ಜೆಡಿಎಸ್ ಕಾರ್ಯಕರ್ತ ದೇವೇಗೌಡರ ಕ್ಷಮೆ ಕೋರಿದ್ದೇಕೆ?
ಮಂಡ್ಯ, ಡಿಸೆಂಬರ್ 21: ಉಪಚುನಾವಣೆ ಬಳಿಕ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತ ಕೆರಗೋಡು ತಮ್ಮಣ್ಣ ಎಂಬುವರು ಎಚ್.ಡಿ. ದೇವೇಗೌಡ ಕುಟುಂಬದ ಕುರಿತಂತೆ ಆಕ್ರೋಶದ ಮಾತುಗಳನ್ನಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಯಕರು ತೀವ್ರ ಮುಜುಗರಕ್ಕೊಳಗಾಗಿದ್ದರು.
ಇದೀಗ ಆ ಕುರಿತಂತೆ ಸ್ಪಷ್ಟನೆ ನೀಡಿರುವ ಕೆರಗೋಡು ತಮ್ಮಣ್ಣ ಅವರು, "ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋತಿದ್ದಕ್ಕೆ ನನಗೆ ಬೇಸರವಾಗಿ, ಮನನೊಂದು ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಬಗ್ಗೆ ಕಟು ಪದ ಬಳಸಿ ಮಾತನಾಡಿದ್ದೆ" ಎಂದಿದ್ದಾರೆ.
"ಜೆಡಿಎಸ್ ಸೋಲಿನಿಂದ ನಾನು ಮತ್ತು ನನ್ನ ಕುಟುಂಬದವರು ತುಂಬಾ ನೊಂದಿದ್ದೇವೆ. ನನ್ನ ಮಾತುಗಳಿಂದ ದೇವೇಗೌಡರ ಕುಟುಂಬಕ್ಕೆ ನೋವಾಗಿರುವುದು ಸತ್ಯ. ನನ್ನ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸುತ್ತಿದ್ದು, ಮುಂದೆ ಈ ರೀತಿ ಆಗದಂತೆ ಮುಂಜಾಗ್ರತೆ ವಹಿಸುತ್ತೇನೆ" ಎಂದು ಹೇಳಿದ್ದಾರೆ.

ಕ"ಳೆದ 20 ವರ್ಷಗಳಿಂದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದು, ಈಗಲೂ ನನ್ನ ಮನೆಯಲ್ಲಿ ಕುಮಾರಸ್ವಾಮಿಯವರ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದೇನೆ. ನನ್ನಿಂದ ಏನಾದರೂ ತಪ್ಪು ಆಗಿದ್ದರೆ ತಮ್ಮ ಮನೆಯ ಮಗನೆಂದು ತಿಳಿದು ಕ್ಷಮಿಸಬೇಕು" ಎಂದು ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಕೋರಿದ್ದಾರೆ. ಇವರು ಸ್ಪಷ್ಟನೆ ಕೇಳಿದ ಬಳಿಕ ಈ ವೀಡಿಯೋ ಇನ್ನಷ್ಟು ವೈರಲ್ ಆಗುತ್ತಿರುವುದು ಕಂಡು ಬಂದಿದೆ.












Click it and Unblock the Notifications