ಜೋಡಿ ಕೊಲೆ ನಡೆದ ತೊಪ್ಪನಹಳ್ಳಿಗೆ ಐಜಿಪಿ ಭೇಟಿ, ಪರಿಶೀಲನೆ
ಮಂಡ್ಯ, ಜನವರಿ 25: ಇಬ್ಬರು ಜೆಡಿಎಸ್ ಕಾರ್ಯಕರ್ತರ ಕೊಲೆ ನಡೆದು ಇಡೀ ಮಂಡ್ಯ ಜಿಲ್ಲೆಯೇ ಬೆಚ್ಚಿ ಬೀಳುವಂತೆ ಮಾಡಿದ್ದ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಕೊಲೆಗೈದು ಜೈಲು ಸೇರಿರುವ ಆರೋಪಿಗಳಿಂದ ಕೊಲೆಗೀಡಾದ ಕುಟುಂಬಸ್ಥರಿಗೆ ಜೀವಬೆದರಿಕೆಯಿದ್ದು ಸಮಸ್ಯೆ ಸರಿಪಡಿಸಲು ಐಜಿಪಿ ಮುಂದಾಗಿದ್ದಾರೆ.
ಕೊಲೆಗೈದು ಜೈಲ್ ಸೇರಿರುವ ಆರೋಪಿಗಳಿಂದ ಆಗಿಂದಾಗ್ಗೆ ಕೊಲೆಗೀಡಾದವರ ಮನೆಯವರಿಗೆ ಜೀವಬೆದರಿಕೆ ಹಾಕಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಎನ್ನಲಾಗಿದ್ದು ಈ ಸಂಬಂಧ ತಾವು ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಿ ಎಂದು ಘಟನೆಯಲ್ಲಿ ಸಾವನ್ನಪ್ಪಿದ ಮೃತ ಮುತ್ತುರಾಜು ಕುಟುಂಬಸ್ಥರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.[ಒಂದು ವಾರದಲ್ಲಿ ಮಂಡ್ಯದ ನಾಲ್ವರು ಜೆಡಿಎಸ್ ಕಾರ್ಯಕರ್ತರ ಕೊಲೆ!]
ಘಟನೆ ನಡೆದು ಒಂದು ತಿಂಗಳಾದರೂ ತೊಪ್ಪನಹಳ್ಳಿಯಲ್ಲಿ ಇನ್ನೂ ಕೂಡ ಭಯದ ವಾತಾವರಣ ಹಾಗೆಯೇ ಇದೆ. ಹೀಗಾಗಿ ಪೊಲೀಸರು ಗ್ರಾಮದತ್ತ ನಿಗಾವಹಿಸಿದ್ದಾರೆ. ರಾಜಕೀಯ ದ್ವೇಷಗಳು ಗ್ರಾಮದ ಜನರ ನೆಮ್ಮದಿಯನ್ನು ಕಿತ್ತುಕೊಂಡಿದ್ದು ಆತಂಕದಲ್ಲಿ ಬದುಕುವಂತಾಗಿದೆ. ತಮಗೆ ಕೊಲೆ ಆರೋಪಿಗಳಿಂದ ಬೆದರಿಕೆಯಿದ್ದು, ರಕ್ಷಣೆ ಒದಗಿಸಿ ಎಂದು ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.[ಮದ್ದೂರಿನಲ್ಲಿ ಗುಂಪು ಘರ್ಷಣೆ: ಇಬ್ಬರ ಕೊಲೆ, ಐವರ ಬಂಧನ]
ತೊಪ್ಪನಹಳ್ಳಿಗೆ ಭೇಟಿ ನೀಡಿದ ದಕ್ಷಿಣವಲಯ ಐಜಿಪಿ ವಿಪುಲ್ ಕುಮಾರ್ ಅವರು ಘಟನೆ ಕುರಿತಂತೆ ಪೊಲೀಸ್ ಅಧಿಕಾರಿಗಳಿಂದ ಮತ್ತು ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ. ಗ್ರಾಮದ ನಿವಾಸಿ ಮೃತ ಕೋಟಿ ಮುತ್ತುರಾಜು ಸಹೋದರ ಚನ್ನೇಗೌಡ ಹಾಗೂ ಗ್ರಾಮದ ಮುಖಂಡರಾದ ನಾಗೇಶ್, ಮಹದೇವು, ಕುಮಾರ್ ಅವರನ್ನು ಭೇಟಿ ಮಾಡಿ ಅವರಿಂದಲೂ ಕೆಲವು ಅಗತ್ಯ ಮಾಹಿತಿ ಪಡೆದು, ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ. ಅಲ್ಲದೆ ಮೃತರ ಕುಟುಂಬದವರಿಗೆ ರಕ್ಷಣೆ ನೀಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.