ನ.24ರಿಂದ ನ.29ರ ವರೆಗೆ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ
ಸುಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ನವೆಂಬರ್ 24 ರಿಂದ ನ.29ರ ವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. 6 ದಿನಗಳ ವರೆಗೆ ಈ ದೀಪೋತ್ಸವದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಬೆಳ್ತಂಗಡಿ: ನವೆಂಬರ್.14 : ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸ ಪ್ರಯುಕ್ತ ನವೆಂಬರ್ 24 ರಿಂದ 29ರ ವರೆಗೆ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವ ಧರ್ಮ ಸಮ್ಮೇಳನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನ. 24 ರಂದು ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವದ ಮೂಲಕ ಲಕ್ಷ ದೀಪೋತ್ಸವ ಪ್ರಾರಂಭವಾಗಲಿದೆ. ಸರ್ವಧರ್ಮ ಸಮ್ಮೇಳನದ 84ನೇ ಅಧಿವೇಶನವು ಶಿರಹಟ್ಟಿಯ ಫಕೀರ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನೆಡೆಯಲಿದೆ.
ಹಾಗೂ ನ. 28 ರಂದು ನಡೆಯುವ ಸಾಹಿತ್ಯ ಸಮ್ಮೇಳದ 84ನೇ ಅಧಿವೇಶನ ಬೆಂಗಳೂರಿನ ಖ್ಯಾತ ಸಾಹಿತಿ ಎಂ. ಎನ್. ವ್ಯಾಸ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿದೆ. [ಮಂಜುನಾಥ, ಕೈಗೆ ಪ್ರಸಾದವೂ ಸಿಗುತ್ತಿಲ್ಲವಲ್ಲಪ್ಪ?]
24 ರಂದು ಸಂಜೆ 5ಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಕ್ರೀಡಾಂಗಣದಲ್ಲಿ 39ನೇ ವರ್ಷದ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಎಸ್.ಡಿ.ಎಂ. ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾಗಿದೆ.
ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಸ್ತು ಪ್ರದರ್ಶನ ಉದ್ಘಾಟಿಸುವರು. ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ವಸ್ತು ಪ್ರದರ್ಶನದ ಅಧ್ಯಕ್ಷತೆ ವಹಿಸುವರು.
ನ. 25 ರಂದು ಕೆರೆಕಟ್ಟೆ ಉತ್ಸವ, ನ. 26 ರಂದು ಉದ್ಯಾನೋತ್ಸವ ಕೂಡ ಜರುಗಲಿದೆ. ಪ್ರತಿ ದಿನ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ.