ವಿದ್ಯಾರ್ಥಿಗಳಿಗೆ ಇತಿಹಾಸ ಪಾಠ ಮಾಡಿದ ಯದುವೀರ್!
ಮಂಡ್ಯ, ಆಗಸ್ಟ್ 2: ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ನೀರು ಹಂಚಿಕೆ ಸಂಬಂಧ ಆಗಿರುವ ಹಳೆಯ ಒಪ್ಪಂದವನ್ನು ಬದಲಾವಣೆ ಮಾಡಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಎದ್ದಿರುವ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದು ಒಳ್ಳೆಯದು. ಹೀಗಂಥ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೈಸೂರಿನ ಕಲಿಸು ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಹಾರಾಜರಿಂದ ಕಲಿಯಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಆರ್ಎಸ್ ಜಲಾಶಯ ನಿರ್ಮಾಣ ಕುರಿತಂತೆ ಇತಿಹಾಸದ ಬಗ್ಗೆ ಮಾತನಾಡುತ್ತಾ ಕಾವೇರಿ ನೀರಿನ ಸಂಬಂಧ ಆಗಿರುವ ಪುರಾತನ ಒಪ್ಪಂದವನ್ನು ಬದಲಾದ ಪರಿಸ್ಥಿತಿಯಲ್ಲಿ ಒಪ್ಪಿಕೊಳ್ಳುವುದು ಅಸಾಧ್ಯವಾಗಿದೆ. ಇತ್ತೀಚೆಗೆ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಜಲಾಶಯ ಭರ್ತಿಯಾಗುತ್ತಿಲ್ಲ ಹೀಗಿರುವಾಗ ಹಿಂದಿನ ಒಪ್ಪಂದ ಬದಲಾಗಿ ಮಳೆಯಾಧಾರಿತವಾಗಿ ನೀರನ್ನು ಎರಡು ರಾಜ್ಯಗಳಿಗೆ ಹಂಚಿಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಹಳೆಯ ಒಪ್ಪಂದಗಳನ್ನು ತೆಗೆದು ಹೊಸದಾಗಿ ಎರಡು ರಾಜ್ಯಗಳು ಸಮರ್ಥವಾಗಿ ನೀರು ಬಳಸಿಕೊಳ್ಳುವ ಯೋಜನೆಗಳನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಾವೇರಿ ತಪ್ಪಲಿನ ರೈತರ ಪರಿಸ್ಥಿತಿ ಕಠಿಣವಾಗಿದೆ ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನಹರಿಸಬೇಕಿದೆ ಎಂದರು.
ಇನ್ನು ಇತಿಹಾಸ ಮತ್ತು ಸಂಸ್ಕೃತಿ ಕುರಿತು ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳು ರಾಜ ಯದುವೀರ್ ಅವರನ್ನು ಮೈಸೂರು ಸಂಸ್ಥಾನಕ್ಕೆ ನೀವು ಎಷ್ಟನೇ ರಾಜ? ಅರಮನೆ ಕಟ್ಟಿದ್ದು ಯಾರು? ಅರಮನೆಯಲ್ಲಿ ಯಾರ್ಯಾರು ವಾಸವಿದ್ದಾರೆ? ನೀವು ಹೇಗೆ ರಾಜರಾದಿರಿ? ನಿಮಗೆ ಯಾವ ಭಾಷೆ ಇಷ್ಟ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆಲ್ಲ ಉತ್ತರಿಸಿ ಯದುವೀರ್ ಖುಷಿಪಟ್ಟರು.
ಈ ವೇಳೆ ಮಾತನಾಡಿದ ಅವರು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೆ, ಕಲಿಸು ಫೌಂಡೇಶನ್ ಸೇರಿದಂತೆ ಈಗಿರುವ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಹೇಳಿದರು.