ಮತ್ತೆ ತಾರಕಕ್ಕೇರಿದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವಿವಾದ
ಮಂಗಳೂರು, ಅಕ್ಟೋಬರ್. 14: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ವಿವಾದ ಶಮನವಾಗುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ದಿನದಿಂದ ದಿನಕ್ಕೆ ಈ ವಿವಾದ ಜಟಿಲಗೊಳ್ಳುತ್ತಾ ಸಾಗುತ್ತಿದೆ.
ಸರ್ಪ ಸಂಸ್ಕಾರ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜಾ ವಿಧಿವಿಧಾನ ನಡೆಸುವ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ಮತ್ತೆ ತಾರಕಕ್ಕೇರಿದೆ.
ಕಳೆದ ಹಲವಾರು ದಿನಗಳ ಬೆಳವಣಿಗೆಗಳು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಯ ಹೇಳಿಕೆ ಆರೋಪಗಳಿಂದ ಮನನೊಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಉಪವಾಸ ಕೂರುವ ನಿರ್ಧಾರ ಕೈಗೊಂಡಿದ್ದಾರೆ.
ಇದರಿಂದ ಈ ವಿವಾದ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಕಂಡು ಬಂದಿವೆ.

ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಸುಬ್ರಹ್ಮಣ್ಯನ ಸೇವೆಗಳನ್ನ ನಡೆಸದಂತೆ ದೇವಸ್ಥಾನದ ಆಡಳಿತ ಮಂಡಳಿ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಈ ದೇವಾಲಯದ ಆಡಳಿತ ಮಂಡಳಿ ಹೇಳಿಕೆ ಹಾಗೂ ನಿರ್ಧಾರಗಳಿಂದ ತಮಗೆ ಕಿರಿಕಿರಿ ಉಂಟಾಗಿದೆ. ಇದರ ಜೊತೆಗೆ ತನಗೆ ನಿತ್ಯ ಜಪ ಮಾಡಲೂ ತೊಂದರೆಯಾಗುತ್ತಿದೆ. ಅಲ್ಲದೇ ಗೋಶಾಲೆಗೆ ಬರುತ್ತಿದ್ದ ನೀರನ್ನೂ ನಿಲ್ಲಿಸಿ ತೊಂದರೆ ಕೊಡಲಾಗುತ್ತಿದೆ" ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಸುಬ್ರಹ್ಮಣ್ಯನ ದರುಶನಕ್ಕೂ ಅವಕಾಶ ನೀಡದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ವಾಮೀಜಿ ಉಪವಾಸ ಆರಂಭಿಸಿದ್ದಾರೆ.
ದಶಕಗಳಿಂದ ದೇವಾಲಯ ಹಾಗೂ ಮಠದ ನಡುವೆ ವಿವಾದ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿವಾದ ತಾರಕಕ್ಕೆ ಏರಿದೆ. ದಿನಕ್ಕೆ ಒಂದು ಲೋಟ ನೀರು ಮಾತ್ರ ಕುಡಿದು ಅನಿರ್ಧಿಷ್ಟವಧಿ ಉಪವಾಸಕ್ಕೆ ಕೂತಿರುವ ಸ್ವಾಮೀಜಿ ನಿರ್ಧಾರದಿಂದ ಈ ವಿವಾದ ಮತ್ತಷ್ಟು ಜಟಿಲಗೊಂಡಂತಾಗಿದೆ.












Click it and Unblock the Notifications