ಶಿಂಷಾ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ: ಸಿಇಓ ಸೇರಿ ನಾಲ್ವರ ಆಸ್ತಿಗೆ ಮುಟ್ಟುಗೋಲು
ಮಂಡ್ಯ ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್ ಪ್ರಕರಣ ಸಂಬಂಧ ಬ್ಯಾಂಕ್ನ ಸಿಇಓ ಲಕ್ಷ್ಮಿ ನಾರಾಯಣ ಗೌಡ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಬಂಧಿಸಿ ಅವರ ಆಸ್ತಿಗೆ ಮುಟ್ಟುಗೋಲು ಹಾಕುವಂತೆ ಸಹಕಾರ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮದ್ದೂರು, ಫೆಬ್ರವರಿ 27: ಮಂಡ್ಯ ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್ನಲ್ಲಿ ನಡೆದಿರುವ ಕೊಟ್ಯಾಂತರ ರೂಪಾಯಿ ಅವ್ಯವಹಾರ ಪ್ರಕರಣದಲ್ಲಿ ಬ್ಯಾಂಕಿನ ಆರ್ಥಿಕ ವಹಿವಾಟಿಗೆ ಆರ್.ಬಿ.ಐ ನಿರ್ಬಂಧ ವಿಧಿಸಿದೆ. ಇದರ ಬೆನ್ನಲ್ಲೇ ಅವ್ಯವಹಾರದ ಪ್ರಕರಣದಲ್ಲಿ ಭಾಗಿಯಾಗಿರುವ ಬ್ಯಾಂಕ್ನ ಸಿಇಓ ಲಕ್ಷ್ಮಿ ನಾರಾಯಣ ಗೌಡ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಬಂಧಿಸಿ ಅವರ ಆಸ್ತಿಗೆ ಮುಟ್ಟುಗೋಲು ಹಾಕುವಂತೆ ಸಹಕಾರ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬ್ಯಾಂಕ್ನ ಹಿಂದಿನ ಸಿಇಓ ಲಕ್ಷ್ಮಿ ನಾರಾಯಣ ಗೌಡ, ಉಪ ವ್ಯವಸ್ಥಾಪಕ ವಿ.ಉಮಾಶಂಕರ್, ಲೆಕ್ಕಾಧಿಕಾರಿ ಬಿ.ಎನ್.ಕುರ್ಮಾ, ಹಿರಿಯ ಸಹಾಯಕ ಟಿ.ಗೋಪಿ ಹಾಗೂ ಹಾಲಿ ಪ್ರಭಾರ ಸಿಇಓ ಆಗಿರುವ ನವೀನ್ ಮೇಲೆ ಐಪಿಸಿ 403, 409, 417, 420 ಹಾಗೂ 34 ರ ಅನ್ವಯ ಪ್ರಕರಣ ದಾಖಲಿಸಿಕೊಂಡ ನಂತರ ಎಲ್ಲರನ್ನು ಬಂಧಿಸಿ ಅವರ ಆಸ್ತಿಗೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಸಹಕಾರ ಸಂಘಗಳ ನಿಬಂಧಕರ ಮಹಾ ಮಂಡಳಿ ಆಯುಕ್ತರು ಸೂಚನೆ ನೀಡಿದ್ದಾರೆ.

ಈ ಎಲ್ಲಾ ಆರೋಪಿಗಳು ವೈಯಕ್ತಿಕ ಮತ್ತು ಮೃತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ. ಅಲ್ಲದೇ, ಹಿಂದಿನ ಆಡಳಿತ ಮಂಡಳಿಯ ಕೆಲವು ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಕೂಡ ಹಗರಣದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಹಗರಣದ ಬಗ್ಗೆಯೂ ಸೂಕ್ತ ತನಿಖೆ ನಡೆಸುವಂತೆ ಸಹಕಾರ ಇಲಾಖೆ ತಾಕೀತು ಮಾಡಿದೆ.
ಹಗರಣದ ಎಲ್ಲಾ ಆರೋಪಿಗಳು ಮೃತರು ಸೇರಿದಂತೆ 14 ಮಂದಿ ಗ್ರಾಹಕರ ಹೆಸರಿನಲ್ಲಿ 6.80 ಕೋಟಿ ರೂಪಾಯಿ ಸಾಲ ಪಡೆದು ಬ್ಯಾಂಕಿಗೆ ವಂಚಿಸಿರುವ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಎಫ್ಐಆರ್ ದಾಖಲು ಮಾಡಿದ್ದರು. ಕಳೆದ 2022ರಲ್ಲಿ ಸಿಬ್ಬಂದಿಯಿಂದ ಹಣ ದುರುಪಯೋಗ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ದಾಖಲೆ ಸಮರ್ಪಕವಾಗಿಲ್ಲ ಎನ್ನುವ ನೆಪವೊಡ್ಡಿ ಹಾಲಿ ಅಧ್ಯಕ್ಷ ಎಂ.ಚಂದ್ರು ನೀಡಿದ ದೂರನ್ನು ದಾಖಲು ಮಾಡಿಕೊಳ್ಳದೇ ವಿಳಂಬ ಮಾಡಿದ್ದರು.
ಈ ಬಗ್ಗೆ ಆಡಳಿತ ಮಂಡಳಿ ನಿರ್ದೆಶಕರು, ದೂರು ದಾಖಲು ಮಾಡಿಕೊಂಡು ಹಗರಣದ ಬಗ್ಗೆ ತನಿಖೆ ನಡೆಸದೆ ಕರ್ತವ್ಯ ಲೋಪ ಮಾಡಿರುವ ಬಗ್ಗೆ ಮದ್ದೂರು ಪೊಲೀಸರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.

ಬ್ಯಾಂಕ್ನ ಆಡಳಿತ ಮಂಡಳಿ ದೂರನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ನಂತರ ಕಳೆದ 2022 ರ ಆಗಸ್ಟ್ 27 ರಂದು ಪೊಲೀಸರು ಸಿಇಓ ಲಕ್ಷ್ಮಿ ನಾರಾಯಣ್ ಸೇರಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದರು.
ಆರೋಪಿ ಸಿಇಓ ಲಕ್ಷ್ಮಿ ನಾರಾಯಣ್ ಈಗಾಗಲೇ ಮೃತಪಟ್ಟಿರುವ ಮದ್ದೂರಿನ ಬಸ್ ಕಂಡಕ್ಟರ್ ಸಿದ್ದರಾಮು ಮತ್ತು ಹಾಗಲಹಳ್ಳಿ ವಿದ್ಯಾದರೇಶ್ ಸೇರಿದಂತೆ 14 ಮಂದಿ ಹೆಸರಿನಲ್ಲಿ ದಾಖಲಾತಿ ಇಲ್ಲದೇ ಬೇನಾಮಿಯಾಗಿ 1 ಕೋಟಿ 16 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದರು. ನಂತರ 4 ಮಂದಿ ಹೆಸರಿನಲ್ಲಿ ಹಸು ಸಾಲ, 25 ಮಂದಿ ಹೆಸರಿನಲ್ಲಿ ವಾಹನ ಸಾಲದಲ್ಲೂ ಅವ್ಯವಹಾರ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಲಕ್ಷ್ಮಿ ನಾರಾಯಣ್ ಹಾಗೂ ಮ್ಯಾನೇಜರ್ ಉಮಾಶಂಕರ್ ಅವರ ಸ್ಥಿರಾಸ್ತಿ ಆಧಾರದ ಮೇಲೆ ಸಾಲ ಪಡೆದು ಸಾಲ ಚಾಲ್ತಿಯಲ್ಲಿರುವಾಗಲೇ ಆಸ್ತಿಯನ್ನು ಪತ್ನಿಯರ ಹೆಸರಿಗೆ ವರ್ಗಾವಣೆ ಮಾಡಿದ ನಂತರ ತಮ್ಮ ಹೆಸರಿನ ಆಸ್ತಿಯನ್ನು ರದ್ದು ಪಡಿಸಿಕೊಂಡಿರುವುದು ಆರ್ಬಿಐನಿಂದ ನೇಮಕಗೊಂಡಿರುವ ಅಧಿಕಾರಿಗಳು ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಕೆಲವು ವರ್ಷಗಳ ಹಿಂದೆ ಯಾವುದೇ ನಷ್ಟವಿಲ್ಲದೆ ಸದೃಢವಾಗಿದ್ದ ಬ್ಯಾಂಕಿನಲ್ಲಿ ನಾಲ್ವರು ಸಿಬ್ಬಂದಿ ಸೇರಿಕೊಂಡು ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಹಣಕಾಸಿನ ಮುಗ್ಗಟ್ಟನ್ನು ಎದುರಿಸುವ ಪರಿಸ್ಥಿತಿ ಉಂಟಾಯಿತು. ಹೀಗಾಗಿ ಠೇವಣಿದಾರರಿಗೆ ಮತ್ತು ಪಿಗ್ಮಿ ಕಟ್ಟಿದವರಿಗೆ ಸಕಾಲದಲ್ಲಿ ಹಣ ನೀಡಲು ಸಾಧ್ಯವಾಗುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬ್ಯಾಂಕ್ನ ಆಡಳಿತ ಮಂಡಳಿ ದೂರಿನ ಅನ್ವಯ ಮಧ್ಯ ಪ್ರವೇಶ ಮಾಡಿರುವ ಆರ್ಬಿಐ ಅನುಮತಿ ಇಲ್ಲದೆ ಯಾವುದೇ ಸಾಲ ನೀಡಬಾರದು, ಯಾವುದೇ ಹೂಡಿಕೆ ಮಾಡಬಾರದು, ಹಣಕಾಸಿನ ವ್ಯವಹಾರ ನಡೆಸಬಾರದು ಮತ್ತು ಆಸ್ತಿ ಮಾರಾಟ ಮಾಡುವುದು ಸೇರಿದಂತೆ ಬ್ಯಾಂಕ್ನ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದೆ.












Click it and Unblock the Notifications