ಮಳವಳ್ಳಿ; ಮಕ್ಕಳ ದೌರ್ಜನ್ಯ ತಡೆಗೆ ಕಾನೂನು ಗಟ್ಟಿಯಾಗಬೇಕಿದೆ- ನಟ ಭುವನ್ ಬೋಪಣ್ಣ
ಮಂಡ್ಯ, ಅಕ್ಟೋಬರ್, 19: ಮಕ್ಕಳ ಮೇಲೆ ದೌರ್ಜನ್ಯವನ್ನು ತಡೆಯಲು ಕಾನೂನು ಇನ್ನಷ್ಟು ಗಟ್ಟಿಯಾಗಬೇಕಿದೆ ಎಂದು ನಟ ಭುವನ್ಗೌಡ ಮಳವಳ್ಳಿಯಲ್ಲಿ ತಿಳಿಸಿದರು.
ಮೃತ ಬಾಲಕಿ ಮನೆಗೆ ನಟಿ ಹರ್ಷಿಕಾ ಪೂಣಚ್ಚ ಜೊತೆಗೆ ಭುವನ್ ಬೋಪಣ್ಣ ಭೇಟಿ ನೀಡಿ, ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ನಂತರ ಮಾತನಾಡಿದ ಅವರು, ನಿಮ್ಮ ಜೊತೆ ನಾವಿದ್ದೇವೆ ಭಯಪಡಬೇಡಿ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಮೃತ ಬಾಲಕಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡೋಣವೆಂದು ಭರವಸೆ ನೀಡಿದರು.
ದೇಶದಲ್ಲಿ ಕಾನೂನು ಇನ್ನಷ್ಟು ಗಟ್ಟಿಯಾಗಿ ಆರೋಪಿಗೆ ತಕ್ಕ ಶಾಸ್ತಿ ಆದರೇ ಇಂತಹ ಕೃತ್ಯಗಳನ್ನು ತಡೆಯಬಹುದಾಗಿದೆ. ಶಿಕ್ಷಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜನೀಯವಾಗಿ ಕಾಣುತ್ತೇವೆ. ಆದರೆ ಇಂತಹ ಹೇಯ ಕೃತ್ಯದಿಂದ ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ. ಅಪ್ಪ, ಅಮ್ಮನನ್ನು ಬಿಟ್ಟು ಬೇರೆ ಯಾರನ್ನು ನಂಬದ ಪರಿಸ್ಥಿತಿ ನಿರ್ಮಾಣ ಆಗಿಬಿಟ್ಟಿದೆ. ಆರೋಪಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಇಂತಹ ಘಟನೆ ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳಬೇಕು ಎಂದರು. ನಂತರ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಬಾಲಕಿಯ ಮೇಲೆ ನಡೆದಿರುವ ಕೃತ್ಯದಿಂದಾಗಿ ನಾಗರೀಕರು ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಆರೋಪಿಗೆ ಸರಿಯಾದ ಶಿಕ್ಷೆ ನೀಡುವ ಮೂಲಕ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಾಲಕಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಮಳವಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಬಾಲಕಿ ಕುಟುಂಬದವರಿಗೆ ಶಾಸಕ ಜಮೀರ್ ಅಹ್ಮದ್ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು.
ಮಳ್ಳವಳ್ಳಿಯಲ್ಲಿ 10 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದಳು. ಇಂದು ಮೃತೆ ಬಾಲಕಿ ನಿವಾಸಕ್ಕೆ ಶಾಸಕ ಜಮೀರ್ ಅಹಮ್ಮದ್ ಭೇಟಿ ನೀಡಿ 5 ಲಕ್ಷ ರೂಪಾಯಿ ಪರಿಹಾರದ ಹಣವನ್ನು ಹಸ್ತಾಂತರಿಸಿದ್ದಾರೆ. ನಂತರ ಜಮೀರ್ ಬಾಲಕಿ ಪೋಷಕರಿಗೆ ಸಾಂತ್ವನ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

ಕೃತ್ಯಗೈದವನಿಗೆ ಕಠಿಣ ಶಿಕ್ಷೆ ವಿಧಿಸಬೇಕು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೃತ್ಯ ಎಸಗಿದ ಪಾಪಿಯನ್ನು ಸಾರ್ವಜನಿಕರ ಮುಂದೆ ತುಂಡು ತುಂಡಾಗಿ ಕತ್ತರಿಸಬೇಕು." ಬಾಲಕಿ ಪೋಷಕರ ಗೋಳನ್ನು ನೋಡುವುದಕ್ಕೆ ಆಗುತ್ತಿಲ್ಲ. ಮನುಷ್ಯರಾದವರು ಯಾರು ಇಂತಹ ಕೃತ್ಯವನ್ನು ಮಾಡಲ್ಲ. ಕೃತ್ಯ ಎಸಗಿದವರು ಮನುಷ್ಯನಲ್ಲ, ಅವನು ರಾಕ್ಷಸನಿಗಿಂತ ಹೆಚ್ಚು. ಕೃತ್ಯಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಈ ರೀತಿಯ ಪ್ರಕರಣಗಳಿಗೆ ಪ್ರತ್ಯೇಕ ಕಾನೂನು ಜಾರಿ ಮಾಡಬೇಕು ಎಂದು ಜಮೀರ್ ಅಹ್ಮದ್ ಸರ್ಕಾರಕ್ಕೆ ಶಾಸಕ ಮನವಿ ಮಾಡಿದರು.

ಸರ್ಕಾರದಿಂದ 10 ಲಕ್ಷ ರೂ. ಪರಿಹಾರ
ಈಗಾಗಲೇ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಬಾಲಕಿ ಕುಟುಂಬದವರಿಗೆ ಸರ್ಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಲಾಗಿತ್ತು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಇಂದು ಕುಟುಂಬಸ್ಥರಿಗೆ ಚೆಕ್ ಹಸ್ತಾಂತರ ಮಾಡಿ ಸಾಂತ್ವನ ಹೇಳಿದ್ದರು.

ಸಚಿವರ ಮನವಿಗೆ ಸ್ಪಂದಿಸಿದ ಸಿಎಂ
ಕುಂಭ ಮೇಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಬಾಲಕಿಯ ಮೇಲೆ ನಡೆದಿರುವುದು ಅಮಾನುಷ ಕೃತ್ಯವಾಗಿದ್ದು, ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ವೇದಿಕೆಯಲ್ಲೇ ಪರಿಹಾರವನ್ನು ಘೋಷಿಸಿದರು.












Click it and Unblock the Notifications