ಮಂಡ್ಯದ ಮತ್ತಿತಾಳೇಶ್ವರ ಕೊಳದಲ್ಲಿ ಪೇದೆ ಸಾವು
ಮಂಡ್ಯ, ಜನವರಿ 12: ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ತೆರಳಿದ ಪೊಲೀಸ್ ಪೇದೆಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಕೊಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಮಂಡ್ಯದ ಮಳವಳ್ಳಿಯಲ್ಲಿ ನಡೆದಿದೆ.
ಮೂಲತಃ ಗುಂಡ್ಲುಪೇಟೆಯ ಕಬ್ಬಹಳ್ಳಿ ಗ್ರಾಮದ ನಿವಾಸಿ, ಬೇಗೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್(30) ಸಾವನ್ನಪ್ಪಿದ ದುರ್ದೈವಿ.
ಇವರು ರಜೆಪಡೆದು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಹೋಗಿ ಬರುವ ಆಲೋಚನೆ ಮಾಡಿದ್ದರು. ಅದರಂತೆ ಕುಟುಂಬದೊಂದಿಗೆ ಗುರುವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮತ್ತಿತಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು.

ಈ ವೇಳೆ ದೇವಸ್ಥಾನ ಬಳಿಯಿರುವ ಕೊಳದ ಬಳಿ ನಡೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಕೊಳಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಮೇಲೆತ್ತುವ ಪ್ರಯತ್ನ ಮಾಡಲಾಯಿತಾದರೂ ಅಷ್ಟರಲ್ಲೇ ಅವರು ಕೊಳದಲ್ಲಿದ್ದ ನೀರಿನಲ್ಲಿ ಮುಳುಗಿದ್ದರಿಂದ ಪ್ರಾಣಬಿಟ್ಟಿದ್ದರು.
ಚಂದ್ರಶೇಖರ್ 2009ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇತ್ತೀಚೆಗೆ ಬೇಗೂರಿಗೆ ವರ್ಗಾವಣೆಯಾಗಿದ್ದರು. ಮೃತರು ಪತ್ನಿ ಮತ್ತು ಪುತ್ರನನ್ನು ಆಗಲಿದ್ದಾರೆ.












Click it and Unblock the Notifications