ಶ್ರೀರಂಗಪಟ್ಟಣ: ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ, 7 ಜನ ಪೊಲೀಸರ ವಿರುದ್ಧ ಎಫ್ಐಆರ್
ಮಂಡ್ಯ, ಡಿಸೆಂಬರ್, 12: ಹಿಂದೂ ಕಾರ್ಯಕರ್ತನನ್ನು ರಾತ್ರೋರಾತ್ರಿ ಬಂಧಿಸಿ, ಬೆದರಿಕೆ ಹಾಕಿದ ಆರೋಪದ ಮೇಲೆ ಪಟ್ಟಣ ಟೌನ್ ಪೊಲೀಸ್ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ 7 ಜನ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಉಮೇಶ್, ಪ್ರಕಾಶ್, ವಿಜಯ್, ಶರತ್ ,ಹರೀಶ್, ಮಂಜುನಾಥ, ಕೃಷ್ಣ, ರಾಘವೇಂದ್ರ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ಹೋರಾಟ ಇದೀಗ ಮತ್ತೊಂದು ಸ್ವರೂಪವನ್ನು ಪಡೆದುಕೊಂಡಿದ್ದು, ಜಾಮಿಯಾ ಮಸೀದಿ ವಿರುದ್ಧ ನಡೆಯುತ್ತಿದ್ದ ಹೋರಾಟವನ್ನು ಈಗ ಹಿಂದೂ ಕಾರ್ಯಕರ್ತರು ಪೊಲೀಸರ ವಿರುದ್ಧ ಆರಂಭಿಸಿದ್ದಾರೆ. ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಂಡಿದ್ದರು. ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ನಡೆದ ಸಂಕೀರ್ತನಾ ಯಾತ್ರೆ ಮೆರವಣಿಗೆಯ ವೇಳೆ ಗಂಜಾಂ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತನೋರ್ವ ಬಾಳೆದಿಂಡನ್ನು ಅನ್ಯಕೋಮಿನವರ ಮನೆಯ ಮೇಲೆ ಎಸೆದಿದ್ದ. ಪಾಂಡವಪುರ ಮೂಲದ 17 ವರ್ಷದ ಯುವಕ ಬಾಳೆದಿಂಡನ್ನು ಎಸೆದಿದ್ದು, ಸಿಸಿಟಿವಿ ಆಧರಿಸಿ ಶ್ರೀರಂಗಪಟ್ಟಣ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು.
ಈ ವೇಳೆ ಪೊಲೀಸರು ಯುವಕನನ್ನು 53 ಮುಸ್ಲಿಂ ರಾಷ್ಟ್ರಗಳಿವೆ. ನಿನ್ನ ರುಂಡ-ಮುಂಡ ಕತ್ತರಿಸುತ್ತಾರೆ ಎಂದು ಬೆದರಿಸಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಹೀಗೆ ಬೆದರಿಕೆ ಹಾಕಿರುವ ಪೊಲೀಸರನ್ನು ಅಮಾನತ್ತು ಮಾಡಬೇಕು. ರಾತ್ರೋರಾತ್ರಿ ತೆರಳಿ ಯುವಕನನ್ನು ಡಕಾಯಿತರ ರೀತಿಯಲ್ಲಿ ಬಂಧಿಸಿದ ಎಲ್ಲಾ ಪೊಲೀಸರ ಮೇಲೆ ಎಫಐಆರ್ ದಾಖಲು ಮಾಡಬೇಕು ಎಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಜಾಮಿಯಾ ಮಸೀದಿಗೆ ಮುತ್ತಿಗೆಗೆ ಯತ್ನ
ಪೊಲೀಸರ ವಿರುದ್ಧ ಜಾಮಿಯಾ ಮಸೀದಿ ಎದುರು ಶನಿವಾರ ರಾತ್ರಿ ಇಡೀ ಪೆಂಡಾಲ್ ಹಾಕಿಕೊಂಡು ಹಿಂದೂ ಕಾರ್ಯಕರ್ತರು ಪ್ರತಿಭಟಿಸಿದ್ದರು. ಜೊತೆಗೆ ಜಾಮಿಯಾ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಪ್ರತಿಭಟನಾನಿರತ ಕಾರ್ಯಕರ್ತರನ್ನು ಮನವೊಲಿಸುವ ಕೆಲಸಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮುಂದಾಗಿದ್ದರು.

ಪೊಲೀಸರ ಮೇಲೆ ಎಫ್ಐಆರ್ ದಾಖಲು
ಆದರೂ ಹಿಂದೂ ಕಾರ್ಯಕರ್ತರು ಮಾತ್ರ ಬೆದರಿಕೆ ಹಾಕಿದ ಪೊಲೀಸರನ್ನು ಅಮಾನತ್ತು ಮಾಡಬೇಕು. ಪೊಲೀಸರ ಮೇಲೆ ಎಫ್ಐಆರ್ ದಾಖಲು ಮಾಡುವವರೆಗೆ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದಿದ್ದು, ಮಳೆಯಲ್ಲಿಯೇ ಪ್ರತಿಭಟನೆ ಮುಂದುವರೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರ ದೂರಿನ ಅನ್ವಯ ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸೇರಿ 7 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ದೂರು ದಾಖಲಾದ ಹಿನ್ನೆಲೆ ಹಿಂದೂ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದವು ಎನ್ನುವ ಮಾಹಿತಿ ಲಭ್ಯವಾಗಿತ್ತು.

ಕಾನೂನು ಹೋರಾಟ ನಡೆಸುವ ಎಚ್ಚರಿಕೆ
ನಂತರ ಹಿಂದೂ ಕಾರ್ಯಕರ್ತರು ಈ ಬಗ್ಗೆ ಮಾತನಾಡಿ, ಪೊಲೀಸರ ನಡೆ ಹಲವು ಹನುಮಾನಗಳಿಗೆ ಕಾರಣವಾಗಿದೆ. ಅವರು ದೇಶದ ಕಾನೂನು ಹಾಗೂ ಹಿಂದೂಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದೇ ಧೋರಣೆ ಮುಂದುವರೆದರೆ ಪೊಲೀಸರ ವಿರುದ್ಧವೂ ಸಹ ಕಾನೂನು ಸಮರ ನಡೆಸಬೇಕಾಗುತ್ತದೆ. ಪೊಲೀಸರು ಬಹಳ ಎಚ್ಚರಿಕೆವಹಿಸಿ ಕೆಲಸ ನಿರ್ವಹಿಸುವಂತೆ ಆಗ್ರಹಿಸಿದ್ದರು.

ಹಿಂದೂ ಕಾರ್ಯಕರ್ತರ ಒತ್ತಾಯವೇನು?
ಅಲ್ಲದೆ ಹನುಮನ ಮೂಲ ಮಂದಿರವು ಅರ್ಕಲಜಿಕಲ್ ಸರ್ವೆ ಆಫ್ ಇಂಡಿಯಾ ಅವರ ಸುಪರ್ದಿಯಲ್ಲಿದೆ. ಆದರೂ ಸಹ ಕೆಲ ಮುಸ್ಲಿಮರು ಮದರಸ, ನಮಾಜ್ ಸೇರಿದಂತೆ ಇತರೆ ಕಾರ್ಯ ಚಟುವಟಿಗಳನ್ನು ನಡೆಸುತ್ತಿದ್ದಾರೆ. ಅದನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ನೋಡಿಕೊಳ್ಳಬೇಕು. ಜೊತೆಗೆ ಅವರನ್ನು ಹೊರ ಕಳುಹಿಸಬೇಕು ಎಂದು ಒತ್ತಾಯಿಸಿದರು. ಪ್ರತಿ ಶನಿವಾರ ಹನುಮನ ಚಲೀಸ್ ಪಠಣೆ ಮಾಡುವಂತೆ ಸಂಕಲ್ಪ ಮಾಡಿದ್ದು, ಅದರಂತೆಯೇ ಪ್ರತಿ ಶನಿವಾರ ಇಲ್ಲಿ ಹನುಮಾನ್ ಚಾಲೀಸ್ ಪಟನೆ ಮಾಡಲಾಗುವುದು. ಇದಕ್ಕೆ ಪೊಲೀಸರು ತಡೆದರೆ ಅವರ ವಿರುದ್ಧ ಪ್ರತಿರೋಧ ಒಡ್ಡುವುದಾಗಿ ಎಚ್ಚರಿಕೆ ನೀಡಿದರು.












Click it and Unblock the Notifications