ಮಂಡ್ಯದಲ್ಲಿ ಕಮಲ ಅರಳಿಸುವ ಯೋಗೇಶ್ವರ್ ತಂತ್ರ ಫಲ ನೀಡುವುದೆ?
ಮಂಡ್ಯ, ನವೆಂಬರ್ 13: ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಾಬಲ್ಯದ ಮಧ್ಯೆ ಮಂಡ್ಯದಲ್ಲಿ ಕಮಲ ಅರಳಿಸಲು ಶಾಸಕ- ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ.
ಮಂಡ್ಯದಲ್ಲಿ ಬಿಜೆಪಿಗೆ ವರ್ಚಸ್ಸಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ. ಇಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ದೇ ಹವಾ. ಹೀಗಿರುವಾಗ ಇದೆರಡು ಪಕ್ಷಕ್ಕೆ ಸೆಡ್ಡು ಹೊಡೆದು ಬಿಜೆಪಿಯನ್ನು ಗಟ್ಟಿಗೊಳಿಸಲು ಯೋಗೇಶ್ವರ್ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಮಂಡ್ಯದಿಂದಲೇ ನನ್ನ ಸ್ಪರ್ಧೆ, ಮಗನ ಸಿನಿಮಾ ಸದ್ಯವೇ ಆರಂಭ: ಅಂಬಿ
ಆದರೆ, ಇಲ್ಲಿ ಬಿಜೆಪಿಯನ್ನು ಬೆಳೆಸುವುದು ಅಷ್ಟು ಸುಲಭವಾ ಎಂಬ ಪ್ರಶ್ನೆಯೂ ಎಲ್ಲರನ್ನೂ ಕಾಡುತ್ತಿದೆ. ಈಗಾಗಲೇ ಚನ್ನಪಟ್ಟಣದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಗೆ ತನ್ನದೇ ಆದ ವರ್ಚಸ್ಸಿದೆ. ಅದನ್ನು ಅವರು ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಅದಕ್ಕೆ ಅವರು ಪಕ್ಷೇತರರಾಗಿ ಗೆಲುವು ಸಾಧಿಸಿದ್ದೇ ಸಾಕ್ಷಿಯಾಗಿದೆ.
ಡಿಕೆಶಿ ನನ್ನ ವಿರುದ್ದ ಸ್ಪರ್ಧಿಸಲಿ :ಸಿ.ಪಿ.ಯೋಗೇಶ್ವರ್ ಸವಾಲು
ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಅವರನ್ನು ಗೆಲ್ಲಿಸುವಂತೆ ಮಾಡಿವೆ. ಐದು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದ ಅವರು ಇದೀಗ ಬಿಜೆಪಿಯತ್ತ ಹೊರಟಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿವೆ. ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಯೋಗೇಶ್ವರ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿರುವುದು ಇದಕ್ಕೆ ಕಾರಣವಾಗಿದೆ.
ಬಿಜೆಪಿಯ ಖಾತೆ ತೆರೆಯುವ ಉತ್ಸಾಹದಲ್ಲಿ ಯೋಗೇಶ್ವರ್
ಸದ್ಯ ಮಂಡ್ಯದತ್ತ ಮುಖ ಮಾಡಿರುವ ಯೇಗೇಶ್ವರ್ ಈ ಬಾರಿ ಶತಾಯಗತಾಯ ಬಿಜೆಪಿಯ ಖಾತೆಯನ್ನು ಇಲ್ಲಿ ತೆರೆದೇ ತೆರೆಯುತ್ತೇನೆ ಎನ್ನುತ್ತಿದ್ದಾರೆ. ಮಂಡ್ಯದಲ್ಲಿ ಗೆಲುವು ಸಾಧಿಸಿ, ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಅಂಬರೀಶ್ ಇಲ್ಲಿ ಕಾಣಿಸಿಕೊಂಡಿದ್ದೇ ಅಪರೂಪ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆ, ಸಮಾರಂಭಗಳಲ್ಲಾಗಲೀ ಭಾಗವಹಿಸಲೇ ಇಲ್ಲ. ಜನರ ಕಷ್ಟ ಸುಖಗಳಿಗೆ ಸಿಗಲೇ ಇಲ್ಲ. ಅದರಲ್ಲೂ ಸಚಿವ ಸ್ಥಾನ ಕಳೆದುಕೊಂಡ ಬಳಿಕವಂತೂ ಪಕ್ಷ ಮತ್ತು ಇತರೆ ಎಲ್ಲ ಕಾರ್ಯಕ್ರಮಗಳಿಂದಲೂ ದೂರವಾಗಿಯೇ ಉಳಿದುಬಿಟ್ಟರು.
ರಮ್ಯಾ-ಅಂಬರೀಶ್ ಪೈಪೋಟಿ
ಈ ಬೆಳವಣಿಗೆಯನ್ನು ಗಮನಿಸಿರುವ ಯೊಗೇಶ್ವರ್ ಮಂಡ್ಯದಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಿಯೇ ತೀರುತ್ತೇನೆ ಎಂಬ ಪಣ ತೊಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಬಾರಿ ಅಂಬರೀಶ್ ಮತ್ತು ರಮ್ಯಾ ನಡುವೆ ಪೈಪೋಟಿ ನಡೆಯುವ ಸಾಧ್ಯತೆಯಿದೆ. ರಮ್ಯಾ ಅವರು ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗೆ ಹೈಕಮಾಂಡ್ ನ ಕೃಪಾಕಟಾಕ್ಷವೂ ಇರುವುದರಿಂದ ಟಿಕೆಟ್ ಸಿಗುವುದು ಕಷ್ಟವಾಗಲಾರದು.
ಮೋದಿಯನ್ನು ಮಂಡ್ಯಕ್ಕೆ ಕರೆತಂದು ಸಮಾವೇಶ
ಆದರೆ, ಅಂಬರೀಶ್ ಬಿಟ್ಟು ಕೊಡಲು ತಯಾರಿಲ್ಲ. ಇದರಿಂದ ಕಾಂಗ್ರೆಸ್ ಗೆ ಅಭ್ಯರ್ಥಿ ಆಯ್ಕೆಯೂ ಕಷ್ಟವಾಗಬಹುದು. ಇದರ ಲಾಭ ಪಡೆಯಲು ಜೆಡಿಎಸ್ ಮತ್ತು ಬಿಜೆಪಿ ಕಾಯುತ್ತಿವೆ. ಈ ಅಂಶವನ್ನೇ ಲಾಭವಾಗಿ ಪರಿವರ್ತಿಸಲು ಯೋಗೇಶ್ವರ್ ಕೂಡ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಡ್ಯಕ್ಕೆ ಕರೆತಂದು ಸಮಾವೇಶ ನಡೆಸಿ, ಗೆಲುವಿಗೆ ಶ್ರಮಿಸುವುದು ಅವರ ಆಲೋಚನೆ. ಈ ಬಗ್ಗೆ ರಾಜ್ಯ ಹಾಗೂ ರಾಷ್ಟ್ರ ನಾಯಕರೊಂದಿಗೆ ಚರ್ಚಿಸಲಿದ್ದಾರಂತೆ.
ಇಪ್ಪತೈದರಿಂದ ಮೂವತ್ತು ಮಂದಿ ಬಿಜೆಪಿಗೆ ಸೇರ್ಪಡೆ
2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಇಬ್ಬರು ಶಾಸಕರಾದರೂ ಬಿಜೆಪಿಯಿಂದ ಆಯ್ಕೆಯಾಗಬೇಕು. ಅದಕ್ಕೆ ಏನೆಲ್ಲ ತಂತ್ರ ಮಾಡಬೇಕೋ ಎಲ್ಲವನ್ನೂ ಅವರು ಮಾಡಲಿದ್ದಾರಂತೆ. ಅಲ್ಲದೆ ಅವರ ಜತೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಇಪ್ಪತೈದರಿಂದ ಮೂವತ್ತು ಮಂದಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರಂತೆ. ಯೋಗೇಶ್ವರ್ ಅವರಲ್ಲಿ ಬಿಜೆಪಿಯನ್ನು ಸಂಘಟಿಸುವ ಉತ್ಸಾಹ ಎದ್ದು ಕಾಣುತ್ತಿದೆ. ಅವರ ತಂತ್ರಗಳು ಮಂಡ್ಯದಲ್ಲಿ ಫಲಿಸುತ್ತಾ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.