ಸಾಲ ಪಡೆದು ಗಂಡ ಮಕ್ಕಳೊಂದಿಗೆ ಮಹಿಳೆ ಪರಾರಿ
ಮಂಡ್ಯ, ಜುಲೈ 27 : ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಸಾಲ ಪಡೆದಿದ್ದ ಮಹಿಳೆಯೊಬ್ಬಳು ಯಾರಿಗೂ ಗೊತ್ತಾಗದಂತೆ ಕುಟುಂಬ ಸಹಿತ ನಾಪತ್ತೆಯಾಗಿರುವ ಘಟನೆಯೊಂದು ಮೇಲುಕೋಟೆಯ ಮಹದೇಶ್ವರಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇದೀಗ ಸಾಲ ನೀಡಿದ ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥರು ಚಿಂತಾಕ್ರಾಂತರಾಗಿದ್ದು ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. [ಪ್ರೇಯಸಿಗಾಗಿ ಐಸಿಐಸಿಐ ಬ್ಯಾಂಕ್ ಗೆ 79 ಕೋಟಿ ಪಂಗನಾಮ!]

ಮೇಲುಕೋಟೆ ಹೋಬಳಿ ಮಹದೇಶ್ವರಪುರ ಗ್ರಾಮದ ನಿವಾಸಿಯಾಗಿರುವ ಗೀತಾರಾಜು ಕಳೆದ ಎಂಟು ವರ್ಷದ ಹಿಂದೆಯಷ್ಟೆ ಬಂದು ನೆಲೆಸಿದ್ದು, ಹಲವು ಸ್ವಸಹಾಯ ಸಂಘಗಳಲ್ಲಿ ಸದಸ್ಯರಾಗುವ ಮೂಲಕ ಮತ್ತು ಇತರೆ ಮಹಿಳಾ ಸದಸ್ಯರ ಜಾಮೀನಿನೊಂದಿಗೆ ಎಸ್ಕೆಎಸ್ ಮೈಕ್ರೋ ಫೈನಾನ್ಸ್ನಲ್ಲಿ 25 ಸಾವಿರ, ಡಿಎಸ್ಎಸ್ ಹಣಕಾಸು ಸಂಸ್ಥೆಯಲ್ಲಿ 20 ಸಾವಿರ ರೂ, ಗ್ರಾಮೀಣ ಕೂಟ ಸಂಗ್ರಹ ಎಂಬ ಸಂಸ್ಥೆಯಲ್ಲಿ 26 ಸಾವಿರ ರೂ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಗೆ ಸಂಸ್ಥೆಯಿಂದ 40 ಸಾವಿರ ರೂ, ಮಹಿಳಾ ಸ್ವಸಹಾಯ ಸಂಘದಿಂದ 20 ಸಾವಿರ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ 1.5 ಲಕ್ಷ ರೂ. ಸೇರಿದಂತೆ ಸುಮಾರು 3 ಲಕ್ಷಕ್ಕೂ ಹೆಚ್ಚು ಹಣವನ್ನು ಸಾಲ ಪಡೆದುಕೊಂಡಿದ್ದು, ಒಂದು ಕಡೆ ಮಾಡಿದ ಸಾಲವನ್ನು ಮತ್ತೊಂದು ಕಡೆ ಹೇಳದೆ ಗೌಪ್ಯವಾಗಿಟ್ಟಿದ್ದಳು. ಇದೀಗ ಗಂಡ ಮಕ್ಕಳ ಸಹಿತ ರಾತ್ರೋರಾತ್ರಿ ಪರಾರಿಯಾಗಿದ್ದಾರೆ.
ಗ್ರಾಮದಲ್ಲಿರುವ ಸಂಘದ ಮಹಿಳೆಯರು ಕೂಲಿ ಮಾಡಿ ಕಷ್ಟಪಟ್ಟು ಹಣವನ್ನು ಉಳಿಸುವ ದೃಷ್ಟಿಯಿಂದ ಸಂಘ ಸಂಸ್ಥೆಗಳ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಅವರನ್ನೇ ಜಾಮೀನಿಗೆ ನಿಲ್ಲಿಸಿ ಹಣ ಪಡೆದು ಪರಾರಿಯಾಗಿರುವುದರಿಂದ ಮಹಿಳೆಯರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. [ವಂಚಕಿ ಲೀನಾಳ ಪ್ರಿಯಕರನ ಜಾತಕ ಬಯಲು]












Click it and Unblock the Notifications