ಕನಗನಮರಡಿ ದುರಂತದಲ್ಲಿ ಮೃತಪಟ್ಟವರಿಗೆ ಶಾಂತಿಪೂಜೆ
ಪಾಂಡವಪುರ, ಡಿಸೆಂಬರ್ 31: ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ನಡೆದ ಇತ್ತೀಚೆಗೆ ಖಾಸಗಿ ಬಸ್ ದುರಂತದ ಸ್ಥಳದಲ್ಲಿ ಭಾನುವಾರ ಬೆಳಿಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಶಾಂತಿ ಹೋಮ ಪೂಜೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಪೂಜೆ ಹೋಮ ನಡೆಯತು.
ಕನಗನಮರಡಿ ಬಸ್ ದುರಂತ: ಚಾಲಕನಿಗೆ ಷರತ್ತು ಬದ್ಧ ಜಾಮೀನು
ಹೋಮದ ಪೂಜೆಗಳಲ್ಲಿ ಕನಗನಮರಡಿ ಗ್ರಾಮದ ಯಜಮಾನರಾದ ಬಸವೇಗೌಡ, ಶಿವಣ್ಣೇಗೌಡ, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ಶಾಂತಿ ಹೋಮದಲ್ಲಿ ಸ್ವತಿ ಪುಣ್ಯಹಾ ಪಂಚಗವ್ಯ ಪ್ರೋತ್ಸಾಹ, ಮೃತ್ಯುಂಜಯ ಹೋಮ, ರಾಕ್ಷೆಜ್ಞ, ವಾಸ್ತುಹೋಮ, ಅಗೋರ ಅಸ್ತ್ರ, ಕ್ಷೇತ್ರಪಾಲ, ಅಷ್ಟಕ್ಪಾಲಕ ಹೋಮ, ಭೂತೋಚ್ಛಾಟನೆಯ ಹೋಮ, ಪ್ರಧಾನ ಗ್ರಾಮದೇವತೆ ಅಂಕನಾಥೇಶ್ಚರ ಹೋಮ, ಶುದ್ಧಗಣಪತಿ ಹೋಮ, ಮಹಾಗಣಪತಿ ಹೋಮ ನಡೆಸಿ ಸ್ಥಳದಲ್ಲಿ ಮುಂದೆ ಯಾವುದೇ ದುರಂತ ಸಂಭವಿಸದಂತೆ ದೇವರದಲ್ಲಿ ಪ್ರಾರ್ಥಿಸಿದರು.
ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯಿತು. ಹೋಮ ನಡೆಸುವ ಮೂಲಕ ಗ್ರಾಮಸ್ಥರು ಜನರ ಮನಸ್ಸಿನಲ್ಲಿದ್ದ ಭಯದ ವಾತಾವರಣವನ್ನು ಹೋಗಲಾಡಿಸುವ ಪ್ರಯತ್ನ ನಡೆಸಿದ್ದಾರೆ. ತಾಲೂಕಿನ ಕನಗನಮರಡಿ ಗ್ರಾಮದ ಸಮೀಪದ ಹೊರವಲಯದಲ್ಲಿ ಕಳೆದ ನ.24 ರಂದು ಪಾಂಡವಪುರದಿಂದ ಕನಗನಮರಡಿ ಗ್ರಾಮದ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ರಸ್ತೆ ಬದಿಯ ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದು ಸಂಭವಿಸಿದ ದುರಂತದಲ್ಲಿ ಶಾಲಾ ಮಕ್ಕಳು ಸೇರಿದಂತೆ ಸುಮಾರು 30 ಕ್ಕೂ ಮಂದಿ ಮೃತಪಟ್ಟಿದ್ದರು.
ಮಂಡ್ಯ ಬಸ್ ದುರಂತ : ಚಾಲಕ ಶಿವಣ್ಣ ಹೇಳುವುದೇನು?
ಬಸ್ ದುರಂತದಲ್ಲಿ ಮಕ್ಕಳು ಸೇರಿದಂತೆ ಸಾಕಷ್ಟು ಮಂದಿ ಮೃತಪಟ್ಟಿದ್ದರಿಂದ ದುರಂತದ ಸ್ಥಳದಲ್ಲಿ ದೆವ್ವ-ಭೂತಗಳ ಕಾಟವಿದೆ ಎಂಬುದಾಗಿ ವದಂತಿ ಹಬ್ಬಿತ್ತು. ಕಾಕತಾಳೀಯ ಎಂಬಂತೆ ದುರಂತ ನಡೆದ ಸ್ಥಳದಲ್ಲಿ ಕಾರು ಮತ್ತು ಸ್ಕೂಟರ್ ಪಲ್ಟಿಯಾಗಿತ್ತು ಇದರಿಂದ ದೆವ್ವ-ಭೂತದ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.
30 ಮಂದಿ ಪ್ರಾಣ ಹೋಗಿದ್ದ ಕನಗನಮರಡಿ ನಾಲೆಯ ಕಂಡರೆ ಭಯವೋ ಭಯ
ಇದಾದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರು ಸಾಕಷ್ಟು ಭಯಭೀತರಾಗಿ ರಾತ್ರಿಯ ವೇಳೆ ಈ ರಸ್ತೆಯಲ್ಲಿಯೇ ಸಂಚರಿಸಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿತ್ತು. ರೈತರು ಜಮೀನುಗಳಿಗೂ ಹೋಗಲು ಹೆದರುತ್ತಿದ್ದರು. ಇದರಿಂದ ದುರಂತ ನಡೆದ ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ಗ್ರಾಮಸ್ಥರು ನಿರ್ಧರಿಸಿ ಭಾನುವಾರ ಬೆಳಿಗ್ಗೆ ಶಾಂತಿ ಹೋಮ ನಡೆಸಿದ್ದಾರೆ.