ಮುಖ್ಯಶಿಕ್ಷಕನ ಕೊಲೆಗೆ ಹೆಂಡತಿ, ಮಗಳಿಂದಲೇ ಸುಪಾರಿ
ಮದ್ದೂರಿನ ಕೆ.ಎಂ.ದೊಡ್ಡಿಯಲ್ಲಿ ಮಾ.31ರಂದು ನಡೆದಿದ್ದ ಮುಖ್ಯಶಿಕ್ಷಕನ ಹತ್ಯೆ ಪ್ರಕರಣದಲ್ಲಿ ಆತನ ಪತ್ನಿ ಹಾಗೂ ಮಗಳನ್ನು ಪೊಲೀಸರು ಬಂಧಿಸಿದ್ದು, ಹತ್ಯೆಗೆ ಸುಪಾರಿ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಮಂಡ್ಯ, ಏಪ್ರಿಲ್ 3: ಮದ್ದೂರಿನ ಕೆ.ಎಂ.ದೊಡ್ಡಿಯಲ್ಲಿ ಮಾರ್ಚ್ 31ರಂದು ಹಾಡಹಗಲೇ ನಡೆದಿದ್ದ ಮುಖ್ಯಶಿಕ್ಷಕನ ಹತ್ಯೆ ಪ್ರಕರಣದ ರಹಸ್ಯ ಬಯಲಾಗಿದ್ದು, ಪತ್ನಿ ಹಾಗೂ ಮಗಳೇ ಸುಪಾರಿ ನೀಡಿರುವುದು ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.
ಸ್ವರ್ಣಸಂದ್ರ ಬಡಾವಣೆಯ ನಿವಾಸಿ, ಬಿದರಹೊಸಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಶಿಭೂಷಣ್ ಅವರನ್ನು ಮಾರ್ಚ್ 31ರಂದು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಪತ್ನಿ ಶಾಂತಮ್ಮ ಹಾಗೂ ಮಗಳು ನವ್ಯಶ್ರೀ ಸುಪಾರಿ ನೀಡಿದ್ದರೆಂಬುದು ಇಬ್ಬರ ಬಳಿ ಇದ್ದ ಮೊಬೈಲ್ ಗಳನ್ನು ತನಿಖೆಗೊಳಪಡಿಸಿದ ಪೊಲೀಸರಿಗೆ ಖಚಿತವಾಗಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಮುಖ್ಯಶಿಕ್ಷಕರಾಗಿದ್ದ ಶಶಿಭೂಷಣ್ ಹಾಗೂ ಪತ್ನಿ ಶಾಂತಮ್ಮ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಒಂದು ಹಂತದಲ್ಲಿ ಇಬ್ಬರೂ ವಿಚ್ಛೇದನ ಪಡೆಯುವ ಹಂತವನ್ನೂ ತಲುಪಿದ್ದರು. ಆ ಸಮಯದಲ್ಲಿ ಸಂಬಂಧಿಕರು ನಡೆಸಿದ ಸಂಧಾನದಿಂದ ಒಟ್ಟಿಗೆ ವಾಸ ಮಾಡುತ್ತಿದ್ದರು. ಆದರೂ ಇಬ್ಬರ ನಡುವೆ ವೈಮನಸ್ಯ ಮಾತ್ರ ಇತ್ತು ಎನ್ನಲಾಗಿದೆ.[ಮದ್ದೂರು ತಾಲೂಕಿನಲ್ಲಿ ಶಾಲಾ ಮುಖ್ಯೋಪಾಧ್ಯಾಯನ ಕೊಲೆ]

ಶಶಿಭೂಷಣ್ ಮತ್ತು ಶಾಂತಮ್ಮ ಒಂದೇ ಮನೆಯಲ್ಲಿ ವಾಸವಾಗಿದ್ದರೂ ಇಬ್ಬರ ನಡುವೆ ಅನ್ಯೋನ್ಯತೆ ಇರಲಿಲ್ಲ. ಮೂರು ತಿಂಗಳ ಹಿಂದಷ್ಟೇ ಶಶಿಭೂಷಣ್ ಸ್ವರ್ಣಸಂದ್ರ ಬಡಾವಣೆಯಲ್ಲಿ ನಿರ್ಮಿಸಿದ್ದ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಈ ಗೃಹ ಪ್ರವೇಶಕ್ಕೆ ಮಗಳಿಗೆ ಆಮಂತ್ರಣ ನೀಡಿರಲಿಲ್ಲ. ಇದು ಮಗಳಲ್ಲಿ ತಂದೆಯ ಬಗ್ಗೆ ದ್ವೇಷ ಮೂಡಲು ಕಾರಣವಾಗಿತ್ತು.
ಈ ಎಲ್ಲ ಕಾರಣದಿಂದ ಆಕ್ರೋಶಗೊಂಡ ತಾಯಿ- ಮಗಳು ಶಶಿಭೂಷಣ್ ಹತ್ಯೆಗಾಗಿ ಮೈಸೂರು ಮೂಲದ ಹಂತಕರೊಂದಿಗೆ ಮಾತುಕತೆ ನಡೆಸಿ, 5 ಲಕ್ಷ ರುಪಾಯಿಗೆ ಸುಪಾರಿ ನೀಡಿದ್ದರು.[ಮಂಡ್ಯದಲ್ಲಿ ಮಗಳ ಮೇಲೆ ಅತ್ಯಾಚಾರ: ದೊಡ್ಡಪ್ಪ ಬಂಧನ]
ಕೊಲೆಗೆ ಅನುಕೂಲವಾಗುವಂತೆ ಶಶಿಭೂಷಣ್ ಭಾವಚಿತ್ರ, ಹೋಗುವ ಮಾರ್ಗದ ರಸ್ತೆ, ಶಾಲೆಯ ಚಿತ್ರ ಎಲ್ಲವನ್ನೂ ವಾಟ್ಸಾಪ್ ಮೂಲಕ ಹಂತಕರಿಗೆ ರವಾನಿಸಿದ್ದರು. ಮಾರ್ಚ್ 31ರಂದು ಶಶಿಭೂಷಣ್ ಮನೆ ಬಿಡುವ ಸಮಯವನ್ನೂ ದುಷ್ಕರ್ಮಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.
ಇವರು ನೀಡಿದ ಸುಳಿವಿನ ಮೇರೆಗೆ ಹೊಂಚು ಹಾಕಿ ಕುಳಿತಿದ್ದ ಹಂತಕರು, ಗುಡಿಗೆರೆ-ಅರೆಚಾಕನಹಳ್ಳಿ ಮಾರ್ಗದಲ್ಲಿ ಹೋಗುತ್ತಿದ್ದ ಶಶಿಭೂಷಣ್ ಬೈಕ್ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ, ನಂತರ ಕತ್ತು ಕೊಯ್ದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಇದೀಗ ಪೊಲೀಸರು ಪತ್ನಿs ಶಾಂತಮ್ಮ ಹಾಗೂ ಪುತ್ರಿ ನವ್ಯಶ್ರೀಯನ್ನು ಬಂಧಿಸಿದ್ದು, ಹಂತಕರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.











Click it and Unblock the Notifications