Gruhalakshmi Scheme: ಗೃಹಲಕ್ಷ್ಮಿಯರಿಗೆ ಭರ್ಜರಿ ಸಿಹಿಸುದ್ದಿ: ಮಾರ್ಚ್, ಏಪ್ರಿಲ್ ತಿಂಗಳ ಹಣ ಬಿಡುಗಡೆ ಕುರಿತು ಬಿಗ್ ಅಪ್ಡೇಡ್
ಬೆಳಗಾವಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ 'ಗೃಹಲಕ್ಷ್ಮಿ ಯೋಜನೆ'ಯ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರಲಿದೆ ಎಂದು ಕಾಯುತ್ತಿದ್ದ ಕೋಟ್ಯಂತರ ಮಹಿಳೆಯರ ಪ್ರಶ್ನೆಗೆ ಇದೀಗ ಅಧಿಕೃತವಾಗಿ ಉತ್ತರ ಸಿಕ್ಕಿದೆ. ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನು ಕೇವಲ 4 ರಿಂದ 5 ದಿನಗಳಲ್ಲಿ ಹಾಗೂ ಏಪ್ರಿಲ್ ತಿಂಗಳ ಕಂತಿನ ಹಣ ಇನ್ನು 8 ರಿಂದ 10 ದಿನಗಳಲ್ಲಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದ್ದಾರೆ.
ಬೆಳಗಾವಿ ತಾಲೂಕಿನ ಬಾಕನೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು "ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯ ಹಣ ನಿಲ್ಲುವುದಿಲ್ಲ. ಆಡಳಿತಾತ್ಮಕ ಕಾರಣಗಳಿಂದ ಕೊಂಚ ವಿಳಂಬವಾಗಿದ್ದರೂ, ಮಾರ್ಚ್ ತಿಂಗಳ ಹಣ ಮುಂದಿನ 4 ರಿಂದ 5 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ಸೇರಲಿದೆ. ಇದು ಪಾವತಿಯಾದ ಬೆನ್ನಲ್ಲೇ, ಅಂದರೆ ಇಂದಿನಿಂದ 8-10 ದಿನಗಳ ಒಳಗೆ ಏಪ್ರಿಲ್ ತಿಂಗಳ ಮೊತ್ತವೂ ಜಮೆಯಾಗಲಿದೆ" ಎಂದು ವಿವರಿಸಿದರು.

ಇದೇ ವೇದಿಕೆಯಲ್ಲಿ ತಮ್ಮ ರಾಜಕೀಯ ನಡೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ವಿರೋಧ ಪಕ್ಷಗಳ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ನನಗೆ ಕೆಲಸ ಮಾಡುವುದು ಎಂದರೆ ಒಂದು ರೀತಿಯ ಹುಚ್ಚು. ಕೇವಲ ಅಧಿಕಾರದಲ್ಲಿ ಇದ್ದಾಗ ಮಾತ್ರವಲ್ಲ, 2013ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಾಗಲೂ ಸಹ ನಾನು ಧೃತಿಗೆಡಲಿಲ್ಲ. ಜನರ ಮಧ್ಯೆಯೇ ಇದ್ದು ನಿರಂತರವಾಗಿ ಕೆಲಸ ಮಾಡಿದ್ದೇನೆ. ಬೇರೆಯವರಂತೆ ಜನರ ಮುಂದೆ ಸುಖಾಸುಮ್ಮನೆ ನಾಟಕ ಮಾಡುವುದು ನನಗೆ ಗೊತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವುದೊಂದೇ ನನಗೆ ತಿಳಿದಿರುವ ವಿದ್ಯೆ" ಎಂದು ಮಾರ್ಮಿಕವಾಗಿ ನುಡಿದರು.
ಹಿಂದಿನ ಶಾಸಕರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಅವರು, "ಹಿಂದೆ ಇಲ್ಲಿಂದ ಆಯ್ಕೆಯಾದವರು ಕೇವಲ 'ಹಿಂದುತ್ವ, ಹಿಂದುತ್ವ' ಎಂದುಕೊಂಡು ಓಡಾಡಿದ್ದನ್ನು ಬಿಟ್ಟರೆ, ಕ್ಷೇತ್ರದ ಅಭಿವೃದ್ಧಿಗಾಗಿ ಮತ್ಯಾವುದೇ ಕೆಲಸ ಮಾಡಿಲ್ಲ. ಆದರೆ ನಾನು ಬರೀ ಮಾತಿನಲ್ಲಿ ಹೇಳುವುದಿಲ್ಲ, ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತಂದು ಜನರಿಗೆ ತೋರಿಸುತ್ತಿದ್ದೇನೆ. ಸಮಾಜಕ್ಕೆ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇನೆ" ಎಂದರು.
ಈ ಗೃಹಲಕ್ಷ್ಮಿ ಯೋಜನೆಯು ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದಾಗಿದ್ದು, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಆರ್ಥಿಕ ನೆರವು ನೀಡುತ್ತದೆ. ಹಣಕಾಸು ವರ್ಷಾಂತ್ಯದ ಕಾರಣಗಳಿಂದಾಗಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಕಂತುಗಳು ವಿಳಂಬವಾಗಿದ್ದವು. ಈ ವಿಳಂಬವು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಹಾಗೆಯೇ ಫಲಾನುಭವಿಗಳಲ್ಲಿ ಕೊಂಚ ಆತಂಕ ಮೂಡಿಸಿತ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ನಿಖರವಾದ ದಿನಾಂಕಗಳನ್ನು ಘೋಷಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.












Click it and Unblock the Notifications