ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರ ಯೋಗಭ್ಯಾಸ
ಮಂಡ್ಯ, ಏಪ್ರಿಲ್ 27; ಕೆ. ಆರ್. ಪೇಟೆ ಪಟ್ಟಣದ ಹೊಸಹೊಳಲು ಚಿಕ್ಕಕೆರೆ ಬಳಿ ಇರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.
ಕೋವಿಡ್ ಸೋಂಕಿತರಿಗೆ ತಾಲೂಕಿನ ಯೋಗಗುರು ಅಲ್ಲಮಪ್ರಭು ಅವರು ನಿತ್ಯ ಯೋಗಾಭ್ಯಾಸ ಮಾಡಿಸುವ ಮೂಲಕ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಕೋವಿಡ್ ಸೋಂಕಿತರು ಇರುವ ಕೇಂದ್ರಗಳತ್ತ ಮುಖ ಮಾಡಲು ಭಯಪಡುತ್ತಿರುವ ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಗಂಟೆ ಗಟ್ಟಲೆ ಯೋಗ, ಪ್ರಾಣಾಯಾಮಗಳನ್ನು ಹೇಳಿಕೊಡುವ ಮೂಲಕ ರೋಗಿಗಳ ಆರೋಗ್ಯ ಚೇತರಿಕೆಯಾಗುವಂತೆ ಮಾಡುವಲ್ಲಿ ಅವರು ನಿರತರಾಗಿದ್ದಾರೆ.

ವಾರ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಲವಲವಿಕೆ ಮೂಡುತ್ತಿಲ್ಲ. ಆದರೆ ಈ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕು ಪೀಡಿತ ರೋಗಿಗಳಲ್ಲಿ ಕೇವಲ ನಾಲ್ಕೈದು ದಿನಗಳಲ್ಲಿಯೇ ಆರೋಗ್ಯದಲ್ಲಿ ಚೇತರಿಗೆ, ಲವಲವಿಕೆ ಕಂಡು ಬರುತ್ತಿದೆ. ಚಿಕಿತ್ಸೆಗಿಂತಲೂ ಯೋಗ, ಪ್ರಾಣಾಯಾಮ ಅಭ್ಯಾಸವು ರೋಗ ಬೇಗ ಗುಣಮುಖರಾಗುವಂತಹ ವಾತಾವರಣವನ್ನು ಸೃಷ್ಠಿಸುತ್ತಿದೆ.
ಯೋಗದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೆಣಸಿನ ಹಾಲು, ಶುಂಠಿ-ಬೆಳ್ಳುಳ್ಳಿ, ಅರಿಷಿನ ಮಿಶ್ರಿತ ಕಷಾಯ ನೀಡಲಾಗುತ್ತಿದೆ. ಇದನ್ನು ಸೇವಿಸಿದರೆ ಎಂತಹ ಕೋವಿಡ್ ಕಾಯಿಲೆಯೂ ಕೆಲವೇ ದಿನಗಳಲ್ಲಿ ದೂರವಾಗುತ್ತದೆ.
"ಕಾಯಿಲೆ ಬಾರದಂತೆ ತಡೆಯಲು ಇದೇ ರೀತಿಯ ಕಷಾಯ ಸೇವಿಸಬೇಕು. ನಿತ್ಯ ಯೋಗಾಸನಾ, ವ್ಯಾಯಾಮ, ಪ್ರಾಣಾಯಾಮಗಳನ್ನು ಮಾಡಬೇಕು. ಈ ಮೂಲಕ ಯಾವುದೇ ರೋಗಗಳು ಹತ್ತಿರ ಬಾರದಂತೆ ನೋಡಿಕೊಳ್ಳಬಹುದು" ಎಂದು ಯೋಗಗುರು ಅಲ್ಲಮ ಪ್ರಭು ಹೇಳಿದ್ದಾರೆ.

ಇದರ ಜೊತೆಗೆ ಕೊರೊನಾ ಪೀಡಿತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರೋಗ ಲಕ್ಷಣಗಳು ಕಂಡ ಕೂಡಲೇ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆಗೆ ದಾಖಲಾಗಬೇಕು. ಯಾವುದೇ ಕಾರಣಕ್ಕೂ ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ ಕಂಡು ಬಂದ ತಕ್ಷಣ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು 45ವರ್ಷ ತುಂಬಿದ ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕು. ಅಲ್ಲದೆ ಹಣ್ಣು-ಹಂಪಲು, ತರಕಾರಿ, ಮೊಳಕೆ ಕಾಳುಗಳ ಆಹಾರವನ್ನು ಸೇವಿಸಬೇಕು. ಈ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಯಾವುದೇ ಕಾಯಿಲೆಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಈ ಕುರಿತು ಮಾತನಾಡಿದ ತಹಸೀಲ್ದಾರ್ ಎಂ. ಶಿವಮೂರ್ತಿ, "ಕೋವಿಡ್ ರೋಗಿಗಳನ್ನು ಕಂಡರೆ ಅವರ ಸಂಬಂಧಿಕರೇ ದೂರ ಹೋಗುತ್ತಿರುವ ಈ ಸಂದರ್ಭದಲ್ಲಿ ಕೇಂದ್ರದಲ್ಲಿ ರೋಗಿಗಳಿಗೆ ಯೋಗ, ಪ್ರಾಣಾಯಾಮ ಹೇಳಿಕೊಡುವ ಮೂಲಕ ರೋಗಿಗಳು ಬೇಗ ಗುಣಮುಖರಾಗಲು ಸಹಕಾರ ನೀಡುತ್ತಿರುವ ತಾಲೂಕಿನ ಯೋಗಪಟು ಅಲ್ಲಮಪ್ರಭು ಅವರ ನಿಸ್ವಾರ್ಥ ಸೇವೆ ಅಭಿನಂದನೀಯ" ಎಂದು ಹೇಳಿದ್ದಾರೆ.












Click it and Unblock the Notifications