ಮಡೆಮಡೆ ಸ್ನಾನ ಅವಕಾಶಕ್ಕೆ ಸುಪ್ರೀಂ ಮೆಟ್ಟಿಲೇರಿದ ಸುಬ್ರಹ್ಮಣ್ಯದ ಭಕ್ತ
ಮಂಗಳೂರು, ಫೆಬ್ರವರಿ 28: ದೇಶದಾದ್ಯಂತ ಭಾರಿ ಚರ್ಚೆಗೆ ಗುರಿಯಾಗಿ, ವಿವಾದ ಸೃಷ್ಟಿಸಿದ್ದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಮಡೆಮಡೆ ಸ್ನಾನ ಮತ್ತೆ ಸುದ್ದಿಯಲ್ಲಿದೆ. ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಮಡೆಮಡೆ ಸ್ನಾನ ವಿಚಾರ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದೆ.
ಮಡೆಮಡೆ ಸ್ನಾನವನ್ನು ಮತ್ತೆ ಆರಂಭಿಸಬೇಕು ಎಂದು ಭಕ್ತರೊಬ್ಬರು ಸುಪ್ರೀಂಕೋರ್ಟ್ ನ ಬಾಗಿಲು ತಟ್ಟಿದ್ದಾರೆ. ಶ್ರೀ ಕ್ಷೇತ್ರದ ಭಕ್ತರಾದ ಬಂಟ್ವಾಳದ ಮಾಣಿ ನಿವಾಸಿ ಪಾರ್ಪಕಜೆ ವೆಂಕಟರಮಣ ಭಟ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು, ಸುಬ್ರಹ್ಮಣ್ಯದಲ್ಲಿ ಮಡೆಮಡೆ ಸ್ನಾನ ಮತ್ತೆ ಆರಂಭಿಸುವ ಕುರಿತಾದ ದಾವೆ ಸಲ್ಲಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್
ಅನಾದಿ ಕಾಲದಿಂದ ನಡೆದುಕೊಂಡು ಬಂದಿದ್ದ ಆಚರಣೆಯನ್ನು ನಿರಾಕರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಮನವಿಯಲ್ಲಿ ವೆಂಕಟರಮಣ ಭಟ್ ಉಲ್ಲೇಖ ಮಾಡಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಮುಂದಾಗಿದೆ.
ಈ ಸಾಲಿನಲ್ಲಿ ನಡೆದ ಚಂಪಾ ಷಷ್ಠಿಯ ಸಂದರ್ಭದಲ್ಲಿ ವೆಂಕಟರಮಣ ಭಟ್ ಅವರು ದೇವಾಲಯದ ಆಡಳಿತ ಮಂಡಳಿಯ ಹತ್ತಿರ ಮಡೆ ಮಡ ಸ್ನಾನಕ್ಕೆ ಅವಕಾಶ ಕೇಳಿದ್ದರು. ಆದರೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ವೆಂಕಟರಮಣ ಭಟ್ ಅವರ ಮನವಿಯನ್ನು ತಿರಸ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ ತನ್ನ ಮೂಲಭೂತ ಧಾರ್ಮಿಕ ಹಕ್ಕಿಗೆ ಧಕ್ಕೆಯಾಗಿದೆ ಎಂದು ವೆಂಕಟರಮಣ ಭಟ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.