ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಕಾರಿನ ಎಂಜಿನ್ ನಲ್ಲಿ ಹೊಗೆ
ಶ್ರೀರಂಗಪಟ್ಟಣ (ಮಂಡ್ಯ), ಏಪ್ರಿಲ್ 11: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಕಾರು ಶ್ರೀರಂಗಪಟ್ಟಣದ ಪಿ.ಹಳ್ಳಿಯ ಬಳಿ ತಾಂತ್ರಿಕ ದೋಷದಿಂದ ನಿಂತುಹೋದ ಘಟನೆ ಬುಧವಾರದಂದು ನಡೆದಿದೆ. ಇಡೀ ದಿನ ವಿಪರೀತ ಪ್ರಯಾಣ ಮಾಡಿದ್ದರಿಂದ ಕಾರಿನ ಎಂಜಿನ್ ಬಿಸಿಯಾಗಿ, ಹೊಗೆ ಬಂದು ನಿಂತಿತು ಎಂದು ಕಾರಿನ ಚಾಲಕ ಹೇಳಿದ್ದಾರೆ.
ಎಂಜಿನ್ ಬಿಸಿಯಾಗಿದ್ದರಿಂದ ಹೊಗೆ ಬಂದಿದೆಯೇ ವಿನಾ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಕಪ್ಪು ಬಣ್ಣದ ರೇಂಜ್ ರೋವರ್ ಕಾರನ್ನೇ ಬಳಸುತ್ತಿದ್ದಾರೆ. ಈ ಕಾರನ್ನು ಅವರ ಪಾಲಿಗೆ ಅದೃಷ್ಟ ಎಂದು ಸ್ವತಃ ಕುಮಾರಸ್ವಾಮಿ ನಂಬಿದ್ದಾರೆ.

ಕಾರಿನಲ್ಲಿ ಹೊಗೆ ಕಾಣಿಸಿಕೊಂಡು ನಿಂತುಹೋದ ಮೇಲೆ ಮತ್ತೊಂದು ಕಾರಿನಲ್ಲಿ ಕುಮಾರಸ್ವಾಮಿ ಅವರು ಪ್ರಯಾಣ ಮುಂದುವರಿಸಿದ್ದಾರೆ. ಆದರೆ ಅಷ್ಟರಲ್ಲಿ ಮಾಧ್ಯಮಗಳಲ್ಲಿ ಈ ಸುದ್ದಿ ಚಾಲನೆಗೆ ಬಂದಿತ್ತು. ಕರ್ನಾಟಕದಲ್ಲಿ ಎರಡು ಹಂತದಲ್ಲಿ, ಅಂದರೆ ಏಪ್ರಿಲ್ ಹದಿನೆಂಟು ಮತ್ತು ಇಪ್ಪತ್ಮೂರರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.












Click it and Unblock the Notifications