ನು ವಿಚಾರಣೆಯ ನೆಪದಲ್ಲಿ ಇರಾನ್ ಪೊಲೀಸರು ಜೈಲಿನಲ್ಲಿರಿಸಿದ್ದಾರೆ ಎಂದು ಹೇಳಲಾಗಿದೆ. ಇರಾನಿನ ಜೈಲಿನಲ್ಲಿಟ್ಟಿರುವುದಾಗಿ ಗೃಹಬಂಧನಕ್ಕೊಳಗಾಗಿರುವ ಭಟ್ಕಳದ ಜಾಮಿಯಾಬಾದ್ ನ ನಿವಾಸಿ ಉಸ್ಮಾನ್ ಇಸಾಖ್ ಬೊಂಬಾಯಿಕರ್ ವಾಟ್ಸಪ್ ಕರೆ ಮೂಲಕ ಭಟ್ಕಳದ ತನ್ನ ಕುಟುಂಬಕ್ಕೆ ಮಾಹಿತಿ ರವಾನಿಸಿದ್ದಾರೆ.
ಇರಾನ್ ನೌಕಾಪಡೆಯ ಬಂಧನದಲ್ಲಿರುವ ಈ ಭಾರತೀಯರನ್ನು ಬಿಡುಗಡೆಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಈ ಕುರಿತು ಬಂಧನಕ್ಕೊಳಪಟ್ಟಿರುವ 18 ಮಂದಿ ಮೀನುಗಾರರ ಕುಟುಂಬಸ್ಥರು ನಿನ್ನೆ ಭಟ್ಕಳದ ಸಹಾಯಕ ಆಯುಕ್ತರ ಮೂಲಕ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ರಿಗೆ ಮನವಿ ಸಲ್ಲಿಸಿದ್ದಾರೆ.
ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ, ಜಾಮಿಯಾಬಾದ್, ಮುರುಡೇಶ್ವರ, ಕುಮಟಾ ತಾಲೂಕಿನ ಹೊನ್ನಾಳ್ಳಿ ಭಾಗದಲ್ಲಿ ನಾಖುದಾ ಸಮುದಾಯ (ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಮುಸ್ಲೀಂ ಸಮುದಾಯ) ಕಳೆದ ಹತ್ತಾರು ವರ್ಷಗಳಿಂದ ದುಬೈ ಮತ್ತಿತರ ಗಲ್ಫ್ ರಾಷ್ಟ್ರಗಳಲ್ಲಿ ಮೀನುಗಾರಿಕಾ ವೃತ್ತಿಯಲ್ಲಿ ದುಡಿಯುತ್ತಿದ್ದಾರೆ.
2-3ವರ್ಷಗಳಿಗೊಮ್ಮೆ ಇವರು ತಮ್ಮ ತಮ್ಮ ಮನೆಗಳಿಗೆ ಬಂದು ಹೋಗಿ ಇಲ್ಲಿನ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ.












Click it and Unblock the Notifications