ಶ್ರೀರಂಗಪಟ್ಟಣ ದಸರಾ 2022; ಅದ್ದೂರಿ ಆಚರಣೆಗೆ ಸಿದ್ಧತೆಗಳು
ಮಂಡ್ಯ, ಸೆಪ್ಟೆಂಬರ್, 06: ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 2ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಪಾರಂಪರಿಕ ಹಾಗೂ ಅರ್ಥಪೂರ್ಣವಾಗಿ ದಸರಾ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಐದು ದಿನಗಳ ಕಾಲ ಕಾರ್ಯಕ್ರಮ ನಡೆಯುತ್ತಿದೆ. ಇಲಾಖೆಗಳು ವೈವಿಧ್ಯಮಯ, ಆಕರ್ಷಣೀಯ, ಸಾರ್ವಜನಿಕರಿಗೆ ಮಾಹಿತಿ ಹಾಗೂ ಮನರಂಜನೆಯುತವಾಗಿರುವ ಕಾರ್ಯಕ್ರಮವನ್ನು ಆಯೋಜಿಸುವಂತೆ ಸಲಹೆ ನೀಡಿದರು.
ಸೆಪ್ಟೆಂಬರ್ 28ರಂದು ಜಂಬೂ ಸವಾರಿ ನಡೆಯುವ ಸ್ಥಳದಲ್ಲಿ ಬನ್ನಿಮಂಟಪದ ಸಣ್ಣ ಪುಟ್ಟ ರಿಪೇರಿಗಳಿದ್ದಲ್ಲಿ ಅತಿ ಬೇಗನೇ ಆಗಬೇಕು. ಬನ್ನಿಮಂಟಪ, ಕಲ್ಯಾಣಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳ, ಮೆರವಣಿಗೆ ಸಾಗುವ ಸ್ಥಳದ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು. ವಿವಿಧ ಕಲಾ ತಂಡಗಳು, ಕೃಷಿ, ತೋಟಗಾರಿಕೆ, ಮಹಿಳಾ ಹಾಗೂ ಇನ್ನಿತರ ಇಲಾಖೆಗಳ ಸ್ಥಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲು ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.

ಆಯೋಜಿಸಲಿರುವ ಕಾರ್ಯಕ್ರಮಗಳ ಪಟ್ಟಿ; ಯುವದಸರಾದಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳ ತಂಡಗಳನ್ನು ಆಯ್ಕೆ ಮಾಡಬೇಕು. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿದಂತಾಗುತ್ತದೆ. ಕಾರ್ಯಕ್ರಮವು ವಿವಿಧ ನೃತ್ಯ ವೈಖರಿಗಳಿಂದ ಕೂಡಿರಲಿ ಎಂದು ಸೂಚಿಸಿದರು.
ಕ್ರೀಡಾ ದಸರಾವನ್ನು ನಡೆಸಲಾಗುತ್ತಿದ್ದು, ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಿಂದ ಕರಿ ಘಟ್ಟದವರೆಗೆ ಮ್ಯಾರಥಾನ್, ಕರಿಘಟ್ಟ ಬೆಟ್ಟಕ್ಕೆ ಚಾರಣ, ಕೆಸರುಗದ್ದೆಯಲ್ಲಿ ಓಡುವ ಸ್ಪರ್ಧೆ, ಹಗ್ಗ-ಜಗ್ಗಾಟ, ಕುಸ್ತಿ, ಖೋ-ಖೋ, ವಾಲಿಬಾಲ್, ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ನಿರ್ದೇಶನ ನೀಡಿದರು.
ಶಾಲಾ, ಕಾಲೇಜುಗಳಿಗೆ ಮಾಹಿತಿ ನೀಡಿ ನೊಂದಣಿ ಮಾಡಿಕೊಂಡು ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು. ಭಾರತದ ಯೋಗಕ್ಕೆ ವಿಶ್ವ ಮಾನ್ಯತೆ ಲಭಿಸಿದೆ. ಸಾರ್ವಜನಿಕರಿಗೆ ಯೋಗಭ್ಯಾಸ ಮಾಡುವಂತೆ ಪ್ರೇರೇಪಿಸಲು ಯೋಗ ಗುಚ್ಛ, ಸರಳ ಯೋಗಾಸನಗಳು, ಯೋಗ ನೃತ್ಯ ರೂಪಕ, ಯೋಗ ನಡಿಗೆ ಸೇರಿದಂತೆ ಕಾರ್ಯಕ್ರಮ ಆಯೋಜಿಸಲು ತರಬೇತಿ ನೀಡುವಂತೆ ತಿಳಿಸಿದರು. ಈ ಬಾರಿ ಹೊಸದಾಗಿ ಆಹಾರ ಮೇಳ ಆಯೋಜಿಸಬೇಕು. ಇದಕ್ಕಾಗಿ ಉತ್ತಮವಾಗಿ ಆಹಾರ ತಯಾರಕರು, ಚಾಟ್ ಸ್ಟಾಲ್ಗಳನ್ನು ಮಾಡಲು ಸೂಚಿಸಿದರು.

ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜು, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಸರಸ್ವತಿ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಆರ್.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀರಂಗಪಟ್ಟಣದಲ್ಲಿ ಐದು ದಿನ ವಿಜೃಂಭಣೆಯಿಂದ ದಸರಾ ನಡೆಸಲು ಸಿದ್ಧತೆ ಮಾಡಲಾಗಿದೆ. ಈ ವರ್ಷವೂ ದಸರಾದಲ್ಲಿ ಜಂಬೂ ಸವಾರಿ, ಕಲಾತಂಡಗಳ ಮೆರವಣಿಗೆ ನಡೆ ಸಲು ನಿರ್ಧರಿಸಲಾಗಿದೆ. ಚದುರಂಗ ಸಂಭ್ರಮ, ಸೈಕಲ್ ಜಾಥಾ, ಗಾನ ಸಂಭ್ರಮ, ಯುವ ದಸರೆಯು ಎಲ್ಲ ಗಮನ ಸೆಳೆಯಲಿದೆ. ಮೈಸೂರು ದಸರಾದಂತೆಯೇ ಶ್ರೀರಂಗಪಟ್ಟಣದಲ್ಲಿಯೂ ದಸರಾವನ್ನು ಆಚರಿಸಲಾಗುತ್ತದೆ.
ಸೆಪ್ಟೆಂಬರ್ 28ರಿಂದ ದಸರಾ ಆಚರಣೆಯು ಆರಂಭವಾಗಲಿದ್ದು, 5 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ದಸರಾ ಹಬ್ಬಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್. ಅಶ್ವತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಸರಾ ನೋಡಲು ಬಂದವರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಆಹ್ವಾನಿಸಲು ಸೂಚನೆ ನೀಡಿದ್ದಾರೆ.











Click it and Unblock the Notifications