ರೈತರಿಗೆ ಅನ್ಯಾಯ ಆಗಲು ಬಿಡಲ್ಲ- ಕೇಂದ್ರ ಸಚಿವ ಅಮಿತ್ ಶಾ ಭರವಸೆ
ಮಂಡ್ಯ, ಡಿಸೆಂಬರ್ 30: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶುಕ್ರವಾರ ಮಂಡ್ಯದ ಗೆಜ್ಜಲಗೆರೆ ಡೈರಿ ಆವರಣದಲ್ಲಿ ಮೆಗಾ ಡೈರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮನ್ ಮೂಲ್ ಪ್ರಗತಿ ಪ್ರಥ ಪುಸ್ತಕವನ್ನು ಸಹ ಅಮಿತ್ ಶಾ ಬಿಡುಗಡೆಗೊಳಿಸಿದ್ದಾರೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಅಮಿತ್ ಶಾ, ಮಂಡ್ಯ ಮೆಗಾ ಡೈರಿ ವೇದಿಕೆಯಲ್ಲಿ ಹೇಳುತ್ತಿದ್ದೇನೆ, ಸಹಕಾರಿಗಳಿಗೆ, ರೈತರಿಗೆ ಅನ್ಯಾಯ ಆಗಲು ಬಿಡಲ್ಲ ಎಂದು ಜಿಲ್ಲೆಯ ಹಾಲು ಉತ್ಪಾದಕರಿಗೆ ಭರವಸೆ ನೀಡಿದರು.
260 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಹಾಲಿನ ಡೈರಿ ನಿರ್ಮಾಣ ಆಗಿದೆ. ಇದರಲ್ಲಿ ಪ್ರತಿದಿನ 10 ಲಕ್ಷ ಲೀಟರ್ ಹಾಲು ಸಂಸ್ಕರಣೆ ಆಗುತ್ತದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್ ಸಂಸ್ಕರಣೆಗೆ ಒತ್ತು ನೀಡಲಾಗುವುದು. ದೇಶದಲ್ಲಿ ಕರ್ನಾಟಕ ಹೈನುಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹೆಚ್ಚು ರೈತರು ಇದರಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಮಾತು ಮುಂದುವರಿಸಿದ ಅಮಿತ್ ಶಾ, 16 ಜಿಲ್ಲೆಗಳಿಂದ 28ಕೋಟಿ ರೂಪಾಯಿ ಹಣ 26 ಲಕ್ಷ ರೈತರಿಗೆ ಜಮೆ ಆಗುತ್ತಿದೆ. 1975ರಿಂದ ಇಲ್ಲಿಯವರೆಗೆ ಕರ್ನಾಟಕ ಡೈರಿ ಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದೆ. ಮಿಲ್ಕ್ ಫೆಡರೇಶನ್ನಲ್ಲಿ ಮೊದಲು ನಾಲ್ಕು ಕೋಟಿ ವ್ಯವಹಾರ ಇತ್ತು.ಈಗ 25 ಕೋಟಿ ವ್ಯವಹಾರ ನಡೆಯುತ್ತಿದೆ ಎಂದರು.
ಇನ್ನು ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಕೆಲಸ ಮಾಡಬೇಕು. ಇದರಿಂದ ಎಲ್ಲಾ ಹಳ್ಳಿಗಳಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡಬಹುದು. ಎನ್ಡಿಡಿ ಮೂಲಕ ಪ್ರತಿ ಪಂಚಾಯತಿಯಲ್ಲಿ ಡೈರಿ ಸ್ಥಾಪನೆ ಮಾಡಲಾಗುತ್ತದೆ. ಎರಡು ಲಕ್ಷ ಪ್ರೈಮರಿ ಡೈರಿ ನಿರ್ಮಾಣ ಮಾಡುವ ಮೂಲಕ ಹೆಚ್ಚಿನ ಹಾಲನ್ನು ಸಂಗ್ರಹಿಸಬೇಕು. ಗುಜರಾತ್ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಸೇರಿ ಮತ್ತಷ್ಟು ಉತ್ಪಾದನೆ ಮಾಡಬೇಕು. ಇದಕ್ಕೆ ಬೇಕಾದ ಎಲ್ಲಾ ಪ್ರೋತ್ಸಾಹವನ್ನು ಸಹಕಾರ ಇಲಾಖೆ ನೀಡುತ್ತದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ರೈತರಿಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಕ್ಷೀರ ಭಾಗ್ಯ ಯೋಜನೆಯಲ್ಲಿ 52ಲಕ್ಷ ಲೀಟರ್ ಹಾಲನ್ನು ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುತ್ತಿದೆ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ. ಮಂಡ್ಯ ಮೆಗಾ ಡೈರಿಯ ಅಧ್ಯಕ್ಷರಿಗೂ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.












Click it and Unblock the Notifications