ರಾತ್ರೋರಾತ್ರಿ ಬಿಜೆಪಿ ಮುಖಂಡರನ್ನು ಭೇಟಿಯಾದ್ರಾ ಸುಮಲತಾ? ಬಿಜೆಪಿಗೆ ಸೇರ್ತಾರಾ?
Recommended Video

ಮಂಡ್ಯ, ಮಾರ್ಚ್ 8: ಲೋಕಸಭಾ ಚುನಾವಣೆ ಸಿದ್ಧತೆ ಗರಿಗೆದರಿದೆ ಎಲ್ಲಾ ಪಕ್ಷಗಳು ಯಾರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎನ್ನುವ ಚರ್ಚೆಯಲ್ಲಿ ತೊಡಗಿದೆ.
ಇನ್ನೊಂದೆಡೆ ಹೊಸಬರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನಕೂಡ ಇದರಿಂದ ಹೊರತಾಗಿಲ್ಲ. ಇದೀಗ ತೀವ್ರ ಕುತೂಹಲ ಮೂಡಿಸಿರುವುದು ಮಾಜಿ ಸಚಿವ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ಅಂಬರೀಶ್ ಅವರು ಯಾವ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವುದು.
ಅಂಬರೀಶ್ ಅವರು ಕಾಂಗ್ರೆಸ್ನಲ್ಲಿದ್ದ ಕಾರಣ ಕಾಂಗ್ರೆಸ್ನಿಂದಲೇ ನಿಲ್ಲುವ ಕುರಿತು ಸುಮಲತಾ ಒಲವು ತೋರಿಸಿದ್ದರು.ಆದರೆ ಇದೀಗ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವಿರುವ ಕಾರಣ ಮಂಡ್ಯದಿಂದ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ತಯಾರಿ ನಡೆದಿರುವ ಕಾರಣ ಅಲ್ಲಿಯೂ ದೋಸ್ತಿಯನ್ನು ಮುಂದುವರೆಸಿದ್ದು ಸುಮಲತಾ ಅವರಿಗೆ ಟಿಕೆಟ್ ನೀಡಲು ಪರೋಕ್ಷವಾಗಿ ನಿರಾಕರಿಸಿದೆ.

ಅದಕ್ಕೆ ಸುಮಲತಾ ಅವರು ನನಗೆ ಪಕ್ಷವಿಲ್ಲದಿದ್ದರೂ ತೊಂದರೆಯಿಲ್ಲ ಜನರು ನನ್ನನ್ನು ಚುನಾವಣೆಗೆ ನಿಲ್ಲಿಸಲು ಬಯಸುತ್ತಿದ್ದಾರೆ ನಾನು ಪಕ್ಷೇತರಳಾಗಿಯೇ ಸ್ಪರ್ಧೆಗಿಳಿಯುತ್ತೇನೆ ಎಂದಿದ್ದರು.
ಬಿಜೆಪಿಯವರು ನನ್ನನ್ನು ಕೇಳಿಲ್ಲ ಹಾಗಾಗಿ ಬಿಜೆಪಿಗೆ ಹೋಗುವ ಬಗ್ಗೆ ಆಲೋಚನೆ ಇಲ್ಲ ಎಂದು ಕೂಡ ಹೇಳಿದ್ದರು. ಆದರೆ ಇದೀಗ ದಿಢೀರ್ ಬೆಳವಣಿಗೆ ನಡೆದಿದ್ದು ಸುಮಲತಾ ಅವರು ರಾತ್ರೋ ರಾತ್ರಿ ಮಂಡ್ಯದ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮೀರಾ ಶಿವಲಿಂಗಯ್ಯ ಅವರು ಮಂಡ್ಯದಲ್ಲಿ ಪ್ರಭಾವಿ ಬಿಜೆಪಿ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಮೀರಾ ಶಿವಲಿಂಗಯ್ಯ ಅವರ ಪತಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಪ್ರಭಾವಿ ಮುಖಂಡರಾಗಿದ್ದು, ಅವರನ್ನು ಸುಮಲತಾ ಅವರು ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮೀರಾ ಅವರ ಮನೆಯಲ್ಲಿ ಚರ್ಚೆ ನಡೆಸಿದ್ದಾರೆ.
ಒಂದು ವೇಳೆ ಸುಮಲತಾ ಅವರು ಬಿಜೆಪಿಯಿಂದ ಸೇರ್ಪಡೆಯಾದರೆ ಏನೆಲ್ಲ ಮಾಡಬೇಕಾಗುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಯಾಕೆಂದರೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗಲ್ಲ. ಹೀಗಾಗಿ ಮೀರಾ ಶಿವಲಿಂಗಯ್ಯ ಅವರನ್ನು ಭೇಟಿ ಮಾಡಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications