ಕನ್ನಡ ಸಿನಿಮಾಗಳು ಸೋಲುವುದಕ್ಕೆ ಪ್ರಮುಖ ಕಾರಣ ತಿಳಿಸಿದ ವಿ.ಮನೋಹರ್: ಏನದು?, ಇಲ್ಲಿದೆ ವಿವರ
ಮಂಡ್ಯ, ಮೇ, 25: ಇಂದಿನ ಬಹುತೇಕ ಚಿತ್ರಗಳ ಕಥೆಯಲ್ಲಿ ಜೀವಾಳವಿಲ್ಲದಿರುವುದೇ ಸೋಲಿಗೆ ಪ್ರಮುಖ ಕಾರಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಿತ್ರ ನಿರ್ದೇಶಕ ವಿ.ಮನೋಹರ್ ಅಸಮಾಧನ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಿನಿಮಾ ಜನರನ್ನು ಆಕರ್ಷಿಸಬೇಕಾದರೆ ಕಥೆ ಬಹಳ ಮುಖ್ಯ ಆಗುತ್ತದೆ. ಕೇವಲ ಹೀರೋಯಿಸಂ, ಹೀರೋಗೆ ಬಿಲ್ಡಪ್ ಕೊಡುವ ಡೈಲಾಗ್ಗಳು, ಡಬಲ್ ಮೀನಿಂಗ್ ಡೈಲಾಗ್ಗಳಿಂದ ಕೂಡಿರುವ ಚಿತ್ರಗಳು ಜನರನ್ನು ತಲುಪುವುದಿಲ್ಲ. ಇಂತಹ ಎಷ್ಟೋ ಸಿನಿಮಾಗಳು ಒಂದೇ ದಿನಕ್ಕೆ ಮಾಯ ಆಗಿರುವುದನ್ನು ನೋಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಂಗಿತರಂಗ, ಒಂದು ಮೊಟ್ಟೆಯ ಕಥೆ, ಯು- ಟರ್ನ್, ಕೆಜಿಎಫ್, ಕಾಂತಾರದಂತಹ ಕೆಲವು ಚಿತ್ರಗಳು ಜನರ ಮನಸ್ಸನ್ನು ಗೆದ್ದವು. ಹೊಸಬರು ಮಾಡುವ ಹೊಸ ಪ್ರಯೋಗಗಳನ್ನು ಜನರು ಇಷ್ಟಪಟ್ಟಿದ್ದಾರೆ. ಅವುಗಳಲ್ಲಿ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದುದರಿಂದ ಜನರು ಆ ಚಿತ್ರಗಳತ್ತ ಆಕರ್ಷಿತರಾದರು. ಇಂತಹ ಏರಿಳಿತಗಳು ಕನ್ನಡ ಚಿತ್ರರಂಗದಲ್ಲಿ ಉಂಟಾಗುತ್ತಿರುತ್ತವೆ ಎಂದರು.
ಯುವ ನಿರ್ದೇಶಕರು ಹಾಗೂ ನಿರ್ಮಾಪಕರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಲು ಒಲವು ತೋರಿದರೆ ಚಿತ್ರರಂಗ ಇನ್ನಷ್ಟು ಬೆಳೆಯಲು ಸಾಧ್ಯ ಆಗುತ್ತದೆ. ಹಣ ಮಾಡುವುದಕ್ಕೆ ಚಿತ್ರವನ್ನು ನಿರ್ಮಿಸುವುದಾದರೆ ಅವುಗಳಿಗೆ ಉಳಿಗಾಲ ಇರುವುದಿಲ್ಲ ಎಂದು ಹೇಳಿದರು.
ಹಾಗೆಯೆ ಉತ್ತಮ ಚಿತ್ರಗಳಿಗೆ ಅತ್ಯುತ್ತಮ ಹಾಡುಗಳನ್ನು ಬರೆಯುವ ಪ್ರತಿಭಾವಂತ ಸಾಹಿತಿಗಳು ಈಗಲೂ ಇದ್ದಾರೆ. ಆದರೆ ಚಿತ್ರದ ಸನ್ನಿವೇಶಕ್ಕೆ ಪೂರಕ ಆಗುವಂತಹ ಹಾಡುಗಳನ್ನು ರಚಿಸುವ ಅವಕಾಶಗಳು ಅವರಿಗೆ ಸಿಗುತ್ತಿಲ್ಲ ಎಂದರು.
ಜಯಂತ್ ಕಾಯ್ಕಿಣಿ, ಕವಿರಾಜ್, ನಾಗೇಂದ್ರ ಪ್ರಸಾದ್ ಸೇರಿದಂತೆ ಅನೇಕ ಸಾಹಿತಿಗಳಿದ್ದಾರೆ. ಪ್ರಸ್ತುತ ಸಂಗೀತ ನಿರ್ದೇಶಕರು ನೀಡುವ ರೆಡಿಮೇಡ್ ಟ್ಯೂನ್ಗಳಿಗೆ ಸಾಹಿತ್ಯ ಬರೆಯುವಂತಹ ಸನ್ನಿವೇಶ ಸೃಷ್ಟಿ ಆಗಿದೆ. ಅಂತಹ ಸಾಮರ್ಥ್ಯ ಕೂಡ ಜಯಂತ್ ಕಾಯ್ಕಿಣಿ ಅವರಲ್ಲಿದೆ. ಆದರೆ ಕಥೆಗೆ ಹೊಂದಿಕೊಂಡಂತೆ ಮೂಡಿ ಬರುವ ಸಾಹಿತ್ಯ ಹೆಚ್ಚು ಸತ್ವಯುತ ಆಗಿರುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.












Click it and Unblock the Notifications