ಭಾರತ್ ಜೋಡೊ: ಪಾಂಡವಪುರದ ಐಕ್ಯತಾ ಯಾತ್ರೆಯಲ್ಲಿ ಪಾದಯಾತ್ರೆ ಮಾಡಲಿರುವ ಸೋನಿಯಾ ಗಾಂಧಿ
ಮಂಡ್ಯ, ಅ. 06: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಕರ್ನಾಟಕದ ಮಂಡ್ಯದಲ್ಲಿ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಸಾಥ್ ನೀಡಲಿದ್ದಾರೆ.
ಅಕ್ಟೋಬರ್ 3 ರಂದು ರಾಜ್ಯಕ್ಕೆ ಬಂದಿದ್ದ ಅವರು, ಎಚ್.ಡಿ.ಕೋಟೆ ತಾಲ್ಲೂಕಿನ ಬೀರಂಬಳ್ಳಿಯ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ಪುತ್ರನೊಂದಿಗೆ 2 ದಿನ ವಾಸ್ತವ್ಯ ಹೂಡಿದ್ದರು. ಆಯುಧ ಪೂಜೆ ಮತ್ತು ವಿಜಯದಶಮಿ ಅಂಗವಾಗಿ ಹಬ್ಬದ ಎರಡು ದಿನಗಳ ಬಿಡುವಿನ ಬಳಿಕ ಆರಂಭವಾಗುತ್ತಿರುವ ಇಂದಿನ ಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಉತ್ಸಾಹ ತುಂಬಲಿದ್ದಾರೆ.
Breaking; ಮಾದೇಶ್ವರ ದೇವಾಲಯಕ್ಕೆ ಸೋನಿಯಾ ಗಾಂಧಿ ಭೇಟಿ
ಗುರುವಾರ ಬೆಳಗ್ಗೆ ಪಾಂಡವಪುರ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಜಕ್ಕನಹಳ್ಳಿ ಕ್ರಾಸ್ನಿಂದ ರಾಹುಲ್ ಗಾಂಧಿ ರಾಜ್ಯದಲ್ಲಿ ತಮ್ಮ 5ನೇ ದಿನದ ಪಾದಯಾತ್ರೆಯನ್ನು ಆರಂಭಿಸಲಿದ್ದಾರೆ. ಈ ವೇಳೆ ಪುತ್ರನಿಗೆ ಸೋನಿಯಾ ಗಾಂಧಿ ಸಾಥ್ ನೀಡಲಿದ್ದಾರೆ.
ಸೆ.7ರಂದು ಕೇರಳದಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ತಲುಪಿದೆ. ಇನ್ನು, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಗುರುವಾರ ಯಾತ್ರೆಯಲ್ಲಿ ಪಾಲ್ಗೊಂಡು ಪಾದಯಾತ್ರೆಯನ್ನೂ ಕೈಗೊಳ್ಳಲಿದ್ದಾರೆ. ಬಹಳ ಸಮಯದ ನಂತರ ಸೋನಿಯಾ ಗಾಂಧಿ ಪಕ್ಷದ ಕೆಲವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೋನಿಯಾ ಗಾಂಧಿ ಜಕ್ಕನಹಳ್ಳಿ ಕ್ರಾಸ್ನಲ್ಲಿ ಪಾದಯಾತ್ರೆ ಸೇರಿಕೊಳ್ಳಲಿದ್ದಾರೆ. ಸೋನಿಯಾ ಜೊತೆಗೆ ಕಾಂಗ್ರೆಸ್ ಅಧ್ಕಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ವೇಣುಗೋಪಾಲ್ ಕೂಡ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಬೆಳಿಗ್ಗೆ 11 ರ ಹೊತ್ತಿಗೆ ಪಾದಯಾತ್ರೆ ನಾಗಮಂಗಲ ತಾಲ್ಲೂಕಿನ ಚೌಡೇನಹಳ್ಳಿ ಗೇಟ್ ಪ್ರವೇಶಿಸಲಿದೆ. ಮಧ್ಯಾಹ್ನ 12ಗಂಟೆಗೆ ಖರಡ್ಯ ಗ್ರಾಮದ ಬಳಿ ರಾಹುಲ್ ಗಾಂಧಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ 4;30 ರ ಸುಮಾರಿಗೆ ಗಂಟೆಗೆ ಕೆಲ ಕಾಲ ವಿಶ್ರಾಂತಿ ಪಡೆಯಲಿದೆ. ಬಳಿಕ ಮತ್ತೆ ಆರಂಭಗೊಳ್ಳುವ ಯಾತ್ರೆ ನಾಗಮಂಗಲ ತಾಲೂಕಿನ ಮಡಕೆ ಹೊಸೂರು ಗೇಟ್ನಲ್ಲಿ ವಾಸ್ತವ್ಯ ಹೂಡಲಿದೆ.
ರಾಜ್ಯದ ಜೊತೆಗೆ ಸೋನಿಯಾ ಗಾಂಧಿ ಅವರಿಗೆ ಆಳವಾದ ಸಂಪರ್ಕವಿದೆ. ಗಾಂಧಿ ಕುಟುಂಬ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದಾಗ, ದಕ್ಷಿಣ ಭಾರತ ಅವರ ಕೈಹಿಡಿದಿದೆ. ದೇಶದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಕೂಡ ಇಲ್ಲಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ, 1980 ರಲ್ಲಿ ಅವರಿಗೆ ಸುಭದ್ರ ಲೋಕಸಭಾ ಸ್ಥಾನದ ಅಗತ್ಯವಿತ್ತು. ಇಂತಹ ಪರಿಸ್ಥಿತಿಯಲ್ಲಿ ಅವರು ರಾಜ್ಯದ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದರು.