ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಶೇ. 11 ಹೆಚ್ಚಳ
ಮಂಗಳೂರು, ಮಾರ್ಚ್ 27: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಕ್ರಿಯಗೊಂಡಿದೆ. ಚುನಾವಣೆಯ ಪೂರ್ವ ತಯಾರಿಯ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈ ಕುರಿತು ವಿವರ ನೀಡಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಿಲ್ಲೆಗೆ ಇವಿಎಂ ಯಂತ್ರಗಳು ಈಗಾಗಲೇ ಬಂದಿದ್ದು, ಪರಿಶೀಲನೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,67,194 ಮತದಾರರಿದ್ದು, ಕಳೆದ ಸಾಲಿಗಿಂತ ಶೇ.11ರಷ್ಟು ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ 8,21,123 ಪುರುಷ ಹಾಗೂ 8,46,030 ಮಹಿಳೆ ಮತದಾರರು ಜಿಲ್ಲೆಯಲ್ಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 41 ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,858 ಮತಗಟ್ಟೆಗಳಿದ್ದು ಅದಕ್ಕೆ ಅನುಗುಣವಾಗಿ 2787 ಬ್ಯಾಲೆಟ್ ಯುನಿಟ್, 2727 ಕಂಟ್ರೋಲ್ ಯುನಿಟ್, 2450 ವಿವಿಪ್ಯಾಟ್ ಗಳನ್ನು ಈಗಾಗಲೇ ತರಿಸಲಾಗಿದೆ. ವಿವಿ ಪ್ಯಾಟ್ ಅನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಮಂಗಳೂರು ಉತ್ತರ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಹೆಚ್ಚು ವೆಚ್ಚ ಮಾಡಲಾಗುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ಈ ಕ್ಷೇತ್ರಗಳ ಮೇಲೆ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಯಾವುದೇ ಸರಕಾರಿ ಕಚೇರಿಯನ್ನು ಚುನಾವಣೆಯ ಹಿನ್ನೆಲೆಯಲ್ಲಿ ರಾಜಕಾರಣಿಗಳು ಬಳಸುವಂತಿಲ್ಲ. ಅವರಾಗಿಯೇ ಕಚೇರಿಯನ್ನು ಜಿಲ್ಲಾಡಳಿತದ ವಶಕ್ಕೆ ನೀಡಿದಲ್ಲಿ ಉತ್ತಮ ಎಂದು ಅವರು ಹೇಳಿದರು. ಒಂದು ವೇಳೆ ಕಚೇರಿಯನ್ನು ರಾಜಕೀಯಕ್ಕೆ ಬಳಸಿದರೆ ನಾವೇ ವಶಪಡಿಸುವ ಸ್ಥಿತಿ ಬರಬಹುದು ಎಂದು ಅವರು ಎಚ್ಚರಿಸಿದರು.
ಜಿಲ್ಲಾಡಳಿತದಿಂದ ಸಚಿವರುಗಳಿಗೆ ಒದಗಿಸಲಾಗುವ ಎಲ್ಲಾ ವಾಹನ ಸೌಲಭ್ಯ ಹಿಂಪಡೆಯಲಾಗಿದೆ. ಅನುಮತಿ ಹೊಂದಿರದ ಯಾವುದೇ ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ತೆಗೆಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications