ನಾಪತ್ತೆಯಲ್ಲ, ಕೊಲೆ... ಮಂಡ್ಯದಲ್ಲಿ 5 ವರ್ಷದ ನಂತರ ಬೆಳಕಿಗೆ ಬಂದ ಕೃತ್ಯ
ಮಂಡ್ಯ, ನವೆಂಬರ್ 21: ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸರು ಆಕೆಯ ಪತಿ ಸ್ವಾಮಿಯನ್ನು ಬಂಧಿಸಿದ್ದಾರೆ.
ಮಂಡ್ಯದ ಮಳವಳ್ಳಿ ತಾಲೂಕಿನ ನಂಜೇಗೌಡದೊಡ್ಡಿ ಗ್ರಾಮದ ಮೇಘನಾ ಐದು ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಪಾಂಡವಪುರ ತಾಲೂಕಿನ ತಿರುಮಲಾಪುರದ ಸ್ವಾಮಿ ಎಂಬಾತನನ್ನು 2014ರಲ್ಲಿ ಮೇಘನಾ ಪ್ರೀತಿಸಿ ಮದುವೆಯಾಗಿದ್ದಳು. ಆನಂತರ ತವರು ಮನೆಯೊಂದಿಗೆ ಕೆಲ ದಿನ ಸಂಪರ್ಕದಲ್ಲಿದ್ದ ಆಕೆ ನಂತರ ಸಂಪರ್ಕ ಕಡಿದುಕೊಂಡಿದ್ದಳು. ಫೋನ್ ಗೆ ಕೂಡ ಸಿಕ್ಕಿರಲಿಲ್ಲ.
5 ವರ್ಷದ ಹಿಂದೆ ನಾಪತ್ತೆಯಾದ ಮಗಳಿಗಾಗಿ ತಾಯಿ ದೂರು; ಮರ್ಯಾದಾ ಹತ್ಯೆ ಶಂಕೆ
ಇದೇ ಅಕ್ಟೋಬರ್ ತಿಂಗಳಿನಲ್ಲಿ ಮೇಘನಾ ತಾಯಿ ಮಹದೇವಮ್ಮ ಅವರಿಗೆ ಮನೆಯ ಬೀರುವಿನಲ್ಲಿ ಸ್ವಾಮಿಯ ಗುರುತಿನ ಚೀಟಿ ದೊರೆತಿದ್ದು, ಆ ವಿಳಾಸವನ್ನು ಹುಡುಕಿಕೊಂಡು ತಿರುಮಲಾಪುರಕ್ಕೆ ಬಂದಿದ್ದರು. ಆದರೆ ಅಲ್ಲಿ ಮೇಘನಾ ನಾಪತ್ತೆಯಾಗಿರುವ ವಿಷಯ ತಿಳಿದುಬಂದಿತ್ತು. ಆಕೆ ಕೊಲೆಯಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು.
ನಂತರ ಮಹದೇವಮ್ಮ ಮಗಳು ನಾಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಹಿಳಾ ಆಯೋಗಕ್ಕೆ ನ್ಯಾಯ ಕೊಡಿಸುವಂತೆ ಮೊರೆ ಹೋಗಿದ್ದರು. ಜಾತಿ ಬೇರೆ ಎಂಬ ಕಾರಣಕ್ಕೆ ಸ್ವಾಮಿ ಹಾಗೂ ಮನೆಯವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಮಹದೇವಮ್ಮ ಆರೋಪಿಸಿದ್ದರು. ದೂರು ಕೊಟ್ಟರೂ ವಿಚಾರಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಕೈಗೊಂಡಿದ್ದು, ಆರೋಪಿ ಪತಿಯಿಂದ ಈಗ ಸತ್ಯಾಂಶ ಬೆಳಕಿಗೆ ಬಂದಿದೆ.
Recommended Video
ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಪತಿ ಸ್ವಾಮಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಈ ವೇಳೆ ಮೇಘನಾಳನ್ನು ತಾನೇ ವಿಶ್ವೇಶ್ವರಯ್ಯ ನಾಲೆಗೆ ತಳ್ಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಮಾಹಿತಿ ಆಧರಿಸಿ ಪಾಂಡವಪುರ ಠಾಣೆಯಲ್ಲಿ ಐದು ವರ್ಷದ ಹಿಂದೆ ನಾಲೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮೂಲಕ ಐದು ವರ್ಷಗಳಿಂದ ಮುಚ್ಚಿ ಹೋಗಿದ್ದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.