'ಸರ್ಕಾರ ಜೀವಂತ ಇದೆ ಎಂಬುದನ್ನು ತೋರಿಸಿ ಕೊಡಿ'
ಮಂಗಳೂರು, ಏಪ್ರಿಲ್ 13 : 'ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿಲ್ಲ, ಸರ್ಕಾರ ಜೀವಂತ ಇದೆ ಎಂಬುದನ್ನು ತೋರಿಸಿ ಕೊಡಿ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಮಂಗಳವಾರ ದಕ್ಷಿಣ ಕನ್ನಡ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ.ಎಸ್.ಈಶ್ವರಪ್ಪ ಅವರು,'ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಬೇಜವಾಬ್ದಾರಿ ವರ್ತನೆ ತೋರುತ್ತಿದೆ. ಉಸ್ತುವಾರಿ ಸಚಿವರುಗಳು ಕೆಡಿಪಿ. ಸಭೆ ನಡೆಸುತ್ತಿಲ್ಲ' ಎಂದು ಆರೋಪಿಸಿದರು. [ಬರಪೀಡಿತ ಜಿಲ್ಲೆಗಳ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ]

'ಸರ್ಕಾರ ಗುತ್ತಿಗೆದಾರರಿಗೆ ಮೊದಲೇ ಅನುದಾನ ನೀಡಿ, ಕುಡಿಯುವ ನೀರಿನ ಕೊರತೆ ನೀಗಿಸಲು ಸೂಚನೆ ನೀಡಬೇಕಿತ್ತು. ಆದರೆ, ಸರ್ಕಾರ ಇದರಲ್ಲಿ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆಯನ್ನು ಈಗಲಾದರೂ ಅರಿತು ಪರಿಹಾರದ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಸರ್ಕಾರ ಜೀವಂತವಿದೆ ಎಂಬುದನ್ನು ತೋರಿಸಿಕೊಡಬೇಕು' ಎಂದು ಅವರು ಒತ್ತಾಯಿಸಿದರು. [ಉರಿ ಸೆಕೆಯ ಹಳೆ ದಾಖಲೆ ಸುಟ್ಟುಹಾಕಿದ ಬೆಂಗಳೂರು]
'ಕುಡಿಯುವ ನೀರಿಗೂ ಹಣ ನೀಡಲಾಗದಷ್ಟು ರಾಜ್ಯ ಸರ್ಕಾರ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ದಿಟ್ಟ ಹೆಜ್ಜೆ ಇಡುವುದಾಗಿ ಘೋಷಿಸಿತ್ತು. ಮೂರು ವರ್ಷದಲ್ಲಿ 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುವ ಭರವಸೆ ನೀಡಿತ್ತು. ಆದರೆ ಮೂರು ವರ್ಷ ಕಳೆದರೂ ಒಂದೇ ಒಂದು ನೀರಿನ ಘಟಕವನ್ನು ಪೂರ್ಣಗೊಳಿಸಲಾಗಿಲ್ಲ' ಎಂದು ಈಶ್ವರಪ್ಪ ದೂರಿದರು. [ಸುಡುತ್ತಿದೆ ಕರ್ನಾಟಕ, ಬಾ ಮಳೆಯೇ ಬೇಗ ಬಾ..]
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕರಾದ ಯೋಗೀಶ್ ಭಟ್, ಕೆ. ಮೋನಪ್ಪ ಭಂಡಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications