ಮಂಡ್ಯದಲ್ಲಿ ಅಂಬರೀಶ್ ಸಾಥ್ ನೀಡದಿದ್ದರೆ ರಾಜಕೀಯ ಕಷ್ಟ ಸ್ವಾಮೀ!
ಮಂಡ್ಯ, ಅಕ್ಟೋಬರ್ 06 : ಮಂಡ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ರಾಜಕೀಯವಾಗಿ ಬಹಳಷ್ಟು ಬದಲಾವಣೆಗಳು ನಡೆಯುವ ಲಕ್ಷಣಗಳು ಕಂಡು ಬರತೊಡಗಿದೆ. ಈ ಚಟುವಟಿಕೆಯ ಕೇಂದ್ರಬಿಂದುವಾಗಿ ಕಂಡುಬಂದಿದ್ದು ಒನ್ಸ್ ಅಗೇನ್ ರೆಬೆಲ್ ಸ್ಟಾರ್ ಅಂಬರೀಶ್.
ಜೆಡಿಎಸ್ ರಾಷ್ಟ್ರಾಧ್ಯಕ್ಷರಾದ ದೇವೇಗೌಡರ ಕುಟುಂಬದ ಸದಸ್ಯರು ಈಗಾಗಲೇ ಆ ಕ್ಷೇತ್ರದ ಮೇಲೆ ಒಂದು ಕಣ್ಣಿಟ್ಟಿದ್ದು, ಅವರಿಗೆ ಸಿನೆಮಾದಲ್ಲೂ, ರಾಜಕೀಯದಲ್ಲೂ ರೆಬೆಲ್ ಸ್ಟಾರ್ ಆಗಿರುವ ಅಂಬರೀಶ್ ಅವರ ಸಹಕಾರ ಅಗತ್ಯವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಂಬರೀಶ್ ಕಾಂಗ್ರೆಸ್ನತ್ತ ನಿರಾಸಕ್ತಿ ತೋರಿ ಜೆಡಿಎಸ್ನತ್ತ ಒಲವು ತೋರಿದ್ದರಿಂದಲೇ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದ್ದು ನಮ್ಮ ಕಣ್ಣಮುಂದೆಯೇ ಇದೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಬರೀಶ್ ಅವರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಮೌನಕ್ಕೆ ಶರಣಾದ ಅಂಬರೀಶ್ ಅವರು ತಮ್ಮ ಪಾಡಿಗೆ ತಾವು ಎಂಬಂತೆ ಇದ್ದು ಬಿಟ್ಟರು. ಅವರಿಗೆ ಟಿಕೆಟ್ ನೀಡಲು ನಾಯಕರು ಮೀನ ಮೇಷ ಎಣಿಸುತ್ತಿದ್ದ ವೇಳೆಯಲ್ಲಿ ಅವರೇ ರಾಜಕೀಯ ವಿಶ್ರಾಂತಿ ಬಯಸುತ್ತಿರುವುದಾಗಿ ಹೇಳಿದರಲ್ಲದೆ, ಕಾಂಗ್ರೆಸ್ನಿಂದ ಅಂತರ ಕಾಪಾಡಿಕೊಂಡು ಜೆಡಿಎಸ್ ಪಾಳಯದಲ್ಲಿ ಕಾಣಿಸಿಕೊಂಡರು. ಹಾಗಂತ ಅವರೇನು ಜೆಡಿಎಸ್ಗೆ ಬಹಿರಂಗವಾಗಿ ಪ್ರಚಾರ ಮಾಡಲಿಲ್ಲ. ಆದರೆ ಒಲವು ಆ ಕಡೆಗೆ ಜಾಸ್ತಿಯಿತ್ತು ಎಂಬುದರಲ್ಲಿ ಎರಡು ಮಾತೇ ಇಲ್ಲ. ಅದರ ಪರಿಣಾಮ ಕಾಂಗ್ರೆಸ್ ಮಂಡ್ಯ ಜಿಲ್ಲೆಯಲ್ಲಿ ಧೂಳಿಪಟವಾಗಬೇಕಾಯಿತು.

ಚರ್ಚೆ ನಡೆಯುತ್ತಿದ್ದಂತೆ ಚುನಾವಣೆ ದಿನಾಂಕ ಪ್ರಕಟ
ಅಂಬರೀಷ್ ಅವರು ಯಾವ ತಕ್ಕಡಿಯಲ್ಲಿ ಕೂಡುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಚುನಾವಣಾ ಆಯೋಗ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿರುವುದರಿಂದ, ಇದಕ್ಕೆ ಭಾರೀ ಕಾವು ಬಂದಂತಾಗಿದೆ. ಮಂಡ್ಯ ಸೇರಿದಂತೆ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭೆ ಕ್ಷೇತ್ರಗಳಿಗೆ ಹಾಗು, ರಾಮನಗರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಅಂಬರೀಷ್ ಬೆಂಬಲ ಯಾವ ಪಕ್ಷಕ್ಕೆ?

ಅಂಬಿ ರಾಜಕೀಯದಲ್ಲಿ ಸದ್ಯ ತಟಸ್ಥ
'ಅಂಬಿ ನಿನಗೆ ವಯಸ್ಸಾಯ್ತೋ' ಚಿತ್ರದಲ್ಲಿ ಸಖತ್ ಮಿಂಚುತ್ತಿರುವ ಅಂಬರೀಶ್ ಅವರು ರಾಜಕೀಯದಲ್ಲಿ ಸದ್ಯ ತಟಸ್ಥರಾಗಿದ್ದಾರೆ. ಹಾಗೆಂದು ಕಾಂಗ್ರೆಸ್ನಿಂದ ಹೊರಬಂದಿಲ್ಲ ಅಷ್ಟೆ. ಆದರೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ. ಅಧಿಕಾರದಲ್ಲಿದ್ದಾಗಲೂ ಅಷ್ಟೆ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು, ಅಧಿವೇಶನಕ್ಕೆ ಹೋಗುತ್ತಿದ್ದದ್ದು ಎಲ್ಲವೂ ಕಡಿಮೆಯೇ. ಆದರೆ ಚುನಾವಣೆ ವೇಳೆಗೆ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದರಾದರೂ ಅದ್ಯಾಕೋ ಅವರಿಗೆ ಕಾಂಗ್ರೆಸ್ ನಾಯಕರ ನಡವಳಿಕೆ ಇರಿಸುಮುರಿಸು ತಂದಿತ್ತು. ಹೀಗಾಗಿಯೇ ಮೌನಕ್ಕೆ ಜಾರಿದರು. ಯಾರ ಪರನೂ ಪ್ರಚಾರ ಮಾಡಲ್ಲ ಹೋಗ್ರಿ ಎಂದು ಕೇಳಿದವರನ್ನು ಅಟ್ಟಿದ್ದರು ಅಂಬಿ. ಅದೇ ಅವರ ಸ್ಟೈಲ್.

ಮಂಡ್ಯದಲ್ಲಿ ಇನ್ನೂ ಅಂಬಿ ಹವಾ ಇದ್ದೇ ಇದೆ
ಇವತ್ತಿಗೂ ಮಂಡ್ಯ ಕಾಂಗ್ರೆಸ್ನಲ್ಲಿ ಹಿಡಿತ ಹೊಂದಿರುವ ಅಂಬರೀಶ್ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಜತೆಗೆ ಮಂಡ್ಯ ಭಾಷೆಯಲ್ಲಿಯೇ ಅವರಾಡುವ ಖಡಕ್ ಮಾತು ಕೇಳುವ ಮತದಾರರಿದ್ದಾರೆ. ಹೀಗಿರುವಾಗ ಸದ್ಯಕ್ಕೆ ಅವರು ತಟಸ್ಥರಾದಂತೆ ಕಂಡರೂ ಅವರ ಹವಾ ಇನ್ನೂ ಹಾಗೆಯೇ ಉಳಿದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಲೋಕಸಭಾ ಕ್ಷೇತ್ರಕ್ಕೆ ಯಾರೇ ನಾಯಕರು ನಿಂತರೂ ಅಂಬರೀಶ್ ಅವರ ಬೆಂಬಲ ಇಲ್ಲದೆ ಹೋದರೆ ಗೆಲುವು ಅಷ್ಟು ಸುಲಭವೇನಲ್ಲ. ಇದು ದೇವೇಗೌಡರಿಗೆ ಗೊತ್ತಿಲ್ಲದ ವಿಚಾರವೇನಲ್ಲ.
ಸದ್ಯ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇರುವುದರಿಂದ, ಜತೆಗೆ ಮಂಡ್ಯ ಜೆಡಿಎಸ್ನ ಭದ್ರಕೋಟೆ ಆಗಿರುವ ಕಾರಣ ಲೋಕಸಭೆಯಲ್ಲಿ ಸ್ಪರ್ಧಿಸೋದು ಜೆಡಿಎಸ್ ಅಭ್ಯರ್ಥಿಯೇ. ಅದರಲ್ಲೂ ದೇವೇಗೌಡರು ಅಥವಾ ಅವರ ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ಎಂಬುದು ಈಗ ಕೇಳಿ ಬರುತ್ತಿರುವ ಸುದ್ದಿ.

ಮಂಡ್ಯ ರಾಜಕೀಯಕ್ಕೆ ಕಾಲಿಡುತ್ತಾರಾ ಜ್ಯೂ. ಅಂಬಿ?
ಈಗ ಹರಡುತ್ತಿರುವ ಸುದ್ದಿಯನ್ನು ಗಮನಿಸಿ ನೋಡಿದರೆ ಮಾಜಿ ಸಂಸದೆ ರಮ್ಯಾಗೆ ಈ ಬಾರಿ ಮಂಡ್ಯದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಅವಕಾಶ ಸಿಗುವುದು ಕಡಿಮೆಯೇ. ಇದೀಗ ಅವರಿಗೆ ಅಂಬರೀಶ್ ಅವರೇ ಬುದ್ದಿಮಾತು ಹೇಳಿರುವುದು ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮರಣ ನಂತರ ನಾಯಕರು ಹುಟ್ಟಿಕೊಳ್ಳಲಿಲ್ಲವೇ? ಹಾಗೆಯೇ ಮಂಡ್ಯಕ್ಕೂ ನಾಯಕರು ಬರುತ್ತಾರೆ ಎಂಬ ಅವರ ಮಾತಿನ ಮರ್ಮದಲ್ಲಿ ಹಲವು ಅರ್ಥಗಳು ಗೋಚರಿಸುತ್ತಿದೆ. ಏಕೆಂದರೆ ಅಂಬರೀಶ್ ಅವರ ಉತ್ತರಾಧಿಕಾರಿಯಾಗಿ ಮಗ ಅಭಿಷೇಕ್ ಅವರನ್ನು ರಾಜಕೀಯಕ್ಕೆ ತರುತ್ತಾರಾ ಎಂಬ ಪ್ರಶ್ನೆಗಳು ಇದ್ದಕ್ಕಿದ್ದಂತೆ ಅವರ ಅಭಿಮಾನಿಗಳಲ್ಲಿ ಕಾಡತೊಡಗಿವೆ. ಈಗಾಗಲೇ ಸಿನಿಮಾ ಕ್ಷೇತ್ರಕ್ಕೆ ಅಭಿಷೇಕ್ ಕಾಲಿರಿಸಿದ್ದು ಮುಂದಿನ ದಿನಗಳಲ್ಲಿ ರಾಜಕೀಯದತ್ತ ವಾಲಿದರೂ ಅಚ್ಚರಿಪಡಬೇಕಾಗಿಲ್ಲ.

ಕುಮಾರಸ್ವಾಮಿಯನ್ನು ಕಾಂಗ್ರೆಸ್ ಕೈಬಿಟ್ಟರೆ?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಲೋಕಸಭೆ ಚುನಾವಣೆ ಹತ್ತಿರ ಬಂದಿರುವುದಕ್ಕೂ ಏನಾದರು ಸಂಬಂಧ ಇದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಇದು ನಿಜವಾದರೆ ಕುಮಾರಸ್ವಾಮಿ ಅವರಿಗೆ ಅಂಬರೀಶ್ ಅವರ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ನಾಯಕರು ಬಿಟ್ಟರೆ ಸರ್ಕಾರ ಉಳಿಯಲ್ಲ ಎಂಬ ಹೇಳಿಕೆ ಅಂಬರೀಶ್ ಅವರು ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಒಟ್ಟಾರೆ ಮಂಡ್ಯದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಒಂದಷ್ಟು ಬದಲಾವಣೆಗಳು ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications