ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಮಂಡ್ಯ ಸಂಸದೆ ಸುಮಲತಾ?
ಮಂಡ್ಯ, ಜೂನ್ 01: ಬಿಜೆಪಿ ಬೆಂಬಲದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಘಟಾನುಘಟಿ ಎದುರಾಳಿ ಹಾಗೂ ಅವರ ಬೆಂಬಲಿಗರನ್ನು ಸೋಲಿಸಿ ಗೆದ್ದಿರುವ ಸುಮಲತಾ ಅವರು ಕಾಂಗ್ರೆಸ್ ಪಕ್ಷವನ್ನೇ ಸೇರಿಕೊಳ್ಳುತ್ತಾರಾ ಎಂಬ ಅನುಮಾನ ಮೂಡಿದೆ.
ಸುಮಲತಾ ಅವರ ಚಿತ್ರ ಕಾಂಗ್ರೆಸ್ ಪಕ್ಷದವರು ಮಂಡ್ಯದಲ್ಲಿ ಹಾಕಿರುವ ಫ್ಲೆಕ್ಸ್, ಬ್ಯಾನರ್ಗಳಲ್ಲಿ ರಾರಾಜಿಸುತ್ತಿದೆ. ಚೆಲುವರಾಯಸ್ವಾಮಿ ಶುಭಾಶಯ ಕೋರುತ್ತಿರುವ ಫ್ಲೆಕ್ಸ್ ಗಮನ ಸೆಳೆಯುತ್ತಿದೆ. ಇಷ್ಟು ಮಾತ್ರವಲ್ಲದೆ ಕಾಂಗ್ರೆಸ್ನ ಇನ್ನೂ ಹಲವರು ಹಾಕಿರುವ ಫ್ಲೆಕ್ಸ್ಗಳಲ್ಲಿ ಸುಮಲತಾ ಅವರ ಚಿತ್ರ ಕಾಣಿಸಿಕೊಳ್ಳುತ್ತಿದೆ.
ಸುಮಲತಾ ಅಂಬರೀಷ್ಗೆ ನಿಖಿಲ್ ಕುಮಾರಸ್ವಾಮಿ ಶುಭ ಹಾರೈಕೆ
ಸುಮಲತಾ ಅವರು ಇತ್ತೀಚೆಗಷ್ಟೆ, ಚೆಲುವರಾಯ ಸ್ವಾಮಿ ಅವರಿಗೆ ಶುಭಕೋರಿ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿದ್ದರು. ನನ್ನ ಹಿತೈಶಿ ಚೆಲುವರಾಯಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಸುಮಲತಾ ಅವರು ಹಾರೈಸಿದ್ದರು. ಸುಮಲತಾ ಅವರು ಬಹಿರಂಗವಾಗಿ ಕಾಂಗ್ರೆಸ್ನ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಅವರು ಕಾಂಗ್ರೆಸ್ ಸೇರುತ್ತಾರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಮಂಡ್ಯ ಮತದಾರರ ಪಾದಕ್ಕೆ ನಮಿನಿಸಿದ ದರ್ಶನ್
ಅಂಬರೀಶ್ ಕಾಂಗ್ರೆಸ್ ನಲ್ಲಿಯೇ ಇದ್ದರು
ಅಂಬರೀಶ್ ಅವರು ರಾಜಕೀಯವನ್ನು ಜೆಡಿಎಸ್ನಿಂದ ಪ್ರಾರಂಭ ಮಾಡಿದ್ದರೂ ಸಹ, ಅವರು ಬೆಳೆದಿದ್ದ ಕಾಂಗ್ರೆಸ್ನಲ್ಲಿ ಸುಮಲತಾ ಅವರು ಮೊದಲಿಗೆ ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಕೇಳಿದ್ದರು. ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ. ಆದರೂ ಅವರು ಗೆದ್ದು ಬಂದರು. ಈಗ ಮತ್ತೆ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರಾ ಎಂಬ ಅನುಮಾನ ಮೂಡುತ್ತಿದೆ.
ರಹಸ್ಯ ಸಭೆ ನಡೆಸಿದ್ದ ಸುಮಲತಾ
ಮಂಡ್ಯದ ಮತದಾನ ಮುಗಿದ ಮೇಲೆ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ರಮೇಶ್ ಬಂಡಸಿದ್ದೇಗೌಡ, ಗಣಿಗ ರವಿಕುಮಾರ್, ಮಳವಳ್ಳಿ ಶಿವರಾಮ್ ಇನ್ನೂ ಹಲವು ಕಾಂಗ್ರೆಸ್ ನಾಯಕರು ಸುಮಲತಾ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದರು.
ಸಿದ್ದರಾಮಯ್ಯ ಬೆಂಬಲಿಗರ ಮೂಲಕ ಆಪರೇಷನ್ ಹಸ್ತ?
ಸುಮಲತಾ ಅವರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದ ನಾಯಕರಿಗೆ ಧನ್ಯವಾದ ಅರ್ಪಿಸಲು ಕರೆದ ಸಭೆ ಇದು ಎನ್ನಲಾಗಿತ್ತು. ಅದು ನಿಜವೂ ಹೌದು, ಆದರೆ ಈ ಸಭೆಯಲ್ಲಿದ್ದ ಬಹುತೇಕರು ಸಿದ್ದರಾಮಯ್ಯ ಅವರ ಬೆಂಬಲಿಗರು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ಸುಮಲತಾ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಯತ್ನವನ್ನು ಮಾಡುತ್ತಿದ್ದಾರೆಂಬ ಸುದ್ದಿ ಮಂಡ್ಯದಲ್ಲಿ ಹರಿದಾಡುತ್ತಿದೆ.
ಬಿಜೆಪಿಗೆ ಸಂಖ್ಯೆಯ ದೃಷ್ಟಿಯಿಂದ ಅವಶ್ಯಕತೆ ಇಲ್ಲ
ಬಿಜೆಪಿಗೆ ಅವಶ್ಯಕತೆ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಆಯ್ಕೆ ಆಗಿರುವ ಬಿಜೆಪಿಗೆ ಸಂಖ್ಯೆಯ ದೃಷ್ಟಿಯಿಂದ ಸುಮಲತಾ ಅವರ ಅವಶ್ಯಕತೆ ಇಲ್ಲ. ಆದರೆ ಕಾಂಗ್ರೆಸ್ಗೆ ಹಾಗಿಲ್ಲ, ಅವರಿಗೆ ಸಂಖ್ಯೆಯ ಅವಶ್ಯಕತೆ ಇದೆ. ಹಾಗಾಗಿ ಕಾಂಗ್ರೆಸ್ ಸುಮಲತಾ ಅವರನ್ನು ಸೆಳೆದುಕೊಳ್ಳಲು ಯತ್ನಿಸುತ್ತಿದೆ. ಬಿಜೆಪಿ ಇದಕ್ಕೆ ಹೆಚ್ಚಿನ ತಡೆ ಒಡ್ಡುತ್ತಿಲ್ಲವೆನ್ನಲಾಗುತ್ತಿದೆ.
ಸುಮಲತಾ ಏನು ಹೇಳಿದ್ದರು?
ಚುನಾವಣೆ ಸಮಯದಲ್ಲಿ ಮತ್ತು ಅದರ ನಂತರ ಸುಮಲತಾ ಅವರು ಹೇಳಿದ್ದೆಂದರೆ, ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ, ಅಕಸ್ಮಾತ್ ರಾಜಕೀಯ ಪಕ್ಷ ಸೇರಲೇಬೇಕು ಎಂಬ ಸಮಯ ಬಂದದ್ದೇ ಆದಲ್ಲಿ, ಜನರ ಅಭಿಪ್ರಾಯ ಪಡೆದೆ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಹೇಳಿದ್ದರು. ಸುಮಲತಾ ಅವರು ಭವಿಷ್ಯದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕು ಎಂದರೆ ಪಕ್ಷವೊಂದರ ಸೂರಿನಡಿ ಸೇರಲೇ ಬೇಕು ಅದು ಯಾವ ಪಕ್ಷ ಸೇರುತ್ತಾರೆ ಕಾದುನೋಡಬೇಕಿದೆ.