ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿ
ಮಂಡ್ಯ, ಆಗಸ್ಟ್ 18: ನಗರದ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ಮಾಡಿದ ಕರ್ನಾಟಕ ರಾಜ್ಯ ಪ್ರಸವಪೂರ್ವ ಲಿಂಗಪತ್ತೆ ಘಟಕದ ಉಪ ನಿರ್ದೇಶಕಿ ಡಾ.ಎಂ.ರಜನಿ ನೇತೃತ್ವದ ತಂಡ ನಿಯಮಗಳನ್ನು ಗಾಳಿಗೆ ತೂರಿರುವ ಕೇಂದ್ರಗಳಿಗೆ ಬೀಗ ಜಡಿದಿದೆ.
ಅಸಮರ್ಪಕ ದಾಖಲೆಗಳ ನಿರ್ವಹಣೆ, ಕಾಯ್ದೆ- ಕಟ್ಟಳೆಗಳ ಉಲ್ಲಂಘನೆ ಹಾಗೂ ನಿಯಮಗಳನ್ನು ರಾಜಾರೋಷವಾಗಿ ಗಾಳಿಗೆ ತೂರಿದ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಬಿಸಿ ಮುಟ್ಟಿಸಲಾಗಿದೆ.
ಮಂಡ್ಯದಲ್ಲಿ ನಿಯಮ ಉಲ್ಲಂಘಿಸಿ ಸ್ಕ್ಯಾನಿಂಗ್ ಸೆಂಟರ್ ಗಳು ನಡೆಯುತ್ತಿದ್ದವು. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಗಳು ಎಲ್ಲೆಂದರಲ್ಲಿ ತಲೆ ಎತ್ತಿ, ಭ್ರೂಣ ಹತ್ಯೆಯಲ್ಲಿ ನಿರತವಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಇಲ್ಲಿನ ಸ್ಕ್ಯಾನಿಂಗ್ ಸೆಂಟರ್ ಗಳ ಕುಖ್ಯಾತಿ ಹೊರ ಜಿಲ್ಲೆಗಳಲ್ಲೂ ಹರಡಿ, ಅಲ್ಲಿಂದಲೂ ಮಹಿಳೆಯರು ಬಂದು ಭ್ರೂಣ ತಪಾಸಣೆ ಮಾಡಿಸುತ್ತಿದ್ದರು. ಹೆಣ್ಣು ಭ್ರೂಣವಾದರೆ ಗರ್ಭಪಾತ ಮಾಡಿಸಿಕೊಂಡು ಹೋಗುತ್ತಿದ್ದರು.
ಈ ಎಲ್ಲ ದೂರುಗಳ ಕಾರಣಕ್ಕೆ ಬುಧವಾರ ಸಂಜೆ ನಗರದ ವಿವಿಧೆಡೆ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಡಾ.ಎಂ.ರಜನಿ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕೆ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಶಶಿಧರ್ ಒಳಗೊಂಡ ತಂಡವು ದಾಳಿ ನಡೆಸಿದೆ.
ನಗರದ ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್, ಸುರಕ್ಷಾ ನರ್ಸಿಂಗ್ ಹೋಂ ಮೊದಲಾದ ಕಡೆ ನೀಡಿ ಪರಿಶೀಲನೆ ನಡೆಸಿ, ಸುರಕ್ಷಾ ನರ್ಸಿಂಗ್ ಹೋಂನಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದರಿಂದ ಸ್ಕ್ಯಾನಿಂಗ್ ಸೆಂಟರ್ ಗೆ ಬೀಗ ಹಾಕಲಾಗಿದೆ.
2014ರ ಜುಲೈನಲ್ಲಿಯೂ ಇದೇ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ದಾಳಿ ನಡೆಸಿದ್ದರು. ಎರಡೂ ಸಂದರ್ಭದಲ್ಲಿ ದಾಖಲೆಗಳ ಅಸಮರ್ಪಕ ನಿರ್ವಹಣೆ, ಲಿಂಗಪತ್ತೆ ಕಾಯಿದೆಗಳ ಉಲ್ಲಂಘನೆ ಮೊದಲಾದವು ಕಂಡುಬಂದಿತ್ತು.
ಒಂದೇ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಇಂತಹ ಲೋಪಗಳು ನಡೆಯುತ್ತಿದ್ದರೂ ಪರವಾನಗಿ ರದ್ದು ಸೇರಿದಂತೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಕ್ಕೆ ಕಾರಣವಾಗಿದ್ದು, ಸ್ಕ್ಯಾನಿಂಗ್ ಸೆಂಟರ್ ಬೆನ್ನಿಗೆ ಪ್ರಭಾವಿಗಳು ನಿಂತಿದ್ದಾರೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ.